ಕೊರಟಗೆರೆ: ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿ ದೇವರುಗಳ ಪ್ರೀತಿ ಮತ್ತು ವಿಶ್ವಾಸಕ್ಕೆ ನಾನು ಸದಾ ಚಿರಾಋಣಿ. ನಿಮ್ಮೇಲ್ಲರ ಆರ್ಶಿವಾದ ಮತ್ತು ಹಾರೈಕೆ ಸದಾ ನನ್ನ ಮೇಲಿರಲಿ ಅಷ್ಟು ಸಾಕು ಎಂದು ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಹೇಳಿದರು.
55ನೇ ಹುಟ್ಟು ಹಬ್ಬವನ್ನು ಕಾರ್ಯಕರ್ತರ ಜೊತೆಗೆ ಆಚರಿಸಿಕೊಂಡ ಸುಧಾಕರಲಾಲ್, ಈ ವೇಳೆ ಮಾತನಾಡಿ, ಕೊರಟಗೆರೆ ಕ್ಷೇತ್ರದ ಮನೆಮಗನಾಗಿ 15 ವರ್ಷ ಜಿಲ್ಲಾ ಪಂಚಾಯತ್ ಸದಸ್ಯ ಮತ್ತು 5 ವರ್ಷ ಶಾಸಕನಾಗಿ 20 ವರ್ಷ ಹಗಲುರಾತ್ರಿ ಎನ್ನದೇ ಸಾಮಾನ್ಯನಂತೆ ಜನತೆಯ ಸೇವೆ ಸಲ್ಲಿಸಿದ್ದೇನೆ. 2018ರಲ್ಲಿ ನಾನು ಸೋತರು ಸಹ ಕೊರಟಗೆರೆ ಕ್ಷೇತ್ರದ ಜನತೆಯ ಒಡನಾಡಿಯಾಗಿ ಕೆಲಸ ಮಾಡುತ್ತಿದ್ದೇನೆ. 2023ರ ಕೊರಟಗೆರೆ ಕ್ಷೇತ್ರದ ವಿಧಾನಸಭಾ ಚುನಾವಣೆಗೆ ನಿಮ್ಮೆಲ್ಲರ ಆರ್ಶಿವಾದ ನನ್ನ ಮೇಲಿರಲಿ ಎಂದು ಮನವಿ ಮಾಡಿದರು.
ತುಮಕೂರು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಮಾತನಾಡಿ, ಸ್ನೇಹಜೀವಿಯ ಹುಟ್ಟುಹಬ್ಬದ ಸಂಭ್ರಮವು ಸಾಮಾಜಿಕ ಕಾರ್ಯಕ್ರಮವಾಗಿ ಕೊರಟಗೆರೆ ಕ್ಷೇತ್ರದಲ್ಲಿ ನಡೆಯುತ್ತಿದೆ. ಕೊರಟಗೆರೆ ಕ್ಷೇತ್ರದ ಪ್ರತಿ ಮನೆಯಲ್ಲಿ ಸುಧಾಕರಲಾಲ್ ಹುಟ್ಟುಹಬ್ಬದ ಸಂಭ್ರಮ ಮನೆಮಾಡಿದೆ. 5 ವರ್ಷ ಶಾಸಕರಾಗಿ ಮಾಡಿದ ಕೆಲಸಗಳೇ ಈಗ ಫಲ ನೀಡಲು ಪ್ರಾರಂಭಿಸಿವೆ. ಕೊರಟಗೆರೆ ಕ್ಷೇತ್ರದಲ್ಲಿ 2023ಕ್ಕೆ ಮತ್ತೆ ಸುಧಾಕರ ಪರ್ವ ಆರಂಭ ಆಗಲಿದೆ ಎಂದರು.
ಕೊರಟಗೆರೆ ಪಟ್ಟಣದ ಕನಕ ವೃತ್ತದಿಂದ ಆರಂಭವಾದ ಬೃಹತ್ ಮೆರವಣಿಗೆ. ಸರಕಾರಿ ಬಸ್ ನಿಲ್ದಾಣದ ಮುಖ್ಯರಸ್ತೆಯವರೆಗೆ ಸಾಗಿತು. ಜೆಡಿಎಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕುಣಿದು ಕುಪ್ಪಳಿಸಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಇದೇ ವೇಳೆ ಕೊರಟಗೆರೆ ಪಟ್ಟಣದ ಇರ್ಷಾದ್, ಬಾಬಣ್ಣ, ಇದಾಯತ್, ನವೀನ್, ಮಹೇಶ್, ರಾಜಶೇಖರ ಮತ್ತು ನೀಲಗೊಂಡನಹಳ್ಳಿ ಗ್ರಾಪಂ ಅಧ್ಯಕ್ಷೆ ಲಿಂಗಮ್ಮರಂಗನಾಥ ಸೇರಿದಂತೆ ನೂರಾರು ಜನ ಯುವ ಕಾರ್ಯಕರ್ತರು ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕರಾದ ಪಿ.ಆರ್.ಸುಧಾಕರಲಾಲ್ ಸಮ್ಮುಖದಲ್ಲಿ ವೇದಿಕೆಯಲ್ಲಿ ಸೇರ್ಪಡೆಯಾದರು.
ಸುಧಾಕರಲಾಲ್ ಹುಟ್ಟುಹಬ್ಬದ ಕೊರಟಗೆರೆ ಪಟ್ಟಣ ಪಂಚಾಯತ್ ಮುಂಭಾಗ ಏರ್ಪಡಿಸಲಾಗಿದ್ದ ಬೃಹತ್ ಆರೋಗ್ಯ, ರಕ್ತದಾನ ಶಿಬಿರ ಮತ್ತು ಕಣ್ಣಿನ ತಪಾಸಣಾ ಕಾರ್ಯಕ್ರಮವು ಯಶಸ್ವಿಯಾಯಿತು. ಇದೇ ವೇಳೆ ವಿಶೇಷ ಚೇತನರಿಗೆ ಸಮಾವಸ್ತ್ರವ ವಿತರಣೆ ಮಾಡಲಾಯಿತು. ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಹಾಲು-ಹಣ್ಣು ವಿತರಣೆ ಮಾಡಿದರು.
ವರದಿ : ಮಂಜುಸ್ವಾಮಿ ಎಂ ಎನ್ ಕೊರಟಗೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy