ನಟಿ, ನಿರೂಪಕಿ ಅಪರ್ಣಾ ವಸ್ತಾರೆ (ಜು.11) ರಂದು ನಿಧನರಾಗಿದ್ದಾರೆ. ಅಪರ್ಣಾ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಬನಶಂಕರಿಯ ಸ್ವಗೃಹದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ನಿರೂಪಣೆಯಷ್ಟೇ ಅಲ್ಲದೇ ಮಸಣದ ಹೂವು, ಇನ್ಸ್ ಪೆಕ್ಟರ್ ವಿಕ್ರಮ್ ಸೇರಿದಂತೆ ಹಲವು ಚಿತ್ರಗಳಲ್ಲೂ ಅಪರ್ಣಾ ನಟಿಸಿದ್ದನ್ನು ಸ್ಮರಿಸಬಹುದು.
ನಮ್ಮ ಮೆಟ್ರೋ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಧ್ವನಿ ನೀಡಿದ್ದ ಅಪರ್ಣಾ, ಮೂಡಲ ಮನೆ, ಮುಕ್ತ ಮುಕ್ತ ಮೊದಲಾದ ಧಾರಾವಾಹಿಗಳಲ್ಲೂ ನಟಿಸಿದ್ದರು. ದೀಪಾವಳಿ ಕಾರ್ಯಕ್ರಮದಲ್ಲಿ ಸತತ 8 ಗಂಟೆಗಳ ಕಾಲ ನಿರೂಪಣೆ ಮಾಡಿದ್ದ ಅಪರ್ಣಾ, 2013 ರಲ್ಲಿ ಬಿಗ್ ಬಾಸ್ ಶೋ ನಲ್ಲಿಯೂ ಭಾಗವಹಿಸಿದ್ದರು.
90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳ ನಿರೂಪಣೆ ಮಾಡಿದ ನಂತರ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಅಪರ್ಣ ಕಾರ್ಯ ನಿರ್ವಹಿಸಿದ್ದರು.
ತಮ್ಮ ಭಾಷಾ ಸ್ಪಷ್ಟನೆಯಿಂದ, ಉಚ್ಚಾರಣೆಯಿಂದ ಕನ್ನಡದ ಸೊಬಗು ಹೆಚ್ಚಿಸಿದ, ಕನ್ನಡಿಗರ ಹೆಮ್ಮೆಯ ನಿರೂಪಕಿ, ಅಪ್ಪಟ ಕನ್ನಡತಿ, ಕನ್ನಡವನ್ನೇ ತನ್ನ ಉಸಿರಾಗಿಸಿಕೊಂಡಿದ್ದಂತಹ, ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಲೀಲಾಜಾಲವಾಗಿ ತರ್ಜುಮೆ ಮಾಡುವ ಶಕ್ತಿ ಇದ್ದಂತಹ, ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸಿದಂತಹ ಕೆಚ್ಚೆದೆಯ ಕನ್ನಡತಿ ಅಪರ್ಣ ರವರಿಗೆ ಭಾವಪೂರ್ಣ ವಿದಾಯ…ಮತ್ತೊಮ್ಮೆ ಕನ್ನಡ ನಾಡಲ್ಲಿ ಹುಟ್ಟಿಬನ್ನಿ,ನಿಮ್ಮ ಸೇವೆಯ ಅನಿವಾರ್ಯತೆ ಕನ್ನಡಾಂಬೆಗಿದೆ… ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಅಪರ್ಣಾ ಅವರಾಡುತ್ತಿದ್ದ ಶುದ್ಧ ಕನ್ನಡ ಭಾಷೆಯನ್ನು ಕೇಳುವುದೇ ಅನನ್ಯ ಅನುಭವ. ಅವರ ನಿಧನ ಯಾವತ್ತಿಗೂ ತುಂಬಲಾರದ ನಷ್ಟ.
ನಿನ್ನೆ, ಇನ್ನೇನು ನಿದ್ರೆಗೆ ಜಾರಬೇಕು ಎನ್ನುವಾಗ ಕೇಳಿದ್ದು ಚಿರನಿದ್ರೆಗೆ ಜಾರಿದ ಕನ್ನಡದ ಧ್ವನಿ ಎನ್ನುವುದು ಅಪರ್ಣ ಧ್ವನಿ ಅಮರ.
ಕನ್ನಡ ನುಡಿಯ ಪರಿಪೂರ್ಣ ಕನ್ನಡ ಮನಸ್ಸಿನ ಅಪರ್ಣ.ಇಂದಿಗೆ ಕನ್ನಡ ತಾಯಿಯ ಮಡಿಲಿಗೆ ಪೂರ್ಣ. ಅಪರ್ಣ ಸಾವಿನ ಸುದ್ದಿ ಕೇಳಿ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ್, ರಾಜಿಕೀಯ ನಾಯಕರು, ಚಿತ್ರರಂಗದ ಕಲಾವಿದರು, ಇಡೀ ರಾಜ್ಯದ ಜನತೆ ಅಪರ್ಣ ಅವರ ಸಾವಿಗೆ ಕಂಬನಿ ಮಿಡಿದಿದೆ, ಅಪರ್ಣ ಅವರು ಕನ್ನಡಕ್ಕೆ ಕೊಟ್ಟ ಕೊಡುಗೆ, ಸೇವೆಗೆ ಅಂತಿಮ ನಮನಗಳು.
ವರದಿ : ಆಂಟೋನಿ ಬೇಗೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


