ತಿಪಟೂರು: ತುಮಕೂರಿನಿಂದ ಶಿವಮೊಗ್ಗದವರೆಗೆ ರಾಷ್ಟ್ರೀಯ ಹೆದ್ದಾರಿ ಯೋಜನೆ ಪ್ರಾರಂಭಗೊಂಡಿದೆ ಆದರೆ ರಾಷ್ಟ್ರೀಯ ಹೆದ್ದಾರಿ ಯೋಜನೆಯಾಗಿ ಮನೆ ನಿವೇಶನ ಹಾಗೂ ಜಮೀನು ಕಳೆದುಕೊಂಡ ತಾಲೂಕಿನ ತಿಪ್ಪನಹಳ್ಳಿ ಗ್ರಾಮಸ್ಥರಿಗೆ ಇನ್ನೂ ಕೂಡ ಸೂಕ್ತ ಪರಿಹಾರ ನೀಡಿಲ್ಲ ಪರಿಹಾರ ನೀಡುವವರೆಗೂ ಶಾಂತಿಯುತವಾಗಿ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಿಳಿಸಿದರು.
ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್ ನಲ್ಲಿ ಪ್ರತಿಭಟನೆ ಕೈಗೊಂಡ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಕಿಬ್ಬನಹಳ್ಳಿ ಕ್ರಾಸ್ ನಲ್ಲಿ 125ಕ್ಕೂ ಹೆಚ್ಚು ನಿವೇಶನದ ಮನೆಯನ್ನು ರಾಷ್ಟ್ರೀಯ ಹೆದ್ದಾರಿ ಗಾಗಿ ಸಂತ್ರಸ್ತರು ಕಳೆದುಕೊಂಡಿದ್ದಾರೆ. ಆದರೆ ಕಳೆದ ಆರು ವರ್ಷಗಳಿಂದ ಹೆದ್ದಾರಿ ಪ್ರಾಧಿಕಾರದವರು ನೋಟಿಸ್ ನೀಡಿದ್ದು ಬಿಟ್ಟರೆ, ಒಂದು ನಯಾ ಪೈಸೆ ಕೂಡ ಪರಿಹಾರದ ಹಣವನ್ನು ಇದುವರೆಗೂ ನೀಡಿರುವುದಿಲ್ಲ. ಭೂ ಕಾಯ್ದೆ ಪ್ರಕಾರ ಭೂಮಿ ಕಳೆದುಕೊಂಡವರಿಗೆ ಒಂದು ವರ್ಷದ ಒಳಗೆ ಪರಿಹಾರ ನೀಡಬೇಕು. ಆದರೆ ಭೂಮಿ ಕಳೆದುಕೊಂಡು ಆರು ವರ್ಷ ಕಳೆದರೂ ಕೂಡ ಜಿಲ್ಲಾಡಳಿತ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ನಿವೇಶನ ಮನೆ ಜಮೀನು ಕಳೆದುಕೊಂಡವರು ಸರ್ಕಾರಿ ಕಚೇರಿಗೆ ಪರಿಹಾರಕ್ಕಾಗಿ ಸಾಕಷ್ಟು ಬಾರಿ ಅಲೆದಾಡಿದ್ದಾರೆ . ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ತಾಲೂಕಿನ ಈ ಭಾಗದ ಭೂಮಿ ಕಳೆದುಕೊಂಡವರಿಗೆ ಕೂಡಲೇ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದರು.
ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಷಡಕ್ಷರಿ ಮಾತನಾಡಿ, ಯಾವುದೇ ಸರ್ಕಾರಗಳಾಗಲಿ ಯೋಜನೆ ಮಾಡುವಾಗ ರೈತರ ಜಮೀನು ಪಡೆಯಬಾರದು ಎಂಬ ನಿಯಮ ಇದೆ. ನಗುಮುಖದಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಮನೆ-ನಿವೇಶನ ಜಮೀನನ್ನು ಬಿಟ್ಟುಕೊಟ್ಟಿದ್ದೇವೆ. ನಮಗೆ ಭೂಸ್ವಾಧೀನಕ್ಕಾಗಿ ನೋಟಿಸ್ ನೀಡಿ ಆರು ವರ್ಷ ಕಳೆದಿದೆ. ಭೂಮಿ ಮತ್ತು ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರ ಮಾತ್ರ ದೊರಕಿಲ್ಲ ಸರ್ಕಾರ ಈ ಕೂಡಲೇ ಸ್ಪಂದಿಸಬೇಕು ಅಧಿಕಾರಿಗಳು ಸರಿಯಾದ ಉತ್ತರ ನೀಡಬೇಕು ಎಂದು ಪ್ರತಿಭಟನೆಯಲ್ಲಿ ತಿಳಿಸಿದರು.
ರೈತರಾದ ಹೊನ್ನಪ್ಪ ಮಾತನಾಡಿ, 6 .ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳ ಅವರ ಮಾತುಗಳನ್ನು ಕೇಳಿ ಸಾಕಾಗಿದೆ ತುಮಕೂರಿನಿಂದ ಶಿವಮೊಗ್ಗಕ್ಕೆ ತಲುಪುವ 148 ಹಳ್ಳಿಗಳಿದ್ದು 148 ಹಳ್ಳಿಗಳಿಗೂ ಪರಿಹಾರ ಒದಗಿಸಲು ಸಾಧ್ಯವಾಗುತ್ತದೆ ಆದರೆ ತಿಪಟೂರು ತಾಲೂಕಿನ ಕೆ.ಬಿ.ಕ್ರಾಸ್ ಗೆ ಪರಿಹಾರವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲವೇ ಈ ವಿಚಾರವಾಗಿ ಕೇಳಲು ಹೋದರೆ ನಮಗೆ ಬೇಜವಾಬ್ದಾರಿ ರೀತಿಯಲ್ಲಿ ಉತ್ತರವನ್ನು ಕೊಡುತ್ತಾರೆ. ಸರ್ಕಾರವು ಯಾವ ರೀತಿಯಲ್ಲಿ ಪರಿಹಾರವನ್ನು ನಿಗದಿಪಡಿಸುತ್ತದೆ. ಅಷ್ಟು ಪರಿಹಾರವನ್ನು ನಮಗೆ ನೀಡಬೇಕು ಅಥವಾ ಇಂದಿನ ಬೆಲೆಯು ಏನಿದೆ ಅದನ್ನು ಪರಿಹಾರವನ್ನಾಗಿ ನೀಡಲಿ ಒಂದು ವೇಳೆ ಯಾವುದೇ ರೀತಿಯ ಪರಿಹಾರವನ್ನು ನೀಡದೆ ಹೋದಲ್ಲಿ ಜಿಲ್ಲಾಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಜಕ್ಕನಹಳ್ಳಿ ಲಿಂಗರಾಜು, ಲಕ್ಷ್ಮೀಶ, ಸಂಗಮೇಶ್, ದೇವರಾಜ್, ಶಿವಶಂಕರಯ್ಯ ಮತ್ತಿತರರು ಭಾಗಿಯಾಗಿದ್ದರು.
ವರದಿ: ಮಂಜು ಗುರುಗದಹಳ್ಳಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB