ಕೊರಟಗೆರೆ : ಹೇಮಾವತಿ ಕುಡಿಯುವ ನೀರಿನ ಶುದ್ದಿಕರಣ ಘಟಕ ನಿರ್ಮಾಣಕ್ಕಾಗಿ 2009-10 ರಲ್ಲಿ ಜೆಟ್ಟಿಅಗ್ರಹಾರ ರೈತರಿಂದ ಭೂಸ್ವಾಧೀನ ಪಡಿಸಿಕೊಂಡ ಜಮೀನಿನ ಭೂಪರಿಹಾರವನ್ನು 2018 ರಲ್ಲಿ ನ್ಯಾಯಾಲಯದ ಆದೇಶದ ನಂತರವು ನೀಡದಿರುವ ಪರಿಣಾಮ ಪಟ್ಟಣ ಪಂಚಾಯತ್ ನ ಪಿಠೋಪಕರಣ ವಶ ಪಡಿಸಿಕೊಳ್ಳುವಂತೆ ಮಧುಗಿರಿ ಅಧಿಕ ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಮಾಡಿರುವ ಘಟನೆ ಗುರುವಾರ ನಡೆದಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಮದ ರೈತರಾದ ಬಸವರಾಜು ಮತ್ತು ನಂದೀಶ್ ಎಂಬ ರೈತರ ಜಮೀನನ್ನು 2009 ರಲ್ಲೇ ಹೇಮಾವತಿ ಕುಡಿಯುವ ನೀರಿನ ಶುದ್ದಿಕರಣ ಘಟಕ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. 2018ರಲ್ಲೇ ಅಗ್ರಹಾರ ರೈತರಿಗೆ ತಕ್ಷಣ ಭೂಪರಿಹಾರ ನೀಡುವಂತೆ ಕೊರಟಗೆರೆ ಪ.ಪಂ.ಗೆ ಮಧುಗಿರಿ ಸಿವಿಲ್ ನ್ಯಾಯಾಲಯವು ಆದೇಶ ಮಾಡಿದೆ.
ಈ ಸಂಬಂಧ ಜೆಟ್ಟಿಅಗ್ರಹಾರ ಗ್ರಾಮದ ರೈತ ಬಸವರಾಜು ಮಾತನಾಡಿ, ಹೇಮಾವತಿ ನೀರಿನ ಘಟಕ ನಿರ್ಮಾಣಕ್ಕಾಗಿ 2009ರಲ್ಲಿ ನಮ್ಮ ಜಮೀನು ಸ್ವಾಧೀನ ಮಾಡಿದ್ದಾರೆ. 2018ರಲ್ಲಿ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ಮಾಡಿದೆ. ನಮಗೇ ಇನ್ನೂ 48 ಲಕ್ಷಕ್ಕೂ ಅಧಿಕ ಭೂಪರಿಹಾರ ಬರಬೇಕಿದೆ. ನ್ಯಾಯಾಲಯದ ಆದೇಶವನ್ನು ಪ.ಪಂ.ಯು ಪಾಲನೆ ಮಾಡದಿರುವ ಹಿನ್ನಲೆ ಇಂದು ಪಿಠೋಪಕರಣ ಜಪ್ತಿಗೆ ಆದೇಶ ಮಾಡಲಾಗಿದೆ ಎಂದು ಜೆಟ್ಟಿಅಗ್ರಹಾರ ಗ್ರಾಮದ ರೈತ ಬಸವರಾಜು ತಿಳಿಸಿದ್ದಾರೆ.
ಕೊರಟಗೆರೆ ಸಿವಿಲ್ ನ್ಯಾಯಾಲಯದ ಅಮೀನ್ರಾದ ಮಂಜುನಾಥ ಮಾತನಾಡಿ, ಜೆಟ್ಟಿಅಗ್ರಹಾರದ ಇಬ್ಬರು ರೈತರಿಗೆ 48 ಲಕ್ಷಕ್ಕೂ ಅಧಿಕ ಭೂಪರಿಹಾರ ನೀಡಲು ನ್ಯಾಯಾಲಯ 2018ರಲ್ಲೇ ಆದೇಶ ಮಾಡಿದೆ. ರೈತರಿಗೆ ಜಮೀನು ಸ್ವಾಧೀನದ ಪರಿಹಾರ ನೀಡುವಲ್ಲಿ ಕೊರಟಗೆರೆ ಪಟ್ಟಣ ಪಂಚಾಯಿತಿ ವಿಳಂಭ ಮಾಡಿದೆ. ಇಂದು ಮಧುಗಿರಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಕೊರಟಗೆರೆ ಪ.ಪಂ.ಯ ಪಿಠೋಪಕರಣವನ್ನು ಜಪ್ತಿ ಮಾಡಿದ್ದೇವೆ ಎಂದು ಕೊರಟಗೆರೆ ಸಿವಿಲ್ ಕೋರ್ಟ್ ಅಮೀನ್ ರಾದ ಮಂಜುನಾಥ ತಿಳಿಸಿದ್ದಾರೆ.
ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಮಾತನಾಡಿ ನ್ಯಾಯಾಲಯದ ಆದೇಶವನ್ನು ಕಾರ್ಯಗತ ಮಾಡುವುದು ಪ.ಪಂ. ಅಧಿಕಾರಿಗಳ ಪ್ರಮುಖ ಜವಾಬ್ದಾರಿ. ಪಟ್ಟಣ ಪಂಚಾಯಿತಿಯು ಕೋರ್ಟ್ ಆದೇಶ ನಿರ್ಲಕ್ಷ ಮಾಡಿರುವ ಪರಿಣಾಮ ಈಗ ಸಮಸ್ಯೆ ಆಗಿದೆ. ನ್ಯಾಯಾಲಯ ಪಿಠೋಪಕರಣ ವಶಕ್ಕೆ ಪಡೆದಿರುವ ಬಗ್ಗೆ ನನಗೇ ಮಾಹಿತಿ ಇಲ್ಲ. ಸರಕಾರದ ಅನುಧಾನ ಮತ್ತು ಪಟ್ಟಣ ಪಂಚಾಯ್ತಿ ಯಿಂದ ತಕ್ಷಣ ಮಾಹಿತಿ ಪಡೆದು ಸಮಸ್ಯೆ ಬಗೆಹರಿಸುತ್ತೇನೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಧುಗಿರಿಯ ಘನ ಸಿವಿಲ್ ನ್ಯಾಯಾಲಯವು 2018ರಲ್ಲೇ ಆದೇಶ ಮಾಡಿದೆ. ಕೊರಟಗೆರೆ ಪಪಂ ಮುಖ್ಯಾಧಿಕಾರಿಗೆ ಈ ಹಿಂದೆಯೇ ವಾರೆಂಟ್ ಜಾರಿಯಾಗಿದೆ. ನ್ಯಾಯಾಲಯದ ಆದೇಶವನ್ನು ನಿರ್ಲಕ್ಷ ಮಾಡಿರುವ ಪರಿಣಾಮ ಕೊರಟಗೆರೆ ಪ.ಪಂ.ಯ ಮುಖ್ಯಾಧಿಕಾರಿ, ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಕಚೇರಿಯ ಪಿಠೋಪಕರಣ ಜಪ್ತಿ ಮಾಡಿ ಮಧುಗಿರಿ ಸಿವಿಲ್ ನ್ಯಾಯಾಲಯವು ಆದೇಶ ಮಾಡಿದೆ.
ಕೊರಟಗೆರೆ ಸಿವಿಲ್ ನ್ಯಾಯಾಲಯದ ಅಮೀನರಾದ ಮಂಜುನಾಥ ಮತ್ತು ಪರಮೇಶ್ವರಯ್ಯ ನೇತೃತ್ವದಲ್ಲಿ ಪಪಂ ಕಚೇರಿಯ ಪಿಠೋಪಕರಣವನ್ನು ವಶಕ್ಕೆ ಪಡೆಯಲಾಗಿದೆ. ಇದೇ ಸಂದರ್ಭದಲ್ಲಿ ಪಪಂಯ ಮುಖ್ಯಾಧಿಕಾರಿ ಭಾಗ್ಯ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂಧಿವರ್ಗ ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz