ತುಮಕೂರು: ಶಿರಾ ತಾಲೂಕಿನಲ್ಲಿ ಪ್ರತಿನಿತ್ಯ 50 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಹೈನುಗಾರಿಕೆ ಬಗ್ಗೆ ರೈತರಿಗೆ ಹೆಚ್ಚು ತರಬೇತಿ ನೀಡಿ 1 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವುದು ಈ ನಮ್ಮ ಗುರಿ, ಪ್ರತಿದಿನ 25 ಲೀಟರ್ ಹಾಲು ಉತ್ಪಾದನೆ ಮಾಡಿ ಡೈರಿಗೆ ಹಾಕುವ 160 ರೈತರಿಗೆ ತರಬೇತಿ ನೀಡಿ, ಉತ್ಪಾದನೆಯಲ್ಲಿ ಹೆಚ್ಚಳ ಮಾಡಿಕೊಳ್ಳುವಂತೆ ಅರಿವು ಮೂಡಿಸಲಾಗಿದ್ದು, ಹೆಚ್ಚು ಹಾಲು ಉತ್ಪಾದನೆಯಿಂದ ಬಡ ರೈತ ಕುಟುಂಬಗಳ ಆರ್ಥಿಕ ಸದೃಢತೆಗೆ ಮತ್ತಷ್ಟು ಬಲ ನೀಡಲಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಹೇಳಿದರು.
ಶಿರಾ ನಗರದ ನಂದಿನಿ ಕ್ಷೀರ ಭವನದಲ್ಲಿರುವ ಡಾ.ವರ್ಗಿಸ್ ಕುರಿಯನ್ ಸಭಾಂಗಣದಲ್ಲಿ ಮಂಗಳವಾರ ಪ್ರಗತಿಪರ ಹಾಲು ಉತ್ಪಾದಕರಿಗೆ ಆಯೋಜಿಸಿದ್ದ ವೈಜ್ಞಾನಿಕ ಹೈನುಗಾರಿಕೆ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವೈಜ್ಞಾನಿಕ ಹೈನುಗಾರಿಕೆ ಬಗ್ಗೆ ಸಂಪನ್ಮೂಲ ವ್ಯಕ್ತಿ ನೀಡುವಂತಹ ಮಾಹಿತಿಯನ್ನು ಪಡೆದು ತಮ್ಮ ಹೈನುಗಾರಿಕೆಯಲ್ಲಿ ಅಳವಡಿಸಿಕೊಂಡರೆ, ಯಶಸ್ವಿ ಹಾಲು ಉತ್ಪಾದಕರಾಗಬಹುದು. ಹಾಲು ಉತ್ಪಾದಕರು ಮ್ಯಾಟ್ ಸೇರಿದಂತೆ ಇತರೆ ಸಲಕರಣೆಗಳನ್ನು ನೀಡುವಂತೆ ಮನವಿ ಮಾಡಿದ್ದು, ಏಪ್ರಿಲ್ ನಲ್ಲಿ ನಡೆಯುವ ಹಾಲು ಒಕ್ಕೂಟದ ಬಜೆಟ್ ನಲ್ಲಿ ಇಂತಹ ಸೌಲಭ್ಯಗಳಿಗೆ ಹೆಚ್ಚು ಆದ್ಯತೆ ನೀಡಿ ಅತಿ ಶೀಘ್ರದಲ್ಲಿಯೇ ಹಾಲು ಉತ್ಪಾದಕರಿಗೆ ಬೇಕಾಗುವಂತಹ ಸೌಲಭ್ಯಗಳನ್ನು ವಿತರಣೆ ಮಾಡುತ್ತೇವೆ. ಹಾಲು ಒಕ್ಕೂಟ ಉತ್ಪಾದಕರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಲು ಬದ್ಧವಾಗಿದ್ದು , ಶಿರಾ ತಾಲೂಕಿನಲ್ಲಿ ರೈತರು ಹಾಲು ಉತ್ಪಾದನೆ ಹೆಚ್ಚಳ ಮಾಡಿಕೊಳ್ಳುವುದರ ಜೊತೆಗೆ, ಹಾಲಿನ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಎಂದರು.
ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸನ್ ಮಾತನಾಡಿ, ಶಿರಾ ತಾಲೂಕಿನ ರೈತರು ಡೈರಿಗಳಿಗೆ ಹಾಕುತ್ತಿರುವ ಹಾಲಿನ ಗುಣಮಟ್ಟ ಉತ್ತಮವಾಗಿರುವ ಕಾರಣ ಶಿರಾ ಹಾಲನ್ನು ಬಾಂಬೆಗೆ ಕಳಿಸುವಂತಹ ಕೆಲಸ ಒಕ್ಕೂಟ ಮಾಡುತ್ತಿದೆ. ಹಾಲಿನ ಉತ್ಪಾದನೆಯನ್ನು ಹೆಚ್ಚಳದ ಜೊತೆಗೆ ಇದೇ ರೀತಿ ಗುಣಮಟ್ಟದ ಹಾಲನ್ನು ನೀಡಿದರೆ ಇತರ ರಾಜ್ಯಗಳಿಗೂ ಕಳಿಸಲು ಸಹಕಾರಿಯಾಗುತ್ತದೆ. ಅಲ್ಲದೆ ಇದರಿಂದ ಬಂದಂತಹ ಲಾಭಾಂಶವನ್ನು ಈ ಭಾಗದ ಹಾಲು ಉತ್ಪಾದಕರಿಗೆ ನೀಡಲು ಸಹಕಾರಿಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ 25 ಲೀಟರ್ ಹಾಲು ನಿತ್ಯ ಡೈರಿಗೆ ಹಾಕುವ 160 ಪ್ರಗತಿಪರ ರೈತರಿಗೆ ಖನಿಜ ಮಿಶ್ರಣ, ಕೆಚ್ಚಲು ಬಾವು ಔಷಧಿ, ಹೈನುಗಾರಿಕೆ ಕೈಪಿಡಿಯನ್ನು ವಿತರಣೆ ಮಾಡಲಾಯಿತು.
ವೈಜ್ಞಾನಿಕ ಹೈನುಗಾರಿಕೆ ಬಗ್ಗೆ ಸಂಪನ್ಮೂಲ ವ್ಯಕ್ತಿ ಡಾ.ರಾಘವನ್ ಉಪನ್ಯಾಸ ನೀಡಿದರು. ಕೆಎಂಎಫ್ ವ್ಯವಸ್ಥಾಪಕ ರಾದ ಚಂದ್ರಶೇಖರ್, ಶ್ರೀನಿವಾಸ್, ಶಿರಾ ಒಕ್ಕೂಟದ ಉಪ ವ್ಯವಸ್ಥಾಪಕ ಗಿರೀಶ್, ವಿಸ್ತರಣಾಧಿಕಾರಿಗಳಾದ ಚೈತ್ರ, ಕಿರಣ್ ಕುಮಾರ್, ಸಮಾಲೋಚಕ ದಯಾನಂದ್, ಪಶುವೈದ್ಯ ಡಾ. ಶ್ರೀಕಾಂತ್, ಕೆಮಿಸ್ಟರ್ ಪಿ.ಎಂ.ಬಾಬಾ ಫಕೃದೀನ್, ಹನುಮಂತರಾಯ ಸೇರಿದಂತೆ ಶಿರಾ ತಾಲೂಕಿನ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪ್ರಗತಿಪರ ರೈತರು, ಉತ್ಪಾದಕರು ಉಪಸ್ಥಿತರಿದ್ದರು.
ವರದಿ: ಇಸ್ಮಾಯಿಲ್ ಜಭಿವುಲ್ಲಾ ಖಾನ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4