ದೇಗುಲದ ಪ್ರಸಾದ ಸಿಕ್ಕಿದ್ರೆ ಸಾಕು, ದೇವರ ಹೆಸರು ಹೇಳಿ ಪ್ರಸಾದ ಸೇವಿಸುತ್ತೇವೆ. ಇನ್ನೂ ಕೆಲವರು ಪ್ರಸಾದ ಸ್ವೀಕಾರ ಮಾಡದೇ ಬರೋದೇ ಇಲ್ಲ.. ದೇವರ ಪ್ರಸಾದವನ್ನು ಸ್ವಲ್ಪವಾದರೂ ತಿಂದ್ರೆನೆ ಕೆಲವರಿಗೆ ಸಮಾಧಾನ. ಹೀಗೆ ಇನ್ನೇನು ದೇವರ ಪ್ರಸಾದ ಬಾಯಿಗಿಡಬೇಕು ಅನ್ನುವಷ್ಟರಲ್ಲಿ ವ್ಯಕ್ತಿಯೊಬ್ಬರಿಗೆ ಸತ್ತ ಇಲ್ಲಿ ಪತ್ತೆಯಾಗಿದೆ ಎನ್ನಲಾದ ಘಟನೆ ಬಗ್ಗೆ ತೆಲಂಗಾಣದಿಂದ ವರದಿಯಾಗಿದೆ.
ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಂಚಲನ ಸೃಷ್ಟಿಸಿದೆ. ತೆಲಂಗಾಣದ ಯಾದಾದ್ರಿಯಲ್ಲಿ ಭಕ್ತರಿಗೆ ನೀಡಿದ ಪ್ರಸಾದದಲ್ಲಿ ಸತ್ತ ಇಲ್ಲಿ ಪತ್ತೆಯಾಗಿದೆ. ಆದರೆ ದೇಗುಲ ಸಮಿತಿ ಈ ಆರೋಪವನ್ನು ನಿರಾಕರಿಸಿದ್ದು, ವೀಡಿಯೋದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಯಾರೋ ತೆಲಂಗಾಣದ ಪ್ರಸಿದ್ಧ ತೀರ್ಥಕ್ಷೇತ್ರ ಯಾದಾದ್ರಿ ದೇಗುಲದಲ್ಲಿ ಪ್ರಸಾದವಾಗಿ ನೀಡಿದ ಪುಳಿಯೊಗ್ಗರೆಯಲ್ಲಿ ಇಲಿ ಇತ್ತು ಎಂದು ಬರೆದು ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಇಲಾಖೆಯ ಕಮೀಷನರ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ಘಟನೆಯನ್ನು ಖಂಡಿಸುವುದಾಗಿ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾವು ವಿಚಾರಣೆ ನಡೆಸಿದ್ದು, ಈ ವೀಡಿಯೋದಲ್ಲಿರುವ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯವಿಲ್ಲ, ಈ ವಿಚಾರಕ್ಕೆ ಸಂಬಂಧಿಸಿದಂತೆ ನಾವು ದೇಗುಲದ ಆಡಳಿತ ಮಂಡಳಿಯನ್ನು ಸಂಪರ್ಕಿಸಿದ್ದೇವೆ. ಅಲ್ಲಿ ಯಾವುದೇ ಭಕ್ತರು ದೂರು ನೀಡಿಲ್ಲ, ದೇಗುಲದ ಸುತ್ತಮುತ್ತಲ ವಾತಾವರಣವೂ ಸ್ವಚ್ಛತೆಯಿಂದ ಕೂಡಿದೆ, ಜೊತೆಗೆ ಪ್ರಸಾದವನ್ನು ತಯಾರು ಮಾಡುವ ಪ್ರದೇಶವೂ ಸ್ವಚ್ಛತೆಯಿಂದ ಇದ್ದು ಬಹಳ ಶುದ್ಧತೆಯಿಂದ ಮಾಡಿದ್ದಾರೆ ಎಂದಿದ್ದಾರೆ.
ಕೆಲವು ದುರುದ್ದೇಶ ಪೂರಿತ ಜನರು ಉದ್ದೇಶಪೂರ್ವಕವಾಗಿ ಹೀಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾದ ಈ ವೀಡಿಯೋ ಬಗ್ಗೆ ದೇಗುಲ ಆಡಳಿತ ಸಿಬ್ಬಂದಿ ಪರಿಶೀಲನೆ ಮಾಡುತ್ತಿದ್ದಾರೆ ಎಂದು ಕಮೀಷನರ್ ಮಾಹಿತಿ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


