ಬಿದ್ದರು, ಎದ್ದರು ವಟರಗಪ್ಪೆಯಂತೆ ಜಿಗಿದರು- ಧುಮುಕಿದರು
ಹಿಂದೆ- ಮುಂದೆ ನೋಡದೆ,
ನವವಧುವಿನಂತೆ ಕಂಗೊಳಿಸುತ್ತಿರುವ ಪಂಚರಂಗಿಯ ನವ ನೌಕೆಯ ಹತ್ತಲು ಆತುರ – ಕಾತರ.
ಅಂಗೈಯಲ್ಲಿ ಆಕಾಶ ತೋರಿಸುವ ಚತುರ ನುಡಿಗೆ ಪಟಪಟನೆ ಉರಿಯುವ ದೀಪಕ್ಕೆ ಮುತ್ತಿಡುವ ಪತಂಗಗಳಂತೆ
ಮನಸೋತು ಹಳೆಯ ನೌಕೆಯನ್ನು ದೂರತಳ್ಳಿ
ಈ ಜೀವನ ಅಮರವೆಂದು ಕನಸು ಕಂಡರು.
ದಶಕಗಳು ನಮ್ಮವರು ತಮ್ಮವರೆಂದು
ಪಯಣ ಮಾಡಿಸಿದ ನೌಕೆಯ ಕಥೆ-ವ್ಯಥೆಯಾಗಿಲ್ಲವೇ? ಮುಂದೊಮ್ಮೆ ನವ ನೌಕೆ ಏರಿದವರೆಲ್ಲ
ನಡು ನೀರಲ್ಲಿ ಮುಳುಗುವ ಅರಿವು ಇಲ್ಲದಿರುವುದು ವಿಪರ್ಯಾಸ.
ಪ್ರಲೋಭನೆ ದಿಕ್ಕು ಗೆಡಿಸಿದೆ, ಜಾತಿ-ಧರ್ಮ ಸವಾಲಾಗಿದೆ, ಅಂಧ ಭಕ್ತರ ಮುಗಿಲ ಕೂಗು ಧೂಳು ಹಿಡಿದಿದೆ.
ಗೆದ್ದೆತ್ತಿನ ಬಾಲ ಹಿಡಿದಂತೆ ಜನಪ್ರತಿನಿಧಿಗಳು ,
ನಾವಿಕನ ಹೊಗಳುಭಟ್ಟರು ತಪ್ಪುಗಳಿಗೆ
ತೇಪೆ ಹಾಕುತ್ತಲಿಹರು.
ಅನುಭವ ಹೀನ ಪಕ್ಷವಾಗಲಿ- ನಾಯಕನಾಗಲಿ ನಾಮದ ಬಲವೊಂದಿದ್ದರೆ ಸಾಲದು
ಆತ್ಮ ಸೌಂದರ್ಯ ವಿರಬೇಕು.
ಹತ್ತಿದವರಿಗೂ ಹತ್ತಿಸಿಕೊಂಡವರಿಗೂ
ನಷ್ಟವೇ ನಷ್ಟ .
ಸಮತೋಲನ ವಿಲ್ಲದ ಪ್ರಯಾಣ ದಿಕ್ಕು ತಪ್ಪೀತು
ಓ ಯಾತ್ರಿಕರೇ ,ಎಚ್ಚರ !ಎಚ್ಚರ!