ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಎಚ್.ಬೈರಾಪುರ ಗ್ರಾಮದಲ್ಲಿ ಗ್ರಾಮದೇವತೆಗಳಾದ ಕರಿಯಮ್ಮದೇವಿ ಹಾಗೂ ಪ್ಲೇಗಿನಮ್ಮ ದೇವಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. ಸತತ ಐದು ದಿನಗಳ ಕಾಲ ನಡೆದ ಈ ಧಾರ್ಮಿಕ ಉತ್ಸವಕ್ಕೆ ಭವ್ಯ ರಥೋತ್ಸವ ಮತ್ತು ಸಿಡಿ ಉತ್ಸವದೊಂದಿಗೆ ತೆರೆಬಿದ್ದಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮೊದಲ ದಿನ ಮೂಲಸ್ಥಾನದಲ್ಲಿ ದೇವರಿಗೆ ಹೂವಿನ ಅಲಂಕಾರ, ಮಧುವಣಗಿತ್ತಿ ಕಾರ್ಯಕ್ರಮ ಹಾಗೂ ಮದ್ದಿನ ಪ್ರದರ್ಶನ ಆಯೋಜಿಸಲಾಗಿತ್ತು. ನಂತರದ ದಿನಗಳಲ್ಲಿ ಕಂಕಣಧಾರಣೆ, ಆರತಿಬಾನ, ಪುಷ್ಪಾಲಂಕಾರ ಹಾಗೂ ಗಂಗಾಸ್ನಾನದಂತಹ ವಿಧಿವಿಧಾನಗಳು ನೆರವೇರಿದವು.
ರಥೋತ್ಸವದ ದಿನದಂದು ಬೆಳಿಗ್ಗೆ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ, ಹೂವು ಹಾಗೂ ಬಣ್ಣಬಣ್ಣದ ಬಾವುಟಗಳಿಂದ ರಥವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಜಾನಪದ ಕಲಾತಂಡಗಳಾದ ಚಿಟ್ಟಿಮೇಳ, ನಾಸಿಕ್ ಡೋಲ್ ಮತ್ತು ಮಾರಮ್ಮನ ಕುಣಿತದೊಂದಿಗೆ ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು. ಸಾವಿರಾರು ಭಕ್ತರು ‘ಜೈಕಾರ’ ಹಾಕುತ್ತಾ ಭಕ್ತಿಯಿಂದ ರಥವನ್ನು ಎಳೆದರು.
ಜಾತ್ರೆಯ ಭಾಗವಾಗಿ ಆಯೋಜಿಸಲಾಗಿದ್ದ ಉಯ್ಯಾಲೋತ್ಸವ ಮತ್ತು ಸಂಜೆ ನಡೆದ ಸಿಡಿ ಉತ್ಸವವು ನೋಡುಗರ ಗಮನ ಸೆಳೆಯಿತು. ಭಕ್ತರಿಗೆ ಅನ್ನಸಂತರ್ಪಣೆ ಹಾಗೂ ಮನರಂಜನೆಗಾಗಿ ರಸಮಂಜರಿ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿತ್ತು. ಕೆರಗೋಡಿ ರಂಗಾಪುರ ಗುರು ಪರದೇಶಿಕೇಂದ್ರ ಸ್ವಾಮೀಜಿ ಅವರ ಸನ್ನಿಧಿಯಲ್ಲಿ ನಡೆದ ಈ ಉತ್ಸವವು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


