ತುಮಕೂರು: ಫಿಲ್ಟ್ರೇಷನ್ ಪರಿಹಾರ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಮ್ಯಾನ್+ಹುಮ್ಮೆಲ್ ತುಮಕೂರಿನಲ್ಲಿ ತನ್ನ ಹೊಸ ಅತ್ಯಾಧುನಿಕ ‘ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರ’ವನ್ನು ಆರಂಭಿಸಿದ್ದು, ಅಂತರಸನಹಳ್ಳಿಯ ಕೈಗಾರಿಕಾ ವಲಯದಲ್ಲಿನ ನೂತನ ನಾವೀನ್ಯತೆ ಕೇಂದ್ರಕ್ಕೆ ಗುರುವಾರ ನಾನ್ ಎಕ್ಸಿಕ್ಯೂಟಿವ್ ಅಧ್ಯಕ್ಷ ಥಾಮಸ್ ಫಿಷರ್ ಚಾಲನೆ ಕೊಟ್ಟರು.
ಮ್ಯಾನ್+ಹುಮ್ಮೆಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಸುದೀಶ್ ಕರಂಬಿಂಗಲ್ ಅವರು ಮಾತನಾಡಿ, ಜರ್ಮನಿಯ ಹೊರಗೆ ಮ್ಯಾನ್+ಹುಮ್ಮೆಲ್ ಕಂಪನಿಯ ಅತ್ಯಂತ ದೊಡ್ಡ ಅಭಿವೃದ್ಧಿ ಕೇಂದ್ರ ಇದಾಗಿದ್ದು, ಎಂಜಿನಿಯರಿಂಗ್, ನಾವೀನ್ಯತೆ ಮತ್ತು ಸುಧಾರಿತ ಫಿಲ್ಟ್ರೇಷನ್ ತಂತ್ರಜ್ಞಾನಗಳಿಗೆ ಭಾರತವನ್ನು ಒಂದು ನಿರ್ಣಾಯಕ ಕೇಂದ್ರವನ್ನಾಗಿ ಇದು ಬಲಪಡಿಸಿದೆ. ತುಮಕೂರು ಹೊಸ ಕೇಂದ್ರವು ಸುಧಾರಿತ ಸಂಶೋಧನಾ ಪ್ರಯೋಗಾಲಯಗಳು, ಪರೀಕ್ಷಾ ಮೂಲಸೌಕರ್ಯಗಳು, ಡಿಜಿಟಲ್ ಎಂಜಿನಿಯರಿಂಗ್ ಮತ್ತು ಡೇಟಾ ಅನಾಲಿಟಿಕ್ಸ್ ಎಲ್ಲವನ್ನೂ ಒಂದೇ ಸೂರಿನಡಿ ಸಂಯೋಜಿಸಿದೆ. ಈ ಕೇಂದ್ರವು ಭಾರತದ ಬಲಿಷ್ಠ ಎಂಜಿನಿಯರಿಂಗ್ ಇಕೋಸಿಸ್ಟಮ್ ಬಳಸಿಕೊಂಡು, ಮಾರುಕಟ್ಟೆಗೆ ಉತ್ಪನ್ನಗಳನ್ನು ವೇಗವಾಗಿ ತಲುಪಿಸಲು ಮತ್ತು ವಿಶ್ವಾದ್ಯಂತ ಇರುವ ಗ್ರಾಹಕರೊಂದಿಗೆ ಸಹಯೋಗ ಬಲಗೊಳಿಸಲು ಅನುವು ಮಾಡಿಕೊಡುತ್ತದೆ ಎಂದರು.
ತುಮಕೂರಿನ ‘ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆ ಕೇಂದ್ರ’ದೊಂದಿಗೆ, ಕಂಪನಿಯ ಒಟ್ಟಾರೆ ಹೂಡಿಕೆಯು 100 ಕೋಟಿಗೂ ಅಧಿಕವಾಗುವ ನಿರೀಕ್ಷೆಯಿದೆ. ಇದು ಭಾರತದ ಮೇಲಿನ ಕಂಪನಿಯ ದೀರ್ಘಕಾಲೀನ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಪ್ರಸ್ತುತ ಮ್ಯಾನ್+ಹುಮ್ಮೆಲ್ ಭಾರತದಲ್ಲಿ ಸುಮಾರು 1,250 ಉದ್ಯೋಗಿಗಳನ್ನು ಹೊಂದಿದ್ದು, ಮುಂದಿನ 12 ತಿಂಗಳುಗಳಲ್ಲಿ ಹೆಚ್ಚುವರಿ 300ರಿಂದ 400 ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಜ್ಜಾಗಿದೆ. ಇದು ದೇಶದಲ್ಲಿ ಕಂಪನಿಯ ಸ್ಥಳೀಯ ಉದ್ಯೋಗಿಗಳನ್ನು ಮತ್ತು ಬೆಳವಣಿಗೆಯ ಮಹತ್ವಾಕಾಂಕ್ಷೆಗಳನ್ನು ಮತ್ತಷ್ಟು ಬಲಪಡಿಸಲಿದೆ ಎಂದರು.
1941 ರಲ್ಲಿ ಸ್ಥಾಪನೆಯಾದ ಈ ಕುಟುಂಬ ಸ್ವಾಮ್ಯದ ಕಂಪನಿಯು ಜಗತ್ತಿನಾದ್ಯಂತ ಸ್ವಚ್ಛವಾದ ಸಂಚಾರ (ಚಲನೆ), ಸ್ವಚ್ಛವಾದ ಗಾಳಿ, ಸ್ವಚ್ಛವಾದ ನೀರು ಮತ್ತು ಸ್ವಚ್ಛವಾದ ಕೈಗಾರಿಕೆಗಳಿಗೆ ದಾರಿ ಮಾಡಿಕೊಡುತ್ತಿದೆ. ತನ್ನ ಪರಿಹಾರಗಳ ಮೂಲಕ, ಮ್ಯಾನ್+ಹುಮ್ಮೆಲ್ ಪರಿಸರವನ್ನು ರಕ್ಷಿಸುವಲ್ಲಿ ಮತ್ತು ಸೀಮಿತ ಸಂಪನ್ಮೂಲಗಳ ಸುಸ್ಥಿರ ಬಳಕೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 2025 ರಲ್ಲಿ ಕಂಪನಿಯು 1941ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ವಿಶ್ವಾದ್ಯಂತ 80ಕ್ಕೂ ಹೆಚ್ಚು ಸ್ಥಳಗಳಲ್ಲಿ ಸುಮಾರು 20,371 ಉದ್ಯೋಗಿಗಳಿಗೆ ಉದ್ಯೋಗಾವಕಾಶ ನೀಡಿದೆ ಎಂದು ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಸಂತೋಷ್ ಎ.ವಿ.ತಿಳಿಸಿದರು. ಹೆವಿ ಡ್ಯೂಟಿ ವಿಭಾಗದ ಅಧ್ಯಕ್ಷ ಮತ್ತು ಜನರಲ್ ಮ್ಯಾನೇಜರ್ ಹೆರಾಲ್ಡ್ ಸ್ಪೆತ್ ಉಪಸ್ಥಿತರಿದ್ದರು.
ಉತ್ಪನ್ನಗಳ ಲೈಫ್ಸೈಕಲ್ ಎಮಿಷನ್ ಕಡಿಮೆ ಮಾಡುವ ಗುರಿ
ಟ್ರಾನ್ಸ್ ಪೋರ್ಟೇಷನ್ ವಿಭಾಗದ ಅಧ್ಯಕ್ಷರಾದ ಹಸಿತ್ ಕೋರ್ ಮಾತನಾಡಿ, ಭಾರತವು ಎಂಜಿನಿಯರಿಂಗ್ ಪ್ರತಿಭೆ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿದೆ. ಹೀಗಾಗಿ ಜರ್ಮನಿಯ ಹೊರಗಿನ ನಮ್ಮ ಅತಿ ದೊಡ್ಡ ಅಭಿವೃದ್ಧಿ ಕೇಂದ್ರಕ್ಕೆ ಇದು ಸಹಜ ಆಯ್ಕೆಯಾಗಿದೆ. ತುಮಕೂರಿನ ಈ ಸೌಲಭ್ಯವು ಇಂಧನ-ದಕ್ಷತೆಯ ಫಿಲ್ಟ್ರೇಷನ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು, ಉತ್ಪನ್ನಗಳ ಲೈಫ್ಸೈಕಲ್ ಎಮಿಷನ್ ಕಡಿಮೆ ಮಾಡುವುದು ಮತ್ತು ಮರುಬಳಕೆ ಹಾಗೂ ಪರಿಸರಸ್ನೇಹಿ ಉತ್ಪನ್ನ ವಿನ್ಯಾಸ ಸೇರಿದಂತೆ ಸರ್ಕ್ಯುಲರ್ ಸೊಲ್ಯೂಷನ್ಸ್ ಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಗಮನ ಹರಿಸಲಿದೆ. ಈ ಕೇಂದ್ರವು ಗಾಳಿಯ ಗುಣಮಟ್ಟ ಸುಧಾರಣೆ, ನೀರಿನ ಶುದ್ಧೀಕರಣ, ಕೈಗಾರಿಕಾ ಮಾಲಿನ್ಯ ನಿಯಂತ್ರಣ ಮತ್ತು ಶುದ್ಧ ನೀರಿನ ಲಭ್ಯತೆಯಂತಹ ಪ್ರಮುಖ ಪರಿಸರ ಸವಾಲುಗಳನ್ನು ಎದುರಿಸುವಲ್ಲಿ ಕಂಪನಿಯ ಪ್ರಯತ್ನಗಳಿಗೆ ಬೆಂಬಲ ನೀಡಲಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


