ಕೋಲಾರ: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಬಂದ ಆರು ಮಂದಿ ಡಕಾಯಿತರು ಎಪಿಎಂಸಿ ಮಾಜಿ ಅಧ್ಯಕ್ಷರ ಮನೆಗೆ ನುಗ್ಗಿ ಪಿಸ್ತೂಲು, ಮಾರಕಾಸ್ತ್ರ ತೋರಿಸಿ ಬೆದರಿಸಿ 25 ಲಕ್ಷ ನಗದೂ ಸೇರಿದಂತೆ 45 ಲಕ್ಷ ಮೌಲ್ಯದ 1 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಕೋಲಾರದ ಸಿ.ಬೈರೇಗೌಡನಗರ(ಬೆಮೆಲ್ ಲೇಔಟ್)ದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್ ಅವರ ಮನೆಯಲ್ಲಿ ಈ ಡಕಾಯಿತಿ ನಡೆದಿದೆ. ಎರಡು ಅಂತಸ್ತಿನ ಮನೆಯ ಮೊದಲನೆ ಮಹಡಿಯಲ್ಲಿ ಪತ್ನಿ, ಮಗನೊಂದಿಗೆ ರಮೇಶ್ ವಾಸವಾಗಿದ್ದಾರೆ. ಬೆಳಗ್ಗೆ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ರಮೇಶ್ ಅವರು ರಾತ್ರಿ 7.30ರಲ್ಲಿ ಮನೆಗೆ ಬಂದಿದ್ದಾರೆ. 8 ಗಂಟೆ ಸುಮಾರಿನಲ್ಲಿ ಇನೋವಾ ಕಾರಿನಲ್ಲಿ ಬಂದ ಆರು ಮಂದಿ ಡಕಾಯಿತರು ರಮೇಶ್ ಅವರ ಮನೆ ಬಾಗಿಲು ತಟ್ಟಿದ್ದಾರೆ. ಒಳಗಿನಿಂದಲೇ ಯಾರೆಂದು ವಿಚಾರಿಸಿದಾಗ, ತಾವು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ನಿಮ್ಮ ಮನೆ ತಪಾಸಣೆ ಮಾಡಬೇಕೆಂದು ಹೇಳಿದ್ದಾರೆ.
ರಮೇಶ್ ಅವರ ಪತ್ನಿ ಅನುಮಾನಗೊಂಡು ಬಾಗಿಲು ತೆಗೆಯಬೇಡಿ, ಪೊಲೀಸರಿಗೆ ಮೊದಲು ಮಾಹಿತಿ ನೀಡಿ ಎಂದು ಹೇಳಿದರೂ, ಕೇಳದೆ ರಮೇಶ್ ಅವರು ಬಾಗಿಲು ತೆಗೆದಿದ್ದಾರೆ. ಏಕಾಏಕಿ ಒಳಗೆ ನುಗ್ಗಿದ ಆರು ಮಂದಿ ಡಕಾಯಿತರು ಬಾಗಿಲು ಚಿಲಕ ಹಾಕಿ ಪಿಸ್ತೂಲು, ಚಾಕು ತೋರಿಸಿ ಕಿರುಚಾಡದಂತೆ ಬೆದರಿಸಿದ್ದಾರೆ. ಆರೂ ಮಂದಿ ಬಳಿಯೂ ಪಿಸ್ತೂಲ್ ಇರುವುದನ್ನು ಕಂಡು ರಮೇಶ್ ದಂಪತಿ ಮತ್ತು ಮಗ ಗಾಬರಿಗೊಂಡರು. ನಂತರ ಮನೆಯನ್ನೆಲ್ಲಾ ಜಾಲಾಡಿ ಬೀರುವಿನಲ್ಲಿದ್ದ ಬರೋಬ್ಬರಿ 25 ಲಕ್ಷ ಹಣ, ಒಂದು ಕೆಜಿ ಚಿನ್ನಾಭರಣ ದೋಚಿಕೊಂಡು 9.15ರ ವೇಳೆಗೆ ಬಂದಿದ್ದ ಕಾರಿನಲ್ಲಿ ಪರಾರಿಯಾಗಿದ್ದಾರೆ.
ತಕ್ಷಣ ರಮೇಶ್ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಎಸ್ ಪಿ ದೇವರಾಜ್, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಡಕಾಯಿತರ ಪತ್ತೆಗೆ ಶೋಧ ಕೈಗೊಂಡಿದ್ದಾರೆ.ನಗರದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಕಡಿಮೆಯಾಗಿದ್ದವು. ಇದೀಗ ಮತ್ತೆ ಪ್ರಾರಂಭವಾದಂತೆ ಕಾಣುತ್ತಿದ್ದು, ಗಸ್ತು ಹೆಚ್ಚಿಸುವ ಮೂಲಕ ಪ್ರಾರಂಭದಲ್ಲೇ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಅಪರಾಧ ಪ್ರಕರಣಗಳನ್ನು ತಡೆಗಟ್ಟಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB