ಚಾಮರಾಜಪೇಟೆ ಆಟದ ಮೈದಾನ ಭೂ ವಿವಾದ ಹಿನ್ನೆಲೆಯಲ್ಲಿ ಕರೆ ನೀಡಿದ್ದ ಬಂದ್ ಯಶಸ್ವಿಯಾಗಿದ್ದೇ ಅದೇ ಉತ್ಸಾಹದಲ್ಲಿ ಇದೀಗ ಮುಂದುವರದ ಭಾಗವಾಗಿ ಮತ್ತೊಂದು ಹೋರಾಟಕ್ಕೆ ನಾಗರಿಕ ಒಕ್ಕೂಟ ವೇದಿಕೆ ಮುಂದಾಗಿದೆ. ಈ ಬಾರಿ ಸ್ಥಳೀಯ ಸಂಸದ ಪಿ.ಸಿ ಮೋಹನ್ ಕಣಕ್ಕಿಳಿದಿದ್ದು, ಹೋರಾಟಗಾರರಿಗೆ ಆನೆ ಬಲ ಬಂದಾಗಿದೆ.
ಕಳೆದೊಂದು ತಿಂಗಳಿನಿಂದ ಚಾಮರಾಜಪೇಟೆ ಈದ್ಗಾ ಮೈದಾನ ಭೂ ಮಾಲಿಕತ್ವ ವಿವಾದ ಚರ್ಚೆಯಲ್ಲಿದೆ. ಸದ್ಯ ಈ ಮೈದಾನ ಯಾರಿಗೆ ಸೇರಿದ್ದು ಎಂಬ ಕುರಿತು ಬಿಬಿಎಂಪಿ ವರ್ಸಸ್ ವಕ್ಫ್ ಬೋರ್ಡ್ ದಾಖಲೆಗಳ ಪರಿಶೀಲನೆ ಮುಂದುವರೆದಿದೆ. ಇದೀಗ ಈ ಮೈದಾನ ರಾಜಕೀಯ ತಿರುವು ಪಡೆದಿದೆ. ಕೆಲ ದಿನಗಳ ಹಿಂದೆ ತನ್ನ ಬೆಂಬಲಿಗರ ಸಭೆ ಕರೆದ ಸ್ಥಳೀಯ ಜಮೀರ್ ಅಹ್ಮದ್ ಟಾಂಗ್ ಕೊಡುವಂತೆ ಇಂದು ನಾಗರಿಕ ಒಕ್ಕೂಟ ವೇದಿಕೆ ಜೊತೆ ಬಿಜೆಪಿ ಸಂಸದ ಪಿ.ಸಿ ಮೋಹನ್ ಕಾಣಿಸಿಕೊಂಡಿದ್ದಾರೆ. ಇಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಭೇಟಿ ಮಾಡಿ ಮೈದಾನ ಕುರಿತು ಪಿಸಿ ಮೋಹನ್ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು.
ಸಂಸದ ಪಿ.ಸಿ ಮೋಹನ್ ಮನವಿ ಪತ್ರದಲ್ಲೇನಿದೆ..?
– ಚಾಮರಾಜಪೇಟೆ ಮೈದಾನವನ್ನು ಮರು ನಾಮಕರಣ ಮಾಡಬೇಕು.
– ಜಯಚಾಮರಾಜೇಂದ್ರ ಒಡೆಯರ್ ಹೆಸರು ಆಟದ ಮೈದಾನಕ್ಕೆ ನಾಮಕರಣವಾಗಲಿ.
– ಚಾಮರಾಜಪೇಟೆ ಮೈದಾನಕ್ಕೆ ಕುರಿ ಮೈದಾನ, ಎಮ್ಮೆ ಮೈದಾನ ,ಈದ್ಗಾ ಮೈದಾನ ಅಂತ ಎಲ್ಲಾ ಹೆಸರಿದೆ.
– ಬಿಬಿಎಂಪಿ ವತಿಯಿಂದ ಒಂದು ಅಧಿಕೃತ ಹೆಸರಿಡಬೇಕು.
– ರಾಷ್ಟ್ರೀಯ ಹಬ್ಬ, ಧ್ವಜಾರೋಹಣ ಮಾಡಬೇಕು.
– ಗಣೇಶ ಹಬ್ಬ , ಶಿವರಾತ್ರಿ ಹಬ್ಬ , ದಸರಾ ಆಚರಣೆ ಮಾಡಲು ಅವಕಾಶ ಕಲ್ಪಿಸಬೇಕು.
ಇನ್ನು ಜು.12ರ ಚಾಮರಾಜಪೇಟೆ ಬಂದ್ ಯಶಸ್ವಿ ಹಿನ್ನೆಲೆ ಚಾಮರಾಜಪೇಟೆಯ ಈದ್ಗಾ ಮೈದಾನ ಆಟದ ಮೈದಾನವಾಗಿಯೇ ಉಳಿಯಬೇಕೆಂದು ಒತ್ತಾಯಿಸಿ ಚಾಮರಾಜಪೇಟೆ ನಾಗರಿಕರ ವೇದಿಕೆ ವತಿಯಿಂದ ಬಿಬಿಎಂಪಿ ಕಮಿಷನರ್ ತುಷಾರ್ ಗಿರಿ ನಾಥ್ ಭೇಟಿ ಮಾಡಿ ಮನವಿ ಮಾಡಿದರು. ಚಾಮರಾಜಪೇಟೆ ಮೈದಾನವನ್ನು ಜಯಚಾಮರಾಜೇಂದ್ರ ಒಡೆಯರ್ ಹೆಸರು ನಾಮಕರಣ ಮಾಡುವಂತೆ ಮನವಿ ಮಾಡಿದ್ದಾರೆ.ಆ ಬಗ್ಗೆ ಸರ್ಕಾರವೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಬಿಬಿಎಂಪಿ ಕಮಿಷಿನರ್ ತುಷಾರ್ ಗಿರಿನಾಥ್ ತಿಳಿಸಿದರು.
ದಿನೇ ದಿನೇ ಈದ್ಗಾ ಮೈದಾನ ವಿವಾದ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ತಿದೆ. ಚಾಮರಾಜಪೇಟೆ ನಾಗರಿಕ ಹೋರಾಟ ಇದೀಗ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತೋ, ವಿವಾದದ ಸುಳಿಯಲ್ಲಿರುವ ಕೋಟ್ಯಾನು ಕೋಟಿ ಬೆಲೆ ಬಾಳುವ ಈ ಮೈದಾನ ಯಾರ ಪಾಲಾಗುತ್ತೋ ಕಾದು ನೋಡಬೇಕಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy