ಸಾಮಾನ್ಯವಾಗಿ ದೊಡ್ಡ ದೊಡ್ಡ ಅಂಗಡಿಗಳು, ಸ್ಥಿತಿವಂತರ ಮನೆಯಲ್ಲಿ ಕಳ್ಳತನ ಆಗುವ ಘಟನೆಗಳ ಬಗ್ಗೆ ನಿತ್ಯ ಕೇಳುತ್ತೇವೆ. ಆದರೆ, ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ವಿಚಿತ್ರ ಕಳ್ಳತನದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಳ್ಳತನಕ್ಕಾಗಿ ಬಂದ ಕಳ್ಳನಿಗೆ ಯಾವುದೇ ಬೆಲೆ ಬಾಳುವ ವಸ್ತು ಸಿಗದಿದ್ದಾಗ ಆತ ಮಾಡಿದ್ದೇನು ಎಂದು ತಿಳಿದರೆ ನೀವು ಆಚ್ಚರಿ ಪಡಬಹುದು. ಜೊತೆಗೆ ಇವನೆಂತ ಆಸಾಮಿ ಎಂದೂ ಅನಿಸಬಹುದು.
ವಾಸ್ತವವಾಗಿ, ಇಲ್ಲೊಬ್ಬ ಕಳ್ಳ ಅಂಗನವಾಡಿಯಲ್ಲಿ ಕನ್ನ ಹಾಕಲು ಯೋಜನೆ (Robbery In Anganwadi) ರೂಪಿಸಿದ್ದ. ಕಳ್ಳತನಕ್ಕೆಂದು ಬಂದಿದ್ದ ಕಳ್ಳನಿಗೆ ಅಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಗದ ಕಾರಣ ಅಲ್ಲಿದ್ದ ಪದಾರ್ಥದಲ್ಲೆ ಅಡುಗೆ ಮಾಡಿ ತಿಂದು ಹೋಗಿದ್ದಾನೆ. ಹೋಗುವ ಮುನ್ನ ಅಲ್ಲಿದ್ದ ಪುಸ್ತಕದಲ್ಲಿ ಮೂರು ಪುಟಗಳ ಪತ್ರ ಬರೆದು, ತನ್ನ ಜೀವನದ ಪ್ರಮುಖ ಘಟನೆಗಳು ಸೇರಿದಂತೆ ತನ್ನ ಅನಿಸಿಕೆ ಬರೆದು ಹೋಗಿದ್ದಾನೆ ಎನ್ನಲಾಗಿದೆ.ಹೌದು, ಈ ಘಟನೆ ವಿಚಿತ್ರ ಎಂದೆನಿಸಿದರೂ ಸತ್ಯ. ಮಂಡ್ಯ (Mandya) ಜಿಲ್ಲೆ ಮಳವಳ್ಳಿ ತಾಲೂಕಿನ ಹೆಬ್ಬಣಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದ ಶಿಂಷಾ ರಸ್ತೆಯಲ್ಲಿದ್ದ ಅಂಗನವಾಡಿ ಕೇಂದ್ರಕ್ಕೆ ತಡರಾತ್ರಿ ಕಳ್ಳನೋರ್ವ ಅಂಗನಾಡಿ ಕೇಂದ್ರದ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾನೆ. ಅಂಗನವಾಡಿ ಕೇಂದ್ರದಲ್ಲಿದ್ದ ಬೀರುವಿನ ಬಾಗಿಲು ಮರಿದು ಹಣಕ್ಕಾಗಿ ತಡಕಾಟ ನಡೆಸಿದ್ದಾನೆ. ಆದರೆ ಕಪಾಟಿನಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ಸಿಗದ್ದಾಗ ಕಡೆಗೆ ಅಲ್ಲೇ ಇದ್ದ ಅಡುಗೆ ಸಾಮಾಗ್ರಿಗಳನ್ನೂ ಬಳಸಿಕೊಂಡು ಅಡುಗೆ ಮಾಡಿ ಊಟ ಮಾಡಿ ಹೋಗಿದ್ದಾನೆ ಎಂದು ಹೇಳಲಾಗಿದೆ.
ಅಂಗನವಾಡಿಯಲ್ಲಿ ಅಡುಗೆ ಮಾಡಿ, ಊಟ ಮಾಡಿದ ಬಳಿಕ ಈ ಆಸಾಮಿ ಕಳ್ಳ ಅಲ್ಲೇ ಇದ್ದ
ನೋಟ್ ಪುಸ್ತಕ ತೆಗೆದುಕೊಂಡು ಆ ನೋಟ್ ಪುಸ್ತಕದಲ್ಲಿ ಮುದ್ದಾದ ಬರಹದಲ್ಲಿ ಮೂರು ಪುಟಗಳಷ್ಟು ತನ್ನ ಜೀವನದ ಪ್ರಮುಖ ಘಟನೆಗಳನ್ನು ಬರೆದಿದ್ದಾನೆ ಎನ್ನಲಾಗಿದೆ. ಬೆಳಿಗ್ಗೆ ಎಂದಿನಂತೆ ಅಂಗನವಾಡಿ ಕಾರ್ಯಕರ್ತೆ ಅಂಗನವಾಡಿ ಬಾಗಿಲು ತೆರೆಯಲು ಬಂದಾಗ ಈ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ಥಳೀಯ ಪಂಡಿತಹಳ್ಳಿ ಗ್ರಾ. ಪಂ. ಪಿಡಿಒ ಮಹದೇವರವರಿಗೆ ಅಂಗನವಾಡಿ ಕಾರ್ಯಕರ್ತೆ ಈ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪಿಡಿಒ ಶಿಕ್ಷಕಿಯ ಜೊತೆ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಈ ವಿಚಿತ್ರ ಕಳ್ಳತನದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮಳವಳ್ಳಿ ಗ್ರಾಮಾಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಕುರಿತಂತೆ ತನಿಖೆ ಮುಂದುವರೆದಿದ್ದು ಈ ವಿಚಿತ್ರ ಕಳ್ಳನಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB