ಬೆಂಗಳೂರು: ಎತ್ತಿನಹೊಳೆ ಯೋಜನೆ ಮೂಲಕ ಕುಡಿಯುವ ನೀರಿಗಾಗಿ ಶಿರಾ ವಿಧಾನಸಭಾ ಕ್ಷೇತ್ರದ ಕೆರೆಗಳನ್ನು ತುಂಬಿಸಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಕರ್ನಾಟಕ ರಾಜ್ಯದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಅವರು ವಿಧಾನಸೌಧದಲ್ಲಿ ಮಹತ್ವದ ಸಭೆ ನಡೆಸಿದರು .
ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಗಳಾದ ಸಂಜೀವ್ ರಾಜು, ಮೂಡಲ ಗಿರಿಯಪ್ಪ ಪ್ರಭಾಕರ್ ಸೇರಿದಂತೆ ಹಲವಾರು ಇಂಜಿನಿಯರ್ ಗಳು ಸಭೆಯಲ್ಲಿ ಭಾಗವಹಿಸಿದ್ದರು. EA Technologies ಮುಖ್ಯಸ್ಥ ರಂಗನಾಥ್ ಅವರು ಸಹ ಸಭೆಯಲ್ಲಿ ಭಾಗವಹಿಸಿದ್ದರು.
ಎತ್ತಿನಹೊಳೆ ಯೋಜನೆಯಲ್ಲಿ ಕುಡಿಯುವ ನೀರಿಗಾಗಿ ಪಾಯಿಂಟ್ 514 ಟಿಎಂಸಿ ನೀರು ಒದಗಿಸಲಾಗಿದೆ. ಈ ನೀರನ್ನು ಕೆರೆಗಳನ್ನು ತುಂಬಿಸುವ ಮೂಲಕ ಕುಡಿಯುವ ನೀರಿಗಾಗಿ ಬಳಸಲು ಯೋಜನೆ ರೂಪಿಸಬೇಕು ಹಾಗೂ ಇದಕ್ಕೆ ಅಗತ್ಯ ಹಣಕಾಸಿನ ನೆರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪಡೆಯಬೇಕು ಎಂದು ಟಿ.ಬಿ. ಜಯಚಂದ್ರ ಅವರು ಇದೇ ವೇಳೆ ತಿಳಿಸಿದರು.
ಈ ನಿಟ್ಟಿನಲ್ಲಿ ವಿಸ್ತೃತ ಯೋಜನಾ ವರದಿಯನ್ನು ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. EA Technologies ಮುಖ್ಯಸ್ಥ ರಾದ ರಂಗನಾಥ್ ಅವರು ಯೋಜನಾ ವರದಿ ಸಿದ್ಧಪಡಿಸಿ ಕೊಡುವುದಾಗಿ ಹೇಳಿದರು.
ಗುರುತ್ವಾಕರ್ಷಣೆಯ ಮೂಲಕ ನೈಸರ್ಗಿಕವಾಗಿ ಕೆರೆಗಳಿಗೆ ನೀರು ಹರಿಯುವಂತೆ ಯೋಜನೆ ಸಿದ್ಧಪಡಿಸುವಂತೆ ವಿಶೇಷವಾಗಿ ಹೇಳಿದರು. ರಾಷ್ಟ್ರೀಯ ಹೆದ್ದಾರಿ ಬಲಭಾಗದಲ್ಲಿ ಬರುವ ಎಲ್ಲಾ ಕೆರೆಗಳನ್ನು ತುಂಬಿಸಬೇಕು. ಆ ಮೂಲಕ ಜನ ಹಾಗೂ ಜಾನುವಾರುಗಳಿಗೆ ನೀರು ಒದಗಿಸಬೇಕು ಭವಿಷ್ಯದಲ್ಲಿ ಕೈಗಾರಿಕೆಗಳಿಗೆ ಸಹ ಸ್ವಲ್ಪ ಮಟ್ಟಿನ ನೀರು ಒದಗಿಸಲು ಯೋಜನೆ ರೂಪಿಸುವಂತೆ ಹೇಳಿದರು.
ಗುಮ್ಮನ ಹಳ್ಳಿ ,ಅಗ್ರಹಾರ, ತಾಳಗುಂದ, ಬೆಟ್ಟನ ಹಳ್ಳಿ, ಚಿನ್ನೇನಹಳ್ಳಿ, ಕಾಳೆನಹಳ್ಳಿ, ಬ್ರಹ್ಮಸಂದ್ರ, ಸಿಬಿ, ದಾಸರಹಳ್ಳಿ ಹೊಸ ಮಲ್ಲೇನಹಳ್ಳಿ, ಹುಲಿಕುಂಟೆ ಹೋಬಳಿಯ ಹಳ್ಳಿಗಳು, ದೊಡ್ಡ ಬಾಣಗೆರೆ ಚಿಕ್ಕಬಾಣಗೆರೆ ಸೇರಿದಂತೆ ಎಲ್ಲ ಕೆರೆಗಳನ್ನು ತುಂಬಿಸಲು ಸಮರ್ಪಕವಾದ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವಿಸ್ತೃತ ಯೋಜನೆ ಸಿದ್ಧಪಡಿಸಿದ ಮೇಲೆ ದೆಹಲಿಗೆ ತೆರಳಿ ಕೇಂದ್ರ ಜಲಶಕ್ತಿ ಹಾಗೂ ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಇಲಾಖೆಗಳ ಜೊತೆ ಮಾತನಾಡಿ ಅಗತ್ಯ ಹಣ ತರುವುದಾಗಿ ತಿಳಿಸಿದರು . ಕುಡಿಯುವ ನೀರು ಹಾಗೂ ಕೆರೆ ತುಂಬುವ ಯೋಜನೆಗಳಿಗೆ ಕೇಂದ್ರ ಸರ್ಕಾರ ಹೊಸ ಕಾರ್ಯಕ್ರಮಗಳನ್ನು ರೂಪಿಸಿದ್ದು ಆ ಯೋಜನೆಯಡಿ ಹಣ ತರುವುದಾಗಿ ತಿಳಿಸಿದರು. ಆದಷ್ಟು ಬೇಗ ಎತ್ತಿನಹೊಳೆ ಯೋಜನೆಯಲ್ಲಿ ತಮ್ಮ ಪಾಲಿನ ನೀರನ್ನು ಬಳಸಿಕೊಳ್ಳಬೇಕು . ಈ ಯೋಜನೆಗೆ ಅಗತ್ಯವಿರುವ ಹಣವನ್ನು ತಾವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕೊಡಿಸುವುದಾಗಿ ಇದೇ ವೇಳೆ ಜಯಚಂದ್ರ ಅವರು ತಿಳಿಸಿದರು.


