ಕೊರಟಗೆರೆ: ವಯೋವೃದ್ಧರಿಗೆ 10 ಸಾವಿರ ರೂಪಾಯಿಯ ಆಸೆ ತೋರಿಸಿ, ಸುಮಾರು 5 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಘಟನೆ ಕೊರಟಗೆರೆ ಪಟ್ಟಣದ ದೊಡ್ಡಪೇಟೆ ಬಡಾವಣೆಯಲ್ಲಿ ನಡೆದಿದ್ದು, ಇದೀಗ ಒಡವೆಗಳನ್ನು ಕಳೆದುಕೊಂಡ ವೃದ್ಧರು ಕಂಗಾಲಾಗಿದ್ದಾರೆ.
ಕೊರಟಗೆರೆ ಪಟ್ಟಣದ ದೊಡ್ಡಪೇಟೆ ಬಡಾವಣೆಯ ಗಿರಿಜಮ್ಮ ರೇಣುಕಪ್ಪ ಎಂಬ ವೃದ್ಧ ದಂಪತಿಯ ಮನೆಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕಣ್ಣಿನ ಆಪರೇಶನ್ ಮಾಡಿಸಿದರೆ ಹತ್ತು ಸಾವಿರ ರೂಪಾಯಿ ಉಚಿತ ಹಣವನ್ನು ಕೊಡುತ್ತಾರೆ ಎಂದು ವೃದ್ಧರನ್ನು ನಂಬಿಸಿದ್ದಾನೆ. ಇವರ ಆಧಾರ್ ಕಾರ್ಡ್ ನಂಬರ್ ಪೆನ್ಷನ್ ಕ್ಲಿಪ್ ಪಡೆದುಕೊಂಡು ವೃದ್ಧರನ್ನು ನಂಬಿಸಿದ್ದಾನೆ.
ಇದಾದ ಬಳಿಕ ಅಜ್ಜಿಯನ್ನು ತನ್ನ ಬೈಕ್ ನಲ್ಲಿ ಕೂರಿಸಿಕೊಂಡು ಆಸ್ಪತ್ರೆಯ ಬಳಿಗೆ ಕರೆದುಕೊಂಡು ಹೋಗಿದ್ದು, ಆಸ್ಪತ್ರೆಯಲ್ಲಿ ಆಪರೇಷನ್ ಮಾಡುವಾಗ ಒಡವೆಯನ್ನು ಯಾರಾದರೂ ಕೊಂಡುಹೋಗುತ್ತಾರೆ. ನನ್ನ ಬಳಿಯಲ್ಲಿ ಕೊಡಿ ನಾನು ನೋಡಿಕೊಳ್ಳುತ್ತೇನೆ ಎಂದು ಅಜ್ಜಿಯನ್ನು ನಂಬಿಸಿದ್ದಾನೆ. ಈತನ ಮಾತು ನಂಬಿ ಅಜ್ಜಿ ತಮ್ಮ 5 ಲಕ್ಷ ರೂಪಾಯಿ ಬೆಲೆ ಬಾಳುವ ಒಡವೆಯನ್ನು ಕಳ್ಳನ ಕೈಗೆ ನೀಡಿದ್ದಾರೆ. ಈ ವೇಳೆ, ನೀವು ಆಸ್ಪತ್ರೆಯ ಒಳಗೆ ಹೋಗಿ ಕಾಯ್ತಾ ಇರಿ, ನಾನು ಈಗ ಬರುತ್ತೇನೆ ಎಂದು ಅಜ್ಜಿಯನ್ನು ಆಸ್ಪತ್ರೆಯೊಳಗೆ ಕಳುಹಿಸಿ ಕಳ್ಳ ಪರಾರಿಯಾಗಿದ್ದಾನೆ. ಆತ ವಾಪಸ್ ಬಾರದೇ ಇದ್ದಾಗ ಮೋಸ ಹೋಗಿರುವುದು ಅರಿವಿಗೆ ಬಂದಿದೆ.
ವಠಾರದ ಜನರ ಎದುರಲ್ಲೇ ಯುವಕ ಅಜ್ಜಿಯನ್ನು ಕರೆದುಕೊಂಡು ಹೋಗಿದ್ದಾನೆ. ದಂಪತಿಯ ದೂರದ ಸಂಬಂಧಿಕ ಎಂಬಂತೆ ವಠಾರದಲ್ಲಿ ಪೋಸು ನೀಡಿದ್ದ ಆರೋಪಿ ಸ್ಥಳೀಯರನ್ನೂ ನಂಬಿಸಿದ್ದ. ಹಾಡ ಹಗಲೇ ಇಂತಹದ್ದೊಂದು ಘಟನೆ ನಡೆದಿದ್ದು, ವೃದ್ಧರ ಭಾವನೆಗಳನ್ನು ದುರ್ಬಳಕೆ ಮಾಡಿಕೊಂಡು ಆರೋಪಿಯು ಈ ಕೃತ್ಯ ನಡೆಸಿದ್ದಾನೆ. ಆರೋಪಿಯು ಈ ಕೃತ್ಯ ನಡೆಸುವುದಕ್ಕೆ ಸಾಕಷ್ಟು ಸಮಯಗಳಿಂದ ಹೊಂಚು ಹಾಕಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ ಎನ್ನಲಾಗಿದೆ.
ಇಂತಹ ಸುಳ್ಳು ನೆಪಗಳನ್ನು ಒಡ್ಡಿ ಅಪರಿಚಿತರು ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಅವರ ಬಗ್ಗೆ ಎಚ್ಚರವಿರಲಿ . ಹಾಡಹಗಲಲ್ಲೇ ಇಂಥ ಘಟನೆ ನಡೆದಿರುವುದು ಇದೇ ಮೊದಲೇನಲ್ಲ ಈ ಹಿಂದೆಯೂ ಅನೇಕ ಮನೆಗಳಲ್ಲಿ ಕಳ್ಳತನವಾಗಿದೆ. ಇಂತಹ ಕಳ್ಳರನ್ನು ಕೂಡಲೇ ಬಂಧಿಸಿ ಸಾರ್ವಜನಿಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಜನರು ಎಲ್ಲಿಯವರೆಗೂ ಮೋಸಹೋಗುತ್ತಾರೊ ಅಲ್ಲಿವರಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ ಇಂತಹ ಅಪರಿಚಿತರು ನೀಡುವ ಹಣದ ಆಸೆಗೆ ಮರುಳಾಗಿ ನಿಮ್ಮಲ್ಲಿರುವ ಹಣ, ನೆಮ್ಮದಿಯನ್ನು ಕಳೆದುಕೊಳ್ಳಬೇಡಿ. ಪೊಲೀಸರು ಅವರ ಕರ್ತವ್ಯ ಮಾಡುತ್ತಾರೆ. ಆದರೆ ಸಮಾಜ ಜಾಗೃತವಾಗಿದ್ದರೆ ಮಾತ್ರವೇ, ಅಪರಾಧ ಪ್ರಕರಣಗಳು ನಡೆಯದಂತೆ ತಡೆಯಬಹುದಾಗಿದೆ.
ಮೈಮೇಲೆ ಒಡವೆಗಳನ್ನು ಹಾಕಿಕೊಂಡು ಓಡಾಡುವ ವೇಳೆ ನಿಮ್ಮನ್ನು ಸಾಕಷ್ಟು ಸಂಖ್ಯೆಯ ಜನರು ಗಮನಿಸುತ್ತಿರುತ್ತಾರೆ. ಅದರಲ್ಲಿ ಕಳ್ಳರು ಕೂಡ ಇರಬಹುದು ಎನ್ನುವ ಪ್ರಜ್ಞೆ ಸದಾ ಇರಲಿ. ಕುಟುಂಬದ ಸಮಸ್ಯೆ ಗಳಿಗೆಂದು ಒಡವೆ ಮಾಡಿಸಿ ಇಂತಹ ಕಳ್ಳರಿಗೆ ಆಹಾರವಾಗದಿರಲಿ. ಸಾಧ್ಯವಾದರೆ ನಿಮ್ಮ ಒಡವೆ ಹಣವನ್ನು ಬ್ಯಾಂಕ್ ನಲ್ಲಿ ಭದ್ರವಾಗಿ ಇಡುವುದೇ ಉತ್ತಮ. ಸದಾ ಜಾಗೃತವಾಗಿರಿ, ಎಚ್ಚರವಾಗಿರಿ.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB