ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಚಿಕ್ಕನಾಯಕನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಇತ್ತೀಚಿನ ಭಾರಿ ಮಳೆ ಹಾಗೂ ಬಿರುಗಾಳಿಯಿಂದ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಪ್ರಕೃತಿ ವಿಕೋಪದಿಂದ ಮಾನವ ಜೀವಹಾನಿ, ಬೆಳೆ ನಷ್ಟ ಹಾಗೂ ಮೂಲಸೌಕರ್ಯ ಹಾನಿಯ ಕುರಿತು ಸಮಗ್ರ ಮಾಹಿತಿ ಪಡೆದು ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣದ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಚಿಕ್ಕನಾಯಕನಹಳ್ಳಿ ಪಟ್ಟಣದ ನಿವಾಸಿ ಪುಟ್ಟಯ್ಯ (70 ವರ್ಷ) ಅವರು ಏಪ್ರಿಲ್ 28ರಂದು ಸಂಜೆ ತೋಟದಿಂದ ಮನೆಗೆ ತೆರಳುವ ವೇಳೆ ಆಕಸ್ಮಿಕ ಗಾಳಿ-ಮಳೆಯ ಪರಿಣಾಮ ಮರದ ಕೊಂಬೆ ತಲೆಯ ಮೇಲೆ ಬಿದ್ದು ಮೃತಪಟ್ಟ ಘಟನೆ ಹಿನ್ನೆಲೆ, ಜಿಲ್ಲಾಧಿಕಾರಿಗಳು ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸಿ ಸಾಂತ್ವನ ಹೇಳಿದರು.
ಈ ವೇಳೆ ತಹಶೀಲ್ದಾರ್, ಮುಖ್ಯಾಧಿಕಾರಿ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಮೃತರ ಕುಟುಂಬಕ್ಕೆ ತಕ್ಷಣ ಮರಣ ಪ್ರಮಾಣ ಪತ್ರ ವಿತರಿಸುವುದು, ಹಕ್ಕುಪತ್ರ ಸಂಬಂಧಿತ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವುದು ಹಾಗೂ ಅರ್ಹ ಪಿಂಚಣಿ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ವಿಳಂಬವಿಲ್ಲದೆ ಮಂಜೂರು ಮಾಡುವಂತೆ ನಿರ್ದೇಶನ ನೀಡಿದರು.
ಸರ್ಕಾರದಿಂದ ಲಭ್ಯವಿರುವ ಪರಿಹಾರ ಧನ ಮತ್ತು ಅಗತ್ಯ ನೆರವುಗಳನ್ನು ಶೀಘ್ರ ಕುಟುಂಬಕ್ಕೆ ತಲುಪಿಸಲು ಕ್ರಮವಹಿಸುವಂತೆ ಸೂಚಿಸಿದರು.
ತಿಪಟೂರು ತಾಲ್ಲೂಕಿನ ಹಟ್ಟ ಗ್ರಾಮದ ಸರ್ವೆ ನಂ. 97 ಪ್ರದೇಶಕ್ಕೆ ಭೇಟಿ ನೀಡಿ ಭಾರಿ ಮಳೆಯಿಂದ ಉಂಟಾದ ಬೆಳೆ ಹಾಗೂ ಭೂ ಹಾನಿಯನ್ನು ಪರಿಶೀಲಿಸಿದ ಅವರು, ರೈತರಿಗೆ ಸಂಭವಿಸಿದ ನಷ್ಟ, ಭೂಮಿಯ ಸ್ಥಿತಿ ಹಾಗೂ ಬೆಳೆ ಹಾನಿಯ ಕುರಿತು ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದು, ಸರ್ಕಾರದ ನಿಯಮಾನುಸಾರ ಭೂ ಆಧಾರಿತ ಮೌಲ್ಯಮಾಪನದಲ್ಲಿ ಶೇ. 33 ಕ್ಕಿಂತ ಹೆಚ್ಚು ಹಾನಿಗೊಳಗಾದ ರೈತರಿಗೆ ಪ್ರತಿ ಎಕರೆಗೆ 22,000 ರೂ. ಪರಿಹಾರ ಮಂಜೂರು ಮಾಡುವುದಾಗಿ ತಿಳಿಸಿದರು.
ಅರ್ಹ ರೈತರ ಸಂಪೂರ್ಣ ವಿವರಗಳನ್ನು ತ್ವರಿತವಾಗಿ ಸಂಗ್ರಹಿಸಿ ಪರಿಹಾರ ವಿತರಣೆಯಲ್ಲಿ ಯಾವುದೇ ವಿಳಂಬವಾಗದಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅದೇ ರೀತಿ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ವ್ಯಾಪ್ತಿಯ ಹಾಲುಗೊಣ ಗ್ರಾಮಕ್ಕೆ ಭೇಟಿ ನೀಡಿ ಗಾಳಿ–ಮಳೆಯಿಂದ ತೆಂಗು, ಬಾಳೆ ಹಾಗೂ ಅಡಿಕೆ ಬೆಳೆಗಳಿಗೆ ಉಂಟಾದ ಹಾನಿಯನ್ನು ಪರಿಶೀಲಿಸಿದರು. ಅನೇಕ ಮರಗಳು ಉರುಳಿ ಬೆಳೆ ನಷ್ಟವಾಗಿರುವುದು ಹಾಗೂ ಬೆಸ್ಕಾಂ ವಿದ್ಯುತ್ ಲೈನ್ಗಳ ಮೇಲೆ ಮರಗಳು ಮತ್ತು ಕೊಂಬೆಗಳು ಬಿದ್ದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳಿಗೆ ಬೆಳೆ ಹಾನಿಯ ಸಮಗ್ರ ದಾಖಲೆ ಸಿದ್ಧಪಡಿಸುವುದು, ಪ್ರತಿ ರೈತನ ನಷ್ಟವನ್ನು ನಿಖರವಾಗಿ ದಾಖಲಿಸುವುದು ಹಾಗೂ ತ್ವರಿತ ವರದಿ ಸಲ್ಲಿಸುವಂತೆ ಸೂಚಿಸಿದರಲ್ಲದೆ, ಜೊತೆಗೆ ಉರುಳಿದ ಮರಗಳು ಮತ್ತು ಕೊಂಬೆಗಳನ್ನು ತಕ್ಷಣ ತೆರವುಗೊಳಿಸಿ ಬೆಸ್ಕಾಂ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ವಿದ್ಯುತ್ ಸರಬರಾಜನ್ನು ಶೀಘ್ರ ಪುನಃ ಸ್ಥಾಪಿಸುವಂತೆ ನಿರ್ದೇಶನ ನೀಡಿದರು.
ಅರ್ಹ ರೈತರಿಗೆ ಸರ್ಕಾರದ ಮಾರ್ಗಸೂಚಿಗಳಂತೆ ಪರಿಹಾರ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಲು, ಹಾನಿ ಮೌಲ್ಯಮಾಪನ ಕಾರ್ಯಗಳನ್ನು ಆದ್ಯತೆಯಿಂದ ಪೂರ್ಣಗೊಳಿಸಲು ಹಾಗೂ ಎಲ್ಲಾ ವರದಿಗಳನ್ನು ಶೀಘ್ರ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಪರಿಶೀಲನಾ ಸಂದರ್ಭದಲ್ಲಿ ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್, ಚಿಕ್ಕನಾಯಕನಹಳ್ಳಿ ಮುಖ್ಯಾಧಿಕಾರಿ, ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕಿ ಶಾರದಮ್ಮ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


