ತುಮಕೂರು: ಕೆರೆಯ ಮಣ್ಣನ್ನು ರೈತರು ಜಮೀನಿಗೆ ಬಳಸಿಕೊಳ್ಳಲು ಹಾಗೂ ಸಾರ್ವಜನಿಕ ಉದ್ದೇಶದ ಸರ್ಕಾರಿ ಯೋಜನೆಗಳಿಗೆ ಬಳಸಿಕೊಳ್ಳಲು ಅಡ್ಡಿಪಡಿಸುವಂತಿಲ್ಲ. ಸರ್ಕಾರದ ಆದೇಶವನ್ನು ಪಾಲಿಸಿ ಕೆರೆ ಮಣ್ಣು ಬಳಕೆಗೆ ಮೇ 21ರೊಳಗಾಗಿ ಅಗತ್ಯ ಮಾರ್ಗಸೂಚಿ ಹೊರಡಿಸುವಂತೆ ಕೇಂದ್ರ ರೈಲ್ವೆ, ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತಿಯಲ್ಲಿ ಶುಕ್ರವಾರ ಜರುಗಿದ ದಿಶಾ ಪ್ರಗತಿ ಪರಿಶೀಲನಾ ಸಭೆಯ ಆರಂಭದಲ್ಲಿ ಕೆರೆಗಳ ಮಣ್ಣು ಎತ್ತುವಳಿ ಸಂಬಂಧ ವಿಸ್ತೃತ ಚರ್ಚೆ ನಡೆಯಿತು. ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಸಿರಾ ಶಾಸಕ ಟಿ.ಬಿ.ಜಯಚಂದ್ರ ಅವರು ವಿಷಯ ಪ್ರಸ್ತಾಪಿಸಿ ರೈಲ್ವೆ ಯೋಜನೆಗೆ ಕೆರೆಯ ಅಂಗಳದಲ್ಲಿ ಮಣ್ಣು ತೆಗೆದುಕೊಂಡು ಹೋಗಿದ್ದಕ್ಕೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿರುವುದು ಸರಿಯಿಲ್ಲ ಎಂದರು. ಪೂರಕ ಧ್ವನಿಯೆತ್ತಿದ ಶಾಸಕರಾದ ಬಿ.ಸುರೇಶ್ ಗೌಡ ಗಣಿ ಭೂ ವಿಜ್ಞಾನ ಇಲಾಖೆಯವರು ರೈತರು ಕೃಷಿ ಕಾರ್ಯಕ್ಕೆ ಕೆರೆ ಹೂಳನ್ನು ಟ್ರ್ಯಾಕ್ಟರ್ನಲ್ಲಿ, ಲಾರಿಯಲ್ಲಿ ಸಾಗಿಸಲು ಸರ್ಕಾರವೇ ಅವಕಾಶ ಕಲ್ಪಿಸಿದೆ. ಆದರೆ ಗಣಿ ಇಲಾಖೆಯವರು ದಾರಿ ಮಧ್ಯೆ ತಡೆದು ರೈತರಿಗೆ ಅನಗತ್ಯ ಕಿರುಕುಳ ಕೊಡುತ್ತಿದ್ದಾರೆ. 50 ಸಾವಿರ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕೆಲವು ಕಡೆ ಠಾಣೆಗೆ ರೈತರ ಗಾಡಿಗಳನ್ನು ಬಿಡುತ್ತಿದ್ದಾರೆ. ಜೆಲ್ಲಿ ಕ್ರಷರ್ನವರ ಬಳಿ ವಸೂಲಿ ಮಾಡಿದಂತೆ ರೈತರಿಂದಲೂ ಸುಲಿಗೆ ಮಾಡುತ್ತಿದ್ದಾರೆ. ಕೆಳ ಹಂತದ ಪೊಲೀಸರು ಇದರಲ್ಲಿ ಶಾಮೀಲಾಗಿದ್ದಾರೆ ಎಂದು ನೇರ ಆರೋಪಮಾಡಿದರು. ಶಾಸಕರಾದ ಟಿಬಿಜೆ, ಎಂ.ಟಿ.ಕೃಷ್ಣಪ್ಪ ಸಹ ಧ್ವನಿಗೂಡಿಸಿ, ಕೆರೆ ಮಣ್ಣನ್ನು ಎತ್ತುವ ಸಂಬಂಧ ಸರ್ಕಾರದ ಆದೇಶವಿದೆ. ಇಂತಹ ಗೊಂದಲ, ಸಮಸ್ಯೆಯನ್ನು ತಪ್ಪಿಸಲು ತಹಸೀಲ್ದಾರ್ ಗಳ ನೇತೃತ್ವದಲ್ಲಿ ಅನುಮತಿ ಸಮಿತಿ ರಚಿಸಿ ಎಂದು ಸಲಹೆ ನೀಡಿದರು.
ದಿಶಾಸಮಿತಿ ಸಭೆಗೆ ಹೇಮಾವತಿ ನಾಲಾ ವಲಯದ ಎಕ್ಸಿಕ್ಯೂಟಿವ್ ಇಂಜಿನಿಯರ್, ಕೆಲವು ಇಇಗಳು ಸೇರಿ ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದು ತಮಗೂ ಪ್ರತಿ ಹಾಕುವಂತೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರಿಗೆ ನಿರ್ದೇಶಿಸಿದ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಕೆಲವು ಅಧಿಕಾರಿಗಳು ಅನಗತ್ಯ ಗೈರಾಗುತ್ತಿದ್ದಾರೆ. ರಾಜ್ಯದ ಮುಖ್ಯಕಾರ್ಯದರ್ಶಿಗಳೇ ದಿಶಾದಂತಹ ಮುಖ್ಯ ಸಭೆಗಳಿದ್ದಾಗ ಬೆಂಗಳೂರಿಗೆ ಯಾರನ್ನೂ ಕರೆಸಿಕೊಳ್ಳುವುದಿಲ್ಲ ಎನ್ನುತ್ತಾರೆ. ಆದರೆ ಇವರು ಸಿಎಸ್ ಹೆಸರೇಳಿ ಬೆಂಗಳೂರಿಗೆ ತೆರಳಿದ್ದೇವೆಂದು ಸುಳ್ಳುಹೇಳಿರುವುದು ನನ್ನ ಗಮನಕ್ಕೆ ಬಂದಿದೆ. ಮುಂದೆ ಇದು ಮರುಕಳಿಸಬಾರದು. ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕೆಂದು ನಿರ್ದೇಶಿಸಿದರು.
ಲ್ಲಾಧಿಕಾರಿಗಳಿಗೆ ಗಣಿ ಇಲಾಖೆ, ಸಣ್ಣನೀರಾವರಿ ಇಲಾಖೆ, ಸಿಇಒ, ಎಸ್ಪಿ ಅವರನ್ನು ಸೇರಿಸಿಕೊಂಡು ಮೇ 21 ರೊಳಗೆ ಸಭೆ ನಡೆಸಿ ಕೆರೆ ಮಣ್ಣೆತ್ತುವ ಸಂಬಂಧ ಸೂಕ್ತ ಮಾರ್ಗಸೂಚಿಯನ್ನು ಹೊರಡಿಸಿ ಎಲ್ಲಾ ಶಾಸಕರು, ಸಾರ್ವಜನಿಕರ ಗಮನಕ್ಕೆ ತನ್ನಿ ಎಂದರು. ಮೊದಲೇ ರೈತರು ಕಷ್ಟದಲ್ಲಿದ್ದು, ಅನಗತ್ಯ ಕಷ್ಟಗಳನ್ನು ಹೇರಬೇಡಿ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವೈಫಲ್ಯ ಚರ್ಚೆಗೆ ಸಭೆ: ಕುಡಿಯುವ ನೀರಿನ ಯೋಜನೆಗಳ ಬಗ್ಗೆಯೂ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ಶಾಸಕ ಬಿ.ಸುರೇಶ್ಗೌಡ ಅವರು ಜಿಲ್ಲೆಯಲ್ಲಿ ಬಹುತೇಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ನೀರನ್ನು ಪೂರೈಸದೆ ವಿಫಲತೆ ಹೊಂದಿದ್ದು, ನಿರ್ವಹಣೆಗೊಂದು ವಾರ್ಷಿಕ ಅನಗತ್ಯ ಹಣ ಪೋಲು ಮಾಡಲಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆ ಸೇರಿದಂತೆ ನೀರಾವರಿ ಯೋಜನೆಗಳ ಬಗ್ಗೆಯೂ ವಿಸ್ತೃತ ಚರ್ಚೆ ನಡೆಯಬೇಕು ಎಂದರು. ಇವುಗಳ ಮಾಹಿತಿ ಪಡೆದ ಸಚಿವರು ಹೇಮಾವತಿ, ಜೆಜೆಎಂಸೇರಿ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಸಂಬಂಧಿಸಿದಂತೆ ಮೇ 29 ರಂದು ಸಭೆ ನಡೆಸೋಣ. ಕುಡಿಯುವ ನೀರಿನ ಸಮಸ್ಯೆಯನ್ನು ಆದ್ಯತೆ ಮೇಲೆ ಬಗೆಹರಿಸೋಣವೆಂದರು.
ವಿಬಿಜಿ ರಾಮ್ಜೀ ಸಮರ್ಪಕ ಅನುಷ್ಠಾನಗೊಳಿಸಿ: ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆಗೆ ಪರ್ಯಾಯವಾಗಿ ಜಾರಿಗೆ ತಂದಿರುವ ಜೀ ರಾಮ್ ಜಿ ಯೋಜನೆಯು ಜುಲೈ 1 ರಿಂದ ಅಧಿಕೃತವಾಗಿ ಆರಂಭವಾಗಲಿದ್ದು, ಈ ಯೋಜನೆ ವ್ಯಾಪ್ತಿಗೆ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಉದ್ಯೋಗಾವಕಾಶಗಳು ಸಿಗಲಿವೆ. ಅಲ್ಲದೆ, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಈ ಯೋಜನೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲು ಅವಕಾಶವಿದ್ದು, ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಾಹಕ ಅಧಿಕಾರಿಗಳಿಗೆ ಸೂಚಿಸಿದರು. ಕೇಂದ್ರ ಪುರಸ್ಕೃತ ಯೋಜನೆಗಳಾದ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಕಾಮಗಾರಿಗಳು, ಕೃಷಿ ವಿಮಾ ಯೋಜನೆಗಳು, ತೋಟಗಾರಿಕೆ ಯೋಜನೆಗಳು ಸೇರಿದಂತೆ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸಚಿವ ವಿ. ಸೋಮಣ್ಣ ಸೂಚಿಸಿದರು.
ಸಭೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಸಿಇಒ ಬಿ.ವಿ. ಅಶ್ವಿಜ, ದಿಶಾ ಸಮಿತಿ ಸದಸ್ಯರಾದ ಶಿವಪ್ರಸಾದ್, ವೈ.ಎಚ್.ಹುಚ್ಚಯ್ಯ, ಶಂಕರಪ್ಪ, ಟಿ.ಆರ್. ನಾಗರಾಜ್, ನವ್ಯಬಾಬು, ಜಗದೀಶ್ ಇತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


