ತುಮಕೂರು: ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮ ದಿನಾಚರಣೆಯನ್ನು ವಿಭಿನ್ನವಾಗಿ ಆಚರಣೆ ಮಾಡಲಾಗಿದ್ದು ತುಮಕೂರಿನ ಇಂದಿರಾ ಕ್ಯಾಂಟೀನ್ನಲ್ಲಿ ಜನರಿಗೆ ಹೋಳಿಗೆ ಊಟ ಹಾಕಲಾಯಿತು.
ದೇಶದ ಮೊದಲ ಮಹಿಳಾ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರು ಜನ್ಮ ದಿನವನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ರಾಜಣ್ಣ ಅವರ ನೇತೃತ್ವದಲ್ಲಿ ನಗರದ ಪಾಲಿಕೆ ಆವರಣದಲ್ಲಿರುವ ಇಂದಿರಾ ಕ್ಯಾಟೀನ್ನಲ್ಲಿ ಆಚರಿಸಲಾಯಿತು.
ದಿ.ಇಂದಿರಾಗಾAಧಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ,ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರು,ಕಚೇರಿ ಕಾರ್ಯಕ್ರಮಕ್ಕೆ ಬದಲಾಗಿ,ಸಾವಿರಾರು ಬಡ ಜನರ ಹೊಟ್ಟೆ ತುಂಬಿಸುವ ಇಂದಿರಾ ಕ್ಯಾಟೀನ್ ಬಳಿ ಕಾರ್ಯಕ್ರಮ ಆಯೋಜಿಸಿ,ಇಂದು ಊಟಕ್ಕೆ ಬರುವ ಎಲ್ಲರಿಗೂ ಹೊಳಿಗೆ ಊಟದ ವ್ಯವಸ್ಥೆ ಮಾಡಿ,ಕಾಂಗ್ರೆಸ್ ಪಕ್ಷ ಎಂದಿಗೂ ಬಡವರ ಪರ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ ಎಂದರು.
ಮಹಿಳೆ ಎಂದಿಗೂ ಅಬಲೆಯಲ್ಲ.ಸಬಲೆ, ತೊಟ್ಟಿಲು ತೂಗುವ ಕೈ ದೇಶವನ್ನು ಆಳಬಲ್ಲದು ಎಂಬುದನ್ನು ಸುಮಾರು ೧೬ಕ್ಕೂ ಹೆಚ್ಚು ವರ್ಷಗಳ ಕಾಲ ಈ ದೇಶದ ಪ್ರಧಾನಿಯಾಗಿ,ಎರಡು ಯುದ್ದಗಳನ್ನು ನಡೆಸಿ,ಅವುಗಳಲ್ಲಿ ಜಯಗಳಿಸುವ ಮೂಲಕ ಇಡೀ ವಿಶ್ವಕ್ಕೆ ಮಹಿಳಾ ಶಕ್ತಿಯನ್ನು ಪರಿಚಿಯಿಸಿದವರು ಶ್ರೀಮತಿ ಇಂದಿರಾಗಾಂಧಿ,ಉಕ್ಕಿನ ಮಹಿಳೆ ಎಂದು ವಿರೋಧಪಕ್ಷ ಗಳಿಂದಲೇ ಕರೆಯಿಸಿಕೊಂಡ ಇಂದಿರಾಗಾAಧಿಯವರನ್ನು ಸ್ಪೂರ್ತಿಯಾಗಿಟ್ಟುಕೊಂಡು ಮಹಿಳಾ ಕಾಂಗ್ರೆಸ್ ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಮುರುಳೀಧರ ಹಾಲಪ್ಪ ಸಲಹೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ,ಈ ದೇಶದಲ್ಲಿ ಬಡವರು,ದೀನ ದಲಿತರು,ಅಸ್ಪೃಷ್ಯರ ಪರವಾಗಿ ಕಾನೂನುಗಳು ರಚನೆಯಾಗಿದ್ದರೆ ಅದು ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಮಾತ್ರ.ಉಳುವವನೇ ಭೂಮಿಯ ಒಡೆಯ,೨೦ ಅಂಶಗಳ ಕಾರ್ಯಕ್ರಮ,ವಿಧವಾ ವೇತನ,ವಯೋವೃದ್ದರಿಗೆ ಮಾಶಾಸನ,ಅನ್ನಭಾಗ್ಯ, ಕ್ಷೀರಭಾಗ್ಯ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಕಾಂಗ್ರೆಸ್ ತಂದಿದೆ.ಆದರೆ ಅವುಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವಲ್ಲಿ ಇಂದಿಗೂ ಕಾಂಗ್ರೆಸ್ ಕಾರ್ಯಕರ್ತರು ಎಡವುತಿದ್ದಾರೆ.ಆದರೆ ಏನು ಮಾಡದ ಬಿಜೆಪಿ ಧರ್ಮ,ಜಾತಿ, ವರ್ಗಗಳ ಹೆಸರಿನಲ್ಲಿ ಜನರನ್ನು ಕೋಮು ದಳ್ಳುರಿ ಉಂಟು ಮಾಡಿ,ದೇಶವನ್ನು ಮತ್ತಷ್ಟು ಕತ್ತಲೆಯ ಕೂಪಕ್ಕೆ ತಳ್ಳಲು ಹೊರಟಿದೆ.ಚುನಾವಣೆ ಸಂದರ್ಭದಲ್ಲಿಯಾದರೂ ನಾವು ಕಾಂಗ್ರೆಸ್ ಕಾರ್ಯಕ್ರಮಗಳು ಯಾವುವು,ಅವುಗಳ ಉಪಯೋಗವೇನು ಎಂಬುದನ್ನು ಜನತೆಯ ಮುಂದಿಡಿದ್ದರೆ ಪಕ್ಷವನ್ನು ಕಟ್ಟಲು ಸಾಧ್ಯವಿಲ್ಲ.ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಎಚ್ಚೆತ್ತುಕೊಳ್ಳಬೇಕು. ಅದರಲ್ಲಿಯೂ ಮಹಿಳಾ ಕಾರ್ಯಕರ್ತರು ಪದಾಧಿಕಾರಿಗಳು, ಗೃಹಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ ಯೋಜನೆಗಳನ್ನು ಜನರಿಗೆ ಮನವರಿಗೆ ಮಾಡಿಕೊಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾರಾಜಣ್ಣ ಮಾತನಾಡಿ, ೨೦೧೩ರಲ್ಲಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಬಡವರಿಗಾಗಿ ಇಂದಿರಾ ಕ್ಯಾಂಟೀನ್ ತೆರೆದು ಅತಿ ಕಡಿಮೆ ದರದಲ್ಲಿ ಬಡವರಿಗೆ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ದೊರೆಯುವಂತೆ ಮಾಡಿದ್ದರು. ಇದೇ ರೀತಿಯ ಕ್ಯಾಂಟೀನ್ಗಳು ಎಲ್ಲಾ ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲಿಯೂ ತೆರೆದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮುಖಂಡರಾದ ವಸುಂಧರ, ಸೌಭಾಗ್ಯ, ಸವಿತಾ, ನಾಗಮಣಿ, ಯಶೋಧ, ಹನುಮಕ್ಕ, ಮಂಜಮ್ಮ, ಪಾರ್ವತಮ್ಮ, ವಿಜಯ. ಯಶೋಧ, ಮಂಜುಳ ಸೇರಿದಂತೆ ಹಲವರು ಭಾಗವಹಿಸಿದ್ದರು.ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ಇಂದು ಇಂದಿರಾ ಕ್ಯಾಟೀನ್ನಲ್ಲಿ ಊಟ ಮಾಡುವ ಎಲ್ಲರಿಗೂ ಹೊಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.