ವಿಜಾಪುರ ಜಿಲ್ಲೆ: ಕೊಲ್ಹಾರತಾಲ್ಲೂಕು ಕೊಲ್ಹಾರ ಪಟ್ಟಣದ ಮುಳುಗಡೆ ಸಂತ್ರಸ್ತರಿಗೆ ನಿವೇಶನಗಳ ವಿತರಣೆ ಹಾಗೂ ಪರಿಹಾರ ವಿತರಣೆಯಲ್ಲಿ ಪುನರ್ವಸತಿ ಅಧಿಕಾರಿಗಳಿಂದ ಅನ್ಯಾಯವಾಗಿದೆ ಎಂದು ಕೊಲ್ಹಾರ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮೀತಿ ಅಧ್ಯಕ್ಷ ಸಿದ್ದಪ್ಪ ಬಾಲಗೊಂಡ ಹೇಳಿದರು.
ಪಟ್ಟಣದ ಉಪ್ಪಾಸೆಪ್ಪ ದೇವಸ್ಥಾನದಲ್ಲಿ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಹೋರಾಟ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಚರ್ಚಾಕೂಟದಲ್ಲಿ ಮಾತನಾಡಿದ ಅವರು, ಸರಕಾರಕ್ಕಾಗಿ ನಾವುಗಳು ಮಾಡಿರುವ ತ್ಯಾಗ ಅಪಾರವಾದದ್ದು ಪುನರ್ವಸತಿ ಅಧಿಕಾರಿಗಳು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಂತ್ರಸ್ತರಿಗೆ ಪೂರ್ಣ ಸೌಲಭ್ಯಗಳನ್ನು ಕಲ್ಪಿಸುವವರೆಗೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ನಿರಂತರವಾಗಿ ಹೋರಾಟ ಮಾಡಲಾಗುವುದು ಎಂದರು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಕಲ್ಲು ಸೊನ್ನದ ಮಾತನಾಡಿ, ಸರ್ವರು ಈ ಹೋರಾಟಕ್ಕೆ ಕೈಜೋಡಿಸಬೇಕು. ಈ ಹಿಂದೆ ಕೊಲ್ಹಾರ ತಾಲ್ಲೂಕು ಹೋರಾಟ ಸಮಿತಿಯ ವತಿಯಿಂದ ಹೋರಾಟ ಹಮ್ಮಿಕೊಳ್ಳುವ ಮೂಲಕ ಹೇಗೆ ಯಶಸ್ವಿಯಾದೆವೋ, ಅದೇ ರೀತಿ ಈ ಹೋರಾಟಕ್ಕೂ ಸರ್ವರು ಕೈಜೋಡಿಸುವ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳೋಣ ಎಂದು ಹೇಳಿದರು.
ಕೊಲ್ಹಾರ ಸಂತ್ರಸ್ತರ ಜೊತೆಗೆ ಪಟ್ಟಣದಲ್ಲಿ ಸುಮಾರು ವರ್ಷಗಳಿಂದ ಬೇರೆ ಬೇರೆ ಕಡೆಗಳಿಂದ ಬಂದಿರುವ ಜನರು ವಾಸಿಸುತ್ತಿದ್ದಾರೆ. ಅವರಿಗೂ ಕೂಡ ನಿವೇಶನ ಪಡೆದುಕೊಳ್ಳುವ ಹಕ್ಕಿದೆ ಕೊಲ್ಹಾರ ಪಡಿತರ ಚೀಟಿಯಲ್ಲಿ ಸುಮಾರು ಮೂರು ವರ್ಷಗಳಿಂದ ಹೆಸರು ನೋಂದಾವಣೆ ಆಗಿದ್ದರೆ, ಅಂತಹವರಿಗೂ ಕೂಡ ನಿವೇಶನ ಪಡೆದುಕೊಳ್ಳುವ ಹಕ್ಕಿದೆ ಎಂದು ಪುನರ್ವಸತಿ ಅಧಿಕಾರಿಗಳು ಹೇಳಿರುವ ದಾಖಲೆಗಳಿವೆ. ಹಾಗಾಗಿ ಸಂತ್ರಸ್ತರ ಜೊತೆಜೊತೆಗೆ ಈ ಪಟ್ಟಣದಲ್ಲಿ ಸುಮಾರು ವರ್ಷಗಳಿಂದ ವಾಸಿಸುತ್ತಿರುವ ಜನರಿಗೂ ಕೂಡ ನಿವೇಶನಗಳನ್ನು ಪುನರ್ವಸತಿ ಅಧಿಕಾರಿಗಳು ವಿತರಿಸಬೇಕಿದೆ ಎಂದರು.
ಅಲ್ಲಾಭಕ್ಷ ಬಿಜಾಪೂರ ಮಾತನಾಡುತ್ತಾ, ಕೊಲ್ಹಾರ ಪಟ್ಟಣದ ಮುಳುಗಡೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಪುನರ್ವಸತಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಮುಳುಗಡೆಯ ಸಂದರ್ಭದಲ್ಲಿ ನಮ್ಮ ಹಿರಿಯರಿಗೆ ತಲೆತಲಾಂತರದಿಂದ ಬಂದಂತಹ ಫಲವತ್ತಾದ ಜಮೀನು, ಮನೆಮಠ ಕಳೆದುಕೊಂಡು ಅನಾಥರಾಗುತ್ತೆವೆ ಎಂಬ ಜ್ಞಾನ ಇದ್ದರೂ ಕೂಡ ನಮ್ಮಿಂದ ಸರಕಾರಕ್ಕೆ ಅನುಕೂಲ ಆಗುತ್ತದೆ ಎಂದಾದಲ್ಲಿ ನಾವು ತ್ಯಾಗ ಮಾಡಲು ನಾವು ಸಿದ್ಧ ಎಂಬ ಧ್ಯೇಯದೊಂದಿಗೆ ಮಮತಾಮಯಿಗಳಾಗಿ ಸರಕಾರಕ್ಕಾಗಿ ಸರ್ವಸ್ವವನ್ನೂ ಧಾರೆ ಎರೆದಿದ್ದಾರೆ. ಮನೆ ಮಠ ಕಳೆದುಕೊಂಡ ನಮಗೆ ಪುನರ್ವಸತಿ ಅಧಿಕಾರಿಗಳು ನಿವೇಶನಗಳ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕಾಗಿತ್ತು. ಆದರೆ ಅಧಿಕಾರಿಗಳು ಸಂತ್ರಸ್ತರ ಬದುಕನ್ನು ಮೂರಾಬಟ್ಟೆ ಮಾಡಿದ್ದಾರೆ. ಈ ಕಡೆ ನಿವೇಶನಗಳು ಕೂಡ ಇಲ್ಲ, ಆ ಕಡೆ ಮೂಲಭೂತ ಸೌಲಭ್ಯಗಳು ಕೂಡ ಇಲ್ಲ ಪುನರ್ವಸತಿ ಅಧಿಕಾರಿಗಳಿಂದ ನಮ್ಮ ಬದುಕು ಅತಂತ್ರವಾಗಿದೆ ಎಂದರು.
ಬಾಗಲಕೋಟ ಅಭಿವೃದ್ಧಿ ಹೋರಾಟ ಸಮಿತಿಯ ಕಾರ್ಯದರ್ಶಿ ಅರವಿಂದ್ ಮುಚಖಂಡಿ ಹಾಗೂ ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಅಧ್ಯಕ್ಷ ಪ್ರಕಾಶ ಅಂತರಗೊಂಡ ಮಾತನಾಡಿ, ಮುಳುಗಡೆ ಸಂತ್ರಸ್ತರಿಗಾಗಿ ಕಲ್ಪಿಸಬೇಕಾದ ಸೌಲಭ್ಯಗಳ ಬಗ್ಗೆ ಸರಕಾರ ಜಿಯೋ ರಚನೆ ಮಾಡಿರುತ್ತದೆ. ಅದನ್ನು ನೋಡಿದರೆ, ಪುನರ್ವಸತಿ ಪುನರ್ ನಿರ್ಮಾಣ ಇಲಾಖೆಯಿಂದ ಸಂತ್ರಸ್ತರಿಗೆ ಕಲ್ಪಿಸಬೇಕಾದ ಸೌಲಭ್ಯಗಳು ಇನ್ನು ಸಾಕಷ್ಟಿವೆ ಸಮರ್ಪಕವಾದ ರಸ್ತೆಗಳ, ಒಳಚರಂಡಿ ವ್ಯವಸ್ಥೆ, ವ್ಯಾಪಾರಸ್ಥರಿಗೆ ವಾಣಿಜ್ಯ ಸಂಕೀರ್ಣ, ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ಶೌಚಾಲಯದ ವ್ಯವಸ್ಥೆ ಇಲ್ಲ, ಉದ್ಯಾನಗಳ ವ್ಯವಸ್ಥೆ ಇಲ್ಲ ಇಷ್ಟೆಲ್ಲ ಕೊರತೆಗಳ ನಡುವೆ ನಾವುಗಳು ಬದುಕು ಸವೆಸುತ್ತಿದ್ದೆವೆ. ಈ ಸೌಲಭ್ಯಗಳನ್ನು ಕಲ್ಪಿಸಬೇಕಾದ ಪುನರ್ವಸತಿ ಅಧಿಕಾರಿಗಳು, ಸಂತ್ರಸ್ತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುವ ಮೂಲಕ ಅನ್ಯಾಯವೆಸಗುತ್ತಿದ್ದಾರೆ. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ಅವಶ್ಯಕವಾಗಿದೆ ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳೊಣ ನಿಮ್ಮ ಹೋರಾಟಕ್ಕೆ ನಾವುಗಳ ಕೂಡ ಜೊತೆಗಿದ್ದೇವೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಕಲ್ಲಿನಾಥ ದೇವರು ಮಾತನಾಡುತ್ತಾ, ಪುನರ್ವಸತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕೊಲ್ಹಾರ ಪಟ್ಟಣ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಸವಳಿದು ಹೋಗಿದೆ. ಎಲ್ಲವನ್ನೂ ಕಳೆದುಕೊಂಡು ಇವತ್ತು ನಾವು ಅನಾಥರಾಗಿ ಬೀದಿಯಲ್ಲಿ ನಿಂತಿದ್ದೇವೆ ನಾವು ಕಳೆದುಕೊಂಡಿದ್ದು ನೋಡಿದರೆ, ನಮಗೆ ಪುನರ್ವಸತಿ ಇಲಾಖೆಯಿಂದ ಸಿಕ್ಕಿರುವುದಾದರೂ ಏನು? ಎಂದು ಪ್ರಶ್ನಿಸಿದರು. ನಾವು ಎಲ್ಲವನ್ನೂ ಕಳೆದುಕೊಂಡಿರುವುದರ ಬದಲಾಗಿ ಕೇಳುತ್ತಿರುವುದಾರು ಏನು? ಮೂಲಭೂತ ಸೌಲಭ್ಯ ಹಾಗೂ ವಾಸಿಸಲು ನಿವೇಶನ ಕೇಳುತ್ತಿದ್ದೆವೆ. ಮುಖ್ಯಮಂತ್ರಿಗಳು ಸಂತ್ರಸ್ತರ ಅಳಲಿಗೆ ಕಿವಿಯಾಗಬೇಕು. ಸರಕಾರ ಇನ್ನೂ 400 ಎಕರೆ ಜಾಗ ಮಂಜೂರು ಮಾಡಿ ಸಂತ್ರಸ್ತರಿಗೆ ನಿವೇಶನಗಳನ್ನು ವಿತರಿಸಬೇಕು ಹಾಗೂ ಸಂತ್ರಸ್ತರ ಕೂಗಿಗೆ ಹಾಲಿ ಶಾಸಕ ಶಿವಾನಂದ ಪಾಟೀಲರು ಧ್ವನಿಯಾಗಬೇಕು ಹಾಗೂ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಕೂಡ ಸಂತ್ರಸ್ತರ ಮೊರೆ ಕೇಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅನೇಕ ಜನರು ಪುನರ್ವಸತಿ ಅಧಿಕಾರಿಗಳಿಂದ ಆದ ಅನ್ಯಾಯದ ಬಗ್ಗೆ ತಮ್ಮ ಅಳಲು ತೋಡಿಕೊಂಡರು. ಪುಂಡಲೀಕ ಬಾಟಿ ನಿರೂಪಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ಸಂಗಪ್ಪ ದಳವಾಯಿ, ಪುಂಡಲೀಕ ಕಂಬಾರ, ಬಸವರಾಜ ಕೊಠಾರಿ, ಮಲ್ಲಪ್ಪ ಗಣಿ, ಲಾಲಸಾಬ ಪಕಾಲಿ, ಸಲೀಮ ಕೊತ್ತಲ್, ಗೈಬುಸಾಬ ನದಾಫ, ಸಾಬು ಕುಂಟೆಮ್ಮಗೋಳ, ಮಲ್ಲಪ್ಪ ಏಳಂಗಡಿ ಇತರರು ಇದ್ದರು.
ವರದಿ: ಎ.ಎನ್. ಪೀರ್, ತುಮಕೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB