ವಿಜಾಪುರಜಿಲ್ಲೆ: ಕೊಲ್ಹಾರ ಪಟ್ಟಣ ಹಾಗೂ ಕೊಲ್ಹಾರ ತಾಲ್ಲೂಕು ವ್ಯಾಪ್ತಿಯ ಮುಳುಗಡೆ ಸಂತ್ರಸ್ತರ ಪರವಾಗಿ ಅವಿರತವಾಗಿ ಹೋರಾಟ ಮಾಡಲಾಗುವುದು ಎಂದು ಕೃಷ್ಣಾ ತೀರ ಸಂತ್ರಸ್ತರ ಹೋರಾಟ ಸಮಿತಿಯ ಅಧ್ಯಕ್ಷ ಸಿದ್ದು ಬಾಲಗೊಂಡ ಹೇಳಿದರು.
ಪಟ್ಟಣದಲ್ಲಿ ಕೃಷ್ಣಾ ತೀರ ಸಂತ್ರಸ್ತರ ಹೋರಾಟ ಸಮಿತಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಬಾಗಲಕೋಟೆ ನಂತರ ಎರಡನೆಯ ಅತಿ ದೊಡ್ಡ ಪಟ್ಟಣವಾದ ಕೊಲ್ಹಾರ ಪಟ್ಟಣ ಸ್ಥಳಾಂತರವಾಗಿ ಅನೇಕ ವರ್ಷಗಳು ಕಳೆಯುತ್ತಾ ಬಂದರು ಕೂಡ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಪುನರ್ವಸತಿ ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಸಿ ಪಟ್ಟಣವನ್ನು ಅಭಿವೃದ್ಧಿ ಪಡಿಸುವುದು ಬಿಟ್ಟು ತಮ್ಮ ಹುಳುಕು ಮುಚ್ಚಿಕೊಳ್ಳಲು ಸಂತ್ರಸ್ತರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿ ಸರಕಾರಕ್ಕಾಗಿ ಮನೆಮಠ ಕಳೆದುಕೊಂಡ ಸಂತ್ರಸ್ತರಿಗೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಿಗಳ ತಪ್ಪಿತಸ್ಥರು: ಪುನರ್ವಸತಿ ಅಧಿಕಾರಿಗಳು ತಪ್ಪು ಮಾಡಿ ಸುಖಾಸುಮ್ಮನೆ 1117 ಜನ ಸಂತ್ರಸ್ತರ ಮೇಲೆ ಪ್ರಕರಣದ ದಾಖಲಿಸಿ ಕಿರುಕುಳ ನೀಡುತ್ತಿದ್ದಾರೆ. ನಮಗೆ ಪುನರ್ವಸತಿ ಅಧಿಕಾರಿಗಳು ನೀಡಿದ ನಿವೇಶನಗಳು ಬೇಡ! ಅವರು ನೀಡಿರುವ 22 ಸಾವಿರ ಪರಿಹಾರವೂ ಬೇಡ ನಾವು ಮರಳಿ ನೀಡುತ್ತೇವೆ ನಮಗೆ ಹಳೆ ಕೊಲ್ಹಾರ ಮುಳುಗಡೆಯ ನಮ್ಮ ಮೂಲ ಜಾಗ ನೀಡಿ ಸಾಕು. ಇಲ್ಲದಿದ್ದಲ್ಲಿ ಶೀಘ್ರದಲ್ಲಿಯೇ ಮುಳುಗಡೆ ಹಳೆ ಕೊಲ್ಹಾರ ಗ್ರಾಮಕ್ಕೆ ಹೋಗಿ ವಾಸ್ತವ್ಯ ಹೂಡುತ್ತೆವೆ ಇದರ ಪರಿಣಾಮ ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಆಕ್ರೋಶ ಹೊರಹಾಕಿದರು.
ಅಧಿಕಾರಿಗಳು ಈಗಾಗಲೇ ಮನೆಮನೆಗೆ ತೆರಳಿ ಸಂತ್ರಸ್ತರ ದಾಖಲೆಗಳನ್ನು ಕಲೆ ಹಾಕಿದ್ದಾರೆ. ಸಂಶಯ ಬಂದವರಿಗೆ ನೋಟಿಸ್ ಕಳುಹಿಸಿ ಮಾಹಿತಿ ಪಡೆದುಕೊಂಡು ತಪ್ಪು ಮಾಹಿತಿ ನೀಡಿರುವವರ ನಿವೇಶನಗಳನ್ನು ರದ್ದುಪಡಿಸಬಹುದಿತ್ತು ಅಥವಾ ಡಿ.ಡಿ.ಭರಣ ಮಾಡಿಕೊಂಡು ಸಕ್ರಮಗೊಳಿಸಬಹುದಿತ್ತು ಎಂದರು.
ಸರಕಾರಕ್ಕಾಗಿ ನಾವು ಮಾಡಿರುವ ತ್ಯಾಗ ಸಾಕಷ್ಟಿದೆ ಸರ್ವಸ್ವವನ್ನೂ ತ್ಯಾಗ ಮಾಡಿ ನಾವು ತಬ್ಬಲಿಗಳಾಗಿದ್ದೇವೆ. ಇಂತಹ ನಮ್ಮ ಮೇಲೆ ಪೊಲೀಸ್ ಪ್ರಕರಣ ದಾಖಲಿಸಿ ಗಾಯದ ಮೇಲೆ ಬರೆ ಎಳೆಯುವ ಕೆಲಸ ಪುನರ್ವಸತಿ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಪುನರ್ವಸತಿ ವ್ಯಾಪ್ತಿಯ ಬಾಗಲಕೋಟೆಗೆ ಪಟ್ಟಣಕ್ಕೆ ಹೋಲಿಸಿದಲ್ಲಿ ಕೊಲ್ಹಾರ ಪಟ್ಟಣ ಅಭಿವೃದ್ಧಿಯಿಂದ ಬಹಳ ವಂಚಿತವಾಗಿದೆ. ಪಟ್ಟಣದಲ್ಲಿ ಸಮರ್ಪಕವಾದ ರಸ್ತೆಗಳ ವ್ಯವಸ್ಥೆ ಇಲ್ಲ, ಒಳಚರಂಡಿ ವ್ಯವಸ್ಥೆ ಇಲ್ಲ, ವ್ಯಾಪಾರಸ್ಥರಿಗೆ ವಾಣಿಜ್ಯ ಸಂಕೀರ್ಣಿ ಇಲ್ಲ, ತಳಪಾಯ ಇಲ್ಲದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ, ಉದ್ಯೋಗ ಸೃಷ್ಟಿಗೆ ಒತ್ತು ನೀಡಿಲ್ಲ, ಕಟ್ಟಲು ನೀಡಿದ್ದ 22 ಸಾವೀರ ರೂಪಾಯಿಗಳು ತಳಪಾಯಕ್ಕೆ ಸಾಕಾಗಿಲ್ಲ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ಶೌಚಾಲಯದ ವ್ಯವಸ್ಥೆ ಇಲ್ಲ, ಉದ್ಯಾನಗಳ ವ್ಯವಸ್ಥೆ ಇಲ್ಲ ಇಷ್ಟೇಲ್ಲ ಕೊರತೆಗಳ ನಡುವೆ ನಾವುಗಳು ಬದುಕು ಸವೆಸುತ್ತಿದ್ದೆವೆ ಸೌಲಭ್ಯಗಳನ್ನು ಕಲ್ಪಿಸಬೇಕಾದ ಅಧಿಕಾರಿಗಳು ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳಲು ಸಂತ್ರಸ್ತರನ್ನು ಬಲಿಪಶು ಮಾಡುತ್ತಿದ್ದಾರೆ ಕೂಡಲೇ ಸಂತ್ರಸ್ತರ ಮೇಲೆ ದಾಖಲು ಮಾಡಿರುವ ಪ್ರಕರಣಗಳನ್ನು ಹಿಂಪಡೆದುಕೊಂಡು ಸಂತ್ರಸ್ತರ ಕ್ಷಮೆಯಾಚಿಸಬೇಕು ಇಲ್ಲದಿದ್ದಲ್ಲಿ ಕೊಲ್ಹಾರ ಮುಳುಗಡೆ ಸಂತ್ರಸ್ತರು ಹಾಗೂ ಸುತ್ತಮುತ್ತಲಿನ ಮುಳುಗಡೆಯಾದ ಗ್ರಾಮಗಳ ಸಂತ್ರಸ್ತರೊಂದಿಗೆ ಉಗ್ರ ಹೋರಾಟಕ್ಕೆ ಅಣಿಯಾಗುತ್ತಿದ್ದೆವೆ ಎಂದು ಅವರು ಹೇಳಿದರು.
ಬಸವರಾಜ ಕೊಠಾರಿ ಮಾತನಾಡುತ್ತಾ ಹಳೆ ಕೊಲ್ಹಾರ ವ್ಯಾಪ್ತಿಯಲ್ಲಿ ನಮ್ಮ ಅಂಗಡಿ ಮಳಿಗೆ ಇತ್ತು ನಮಗೆ ವಾಣಿಜ್ಯ ನಿವೇಶನ ಹಂಚಿಕೆ ಮಾಡಬೇಕಾಗಿತ್ತು ಆದರೆ ಪುನರ್ವಸತಿ ಅಧಿಕಾರಿಗಳು ವಸತಿ ನಿವೇಶನಕ್ಕೆ ಡಿ.ಡಿ ತುಂಬಿರುವವರಿಗೆ ಮೊನ್ನೆಯಷ್ಟೇ ವಾಣಿಜ್ಯ ನಿವೇಶನ ಹಂಚಿಕೆ ಮಾಡಿ ಅಕ್ರಮವ್ಯಸಗಿದ್ದಾರೆ ಹೀಗಾದರೆ ಹೇಗೆ ಎಂದು ಅಳಲು ತೋಡಿಕೊಂಡರು.
ಜಿ.ಎನ್.ಗಣಿ, ಸಿಂಧೂರ ಬ್ಯಾಲ್ಯಾಳ, ಅನ್ವರ ಕಂಕರಪೀರ, ಬಸಪ್ಪ ಕೊಠಾರಿ, ಅಲ್ಲಾಭಕ್ಷ ಬಿಜಾಪೂರ, ಶಿವಪ್ಪ ಬರಗಿ, ಮಲೀಕ ನದಾಫ, ಜಾವೀದ ಬಿಳಗಿ ಇತರರು ಇದ್ದರು.
ವರದಿ: ಎ.ಎನ್. ಪೀರ್, ತುಮಕೂರು