ತುಮಕೂರು: ಕಚೇರಿಗಳಿಗೆ ರೈತರ ಅಲೆದಾಟ ತಪ್ಪಿಸಲು ನಮ್ಮ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇ-ಪೌತಿ, ಕಂದಾಯ ಗ್ರಾಮ ಹಕ್ಕು ಪತ್ರ, ದರಖಾಸ್ತು ಮೋಡಿ ಮತ್ತು ಪೋಡಿಮುಕ್ತ ಅಭಿಯಾನದ ಮೂಲಕ ರೈತರಿಗೆ ಯಾವುದೇ ಶ್ರಮವಿಲ್ಲದೆ ಯೋಜನೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಕರ್ನಾಟಕ ಸರ್ಕಾರದ 3 ವರ್ಷದ ಸಾಧನೆಯ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಈ 3 ವರ್ಷದ ಅವಧಿಯಲ್ಲಿ ತುಮಕೂರು ಜಿಲ್ಲೆಯ 1,52,492 ಫಲಾನುಭವಿಗಳಿಗೆ ವಿವಿಧ ಯೋಜನೆಗಳಡಿ ಹಕ್ಕು ಪತ್ರ ನೀಡಲಾಗಿದೆ. ಸರ್ಕಾರದ 3 ವರ್ಷಗಳ ಸಾಧನೆ ಏನು ಎನ್ನುವವರಿಗೆ ಇದೇ ಉತ್ತರ ಎಂದರು.
ಮಂಜೂರಾದ ಜಮೀನುಗಳಿಗೆ ರೈತರು 50 ವರ್ಷ ಕಳೆದರೂ ಹಕ್ಕು ದಾಖಲೆ ಪಡೆಯಲು ಸಾಧ್ಯವಾಗಿರಲಿಲ್ಲ. ಸರ್ವೆ ಸ್ಕೆಚ್, ಪೋಡಿ ಆಗದೆ ರೈತರು ತ್ರಿಶಂಕು ಸ್ಥಿತಿಯಲ್ಲಿದ್ದರು. ಹಿಂದಿನ ಸರ್ಕಾರ 2018 ರಿಂದ 2013 ರ ಅವಧಿಯಲ್ಲಿ ಕೇವಲ 8800 ಪೋಡಿ ದುರಸ್ತಿ ಮಾಡಿತ್ತು. ಈಗ ನಮ್ಮ ಸರ್ಕಾರ 2 ಲಕ್ಷದ 53 ಸಾವಿರ ರೈತರ ಪೋಡಿ ದುರಸ್ತಿ ಮಾಡಿದ್ದೇವೆ. ಇಷ್ಟು ಮಂದಿ ರೈತರು ಅರ್ಜಿ ಹಾಕಿ, ಅರ್ಜಿ ಹಾಕದೇ ಇದ್ದರೂ ನಮ್ಮ ಅಧಿಕಾರಿಗಳನ್ನೇ ಕಳುಹಿಸಿ ಮಾಹಿತಿ ಪಡೆದು ಈ ಕೆಲಸ ಮಾಡಲಾಗಿದೆ. ಅದೇ ರೀತಿ 2 ಲಕ್ಷ 53 ಸಾವಿರ ರೈತರ ಪೋಡಿ ದುರಸ್ತಿ ಮಾಡಿದ್ದೇವೆ. ತುಮಕೂರು ಜಿಲ್ಲೆಯಲ್ಲೇ 26,000 ರೈತರು ಈ ಯೋಜನೆಯ ಅನುಕೂಲ ಪಡೆದಿದ್ದಾರೆ. ಹಿಂದಿನ ಸರ್ಕಾರ ಮಾಡದ ಕೆಲಸವನ್ನು ನಾವು ಈಗ ಮಾಡಿದ್ದೇವೆ. ಇದು ಸರ್ಕಾರದ ಸಾಧನೆಯಲ್ಲವೇ ಎಂದು ಅವರು ಟೀಕಾಕಾರರಿಗೆ ಇದೇ ನಮ್ಮ ಉತ್ತರ ಎಂದರು.
ಯಾವ ಪುರುಷಾರ್ಥಕ್ಕೆ ಈ ಸಮಾವೇಶ ಎಂದು ಕೆಲವರು ಚಡಪಡಿದ್ದಾರೆ, ಹಾಗಾದರೆ ಈ 3 ವರ್ಷಗಳ ಅವಧಿಯಲ್ಲಿ ನಾವು ಇಷ್ಟು ಸಾಧನೆ ಮಾಡಿದ್ದೇವಲ್ಲ, ಈ ಕೆಲಸವನ್ನು ನೀವೇ ಮಾಡಬಹುದಿತ್ತಲ್ಲ? ಏಕೆ ಉಳಿಸಿಕೊಂಡಿದ್ದಿರಿ? ನಿಮ್ಮ ದುರಾಡಳಿತವನ್ನು ನೋಡಿಯೇ ಜನ ನಮಗೆ ಓಟು ಹಾಕಿದ್ದು, ಅವರ ಕೆಲಸ ನಾವು ಮಾಡುತ್ತಿದ್ದೇವೆ. ಹಿಂದೆ ಒಂದು ಪೌತಿ ಖಾತೆ ಮಾಡಿಸುವುದೂ ಕಷ್ಟ ಇತ್ತು. ಜಮೀನಿನ ಮಾಲೀಕ ಸತ್ತರೆ ಖಾತೆಗಾಗಿ ಮಧ್ಯವರ್ತಿಗಳ ಮೊರೆ ಹೋಗಬೇಕಾಗಿತ್ತು. ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಜಮೀನುಗಳು ಸತ್ತವರ ಹೆಸರಿನಲ್ಲಿದ್ದವು.. ಭೂ ಗ್ಯಾರಂಟಿ ಯೋಜನೆಯಡಿ ಈಗ 14 ಲಕ್ಷದ 33 ಸಾವಿರ ರೈತರ ಪೌತಿ ಖಾತೆ ಮಾಡಿಕೊಡಲಾಗಿದೆ. ಜಿಲ್ಲೆಯಲ್ಲಿ 1 ಲಕ್ಷದ 6 ಸಾವಿರ ಪೌತಿ ಖಾತೆಗಳನ್ನು ಮಾಡಿಕೊಡಲಾಗಿದೆ ಎಂದರು.
ಹಿಂದೆ ಬಹಳಷ್ಟು ದೂರು ಕೇಳಿ ಬರುತ್ತಿದ್ದವು. ಕೆಲವು ರೈತರ ದಾಖಲೆಗಳೇ ತಾಲ್ಲೂಕು ಕಚೇರಿಯಲ್ಲಿ ಕಳೆದು ಹೋಗುತ್ತಿದ್ದವು. ಇನ್ನು ಕೆಲವರ ದಾಖಲೆಗಳು ಸುಲಭವಾಗಿ ಸಿಗುತ್ತಿದ್ದವು. ಇದನ್ನು ತಪ್ಪಿಸಲು ನಾವು ಮುಖ್ಯಮಂತ್ರಿ ಉಪ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಭೂ ದಾಖಲೆಗಳ ಸ್ಕ್ಯಾನಿಂಗ್ ಹಾಗೂ ಡಿಜಿಟಲೀಕರಣ ಯೋಜನೆ ಕೈಗೊಂಡೆವು. ಇನ್ನು 3 ತಿಂಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಸ್ಕ್ಯಾನಿಂಗ್ ಕಾರ್ಯ ಮುಗಿದು ರೈತರ ದಾಖಲೆಗಳು ಆನ್ ಲೈನ್ ನಲ್ಲಿ ಸಿಗುವಂತಾಗುತ್ತದೆ. ಇನ್ನು ಮುಂದೆ ಯಾರೂ ಮೋಸ ಮಾಡಲು ಸಾಧ್ಯವಿಲ್ಲ ಎಂದರು.
ನ್ಯಾಯಾಲಯಗಳಲ್ಲಿ ವಿಳಂಬ ತಪ್ಪಿಸಲು ಕ್ರಮ:
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಅವಧಿ ಮುಗಿದ 10,724 ಪ್ರಕರಣಗಳು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ವಿಚಾರಣಾ ಹಂತದಲ್ಲಿ ಉಳಿದಿದ್ದವು. ಈಗ ಅವುಗಳಿಗೆ ವೇಗ ನೀಡಿ ಕೇವಲ 172 ಅವಧಿ ಮೀರಿದ ಪ್ರಕರಣಗಳು ಮಾತ್ರ ಇವೆ. ಅದೇ ರೀತಿ ತಹಶೀಲ್ದಾರ್ ನ್ಯಾಯಾಲಯದಲ್ಲಿಯೂ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಲು ಕ್ರಮ ಕೈಗೊಂಡಿದೆ. ಜಿಲ್ಲೆಯಲ್ಲಿ ಹಕ್ಕು ಪತ್ರ ಇಲ್ಲದ 874 ಕಂದಾಯ ಗ್ರಾಮಗಳನ್ನು ಗುರುತಿಸಲಾಗಿದೆ. ಗೊಲ್ಲರಹಟ್ಟಿ, ನಾಯಕನಹಟ್ಟಿ, ಲಂಬಾಣಿ ತಾಂಡಾ ಇಲ್ಲಿ ವಾಸಿಸುವ ಜನ 50 – 70 ವರ್ಷಗಳಿಂದ ಬದುಕು ನಡೆಸುತ್ತಿದ್ದರೂ ಅವರ ಹೆಸರಿಗೆ ಹಕ್ಕು ಪತ್ರ ನೀಡಿರಲಿಲ್ಲ. ಇಂತಹವರಿಗೆ ಹಕ್ಕು ಪತ್ರ ನೀಡುವ ಯೋಜನೆ ಮುಂದುವರಿದಿದೆ ಎಂದರು.
ಕಾರ್ಯಕರ್ತರಿಗೆ ಸಲಹೆ:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಕಾರ್ಯಕರ್ತರಿಗೆ ಬಾಕಿ ಎರಡು ವರ್ಷಗಳ ಅವಧಿಯಲ್ಲಾದರೂ ಅಧಿಕಾರ ದೊರಕಿಸಬೇಕೆಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರದ ಮೂರನೇ ವರ್ಷದ ಸಾಧನೆ-ಸೇವೆ ಮತ್ತು ಸಮರ್ಪಣಾ ಸಮಾವೇಶದಲ್ಲಿ ಮಾತನಾಡಿದ ಅವರು ಕಳೆದ ಮೂರು ವರ್ಷದಲ್ಲಿ ಜನಪರವಾದ ಯಶಸ್ವಿ ಆಡಳಿತ ನೀಡಲಾಗಿದೆ ಎಂದು ಹೇಳಿದರು. ಇನ್ನೆರಡು ವರ್ಷ ಅವಧಿಯಿದೆ. ಜನರ ಆಶಯದಂತೆ ನಮ್ಮ ಸರ್ಕಾರ ಕೆಲಸ ನಿರ್ವಹಿಸಲಿದ್ದು, ಬಾಕಿ ಯೋಜನೆಗಳನ್ನು ಪೂರ್ಣಗೊಳಿಸಲಿದೆ ಎಂದರು. ಈಗಾಗಲೇ ಬಹಳಷ್ಟು ವಿಳಂಬವಾಗಿದೆ. ಕಾರ್ಯಕರ್ತರ ಶ್ರಮದಿಂದ ನಾವು ಶಾಸಕರಾಗಿ ಸಚಿವರಾಗಿದ್ದೇವೆ. ಕಾರ್ಯಕರ್ತರಿಗೆ ಶಕ್ತಿ ತುಂಬಬೇಕಿದೆ. ಇನ್ನೆರಡು ವರ್ಷಗಳ ಅವಧಿಗೆ ಮತ್ತೆ ಚುನಾವಣೆ ಎದುರಿಸಬೇಕು, ಯುದ್ಧಕ್ಕೆ ಸಿದ್ಧವಾಗಬೇಕು. ಅದಕ್ಕೂ ಮುನ್ನ ಕಾರ್ಯಕರ್ತರಿಗೆ, ನಿಗಮಮಂಡಳಿಗಳು ಸೇರಿದಂತೆ ಇತರೇಡೆಗಳಲ್ಲಿ ಅವಕಾಶ ಕಲ್ಪಿಸಿ ಹುರಿದುಂಬಿಸಬೇಕಿದೆ ಎಂದು ಹೇಳಿದರು.
ಸಾಧನಾ ಸಮಾವೇಶಕ್ಕೆ ಸರ್ಕಾರದ ಬಹುತೇಕ ಸಚಿವರು, ಶಾಸಕರು, ಅಧಿಕಾರಿ ವರ್ಗದವರು ಭಾಗವಹಿಸಿದ್ದರಿಂದ ಇಡೀ ಸರ್ಕಾರವೇ ತುಮಕೂರಿಗೆ ಬಂದಂತಾಗಿತ್ತು. ಸಚಿವರುಗಳಾದ ಎಚ್. ಕೆ. ಪಾಟೀಲ್, ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ, ಭೀಮಣ್ಣ ಖಂಡ್ರೆ, ಲಕ್ಷ್ಮಿ ಹೆಬ್ಬಾಳ್ ಕರ್, ಮಧು ಬಂಗಾರಪ್ಪ, ರುದ್ರಪ್ಪ ಲಮಾಣಿ, ಶಿವಾನಂದ ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ಬೈರತಿ ಸುರೇಶ್, ಎಚ್.ಎಂ.ರೇವಣ್ಣ, ಕೆ.ಜೆ. ಜಾರ್ಜ್, ಡಾ.ಎಂ.ಸಿ. ಸುಧಾಕರ್, ಜಮೀರ್ ಅಹಮದ್ ಖಾನ್, ಸೇರಿದಂತೆ ಹಿರಿಯ-ಕಿರಿಯ ಸಚಿವರು ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದರ್ಶಿಗಳು, ಅಧಿಕಾರಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 12 ಗಂಟೆ 10 ನಿಮಿಷಕ್ಕೆ ವೇದಿಕೆಗೆ ಆಗಮಿಸಿದರು. ಅವರು ಬರುವ ವೇಳೆಗೆ ಅದಾಗಲೇ ಆಗಮಿಸಿದ್ದ ಶಾಸಕ ಕೆ.ಷಡಕ್ಷರಿ, ಲಕ್ಷ್ಮಿ ಹೆಬ್ಬಾಳ್ ಕರ್, ಲೀಲಿ ಅಹಮದ್, ಜಮೀರ್ ಅಹಮದ್ ಖಾನ್, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಮಾತನಾಡಿ, ಸರ್ಕಾರದ ಸಾಧನೆಗಳನ್ನು ವಿವರಿಸಿದರು.
ಬಿಜೆಪಿಯನ್ನು ಬುಡಸಮೇತ ಕೀಳುವ ಕಾಲ ದೂರವಿಲ್ಲ: ಖಂಡ್ರೆ
ಬರೀ ಸುಳ್ಳುಗಳನ್ನು ಹೇಳುತ್ತಾ, ಬೆಲೆ ಏರಿಕೆಯ ಮೂಲಕ ಬಡ, ಮಧ್ಯಮವರ್ಗದವರ ಬದುಕನ್ನು ದುಸ್ತರ ಮಾಡಿರುವ ಬಿಜೆಪಿಯನ್ನು ಜನರೇ ಬುಡ ಸಮೇತ ಕಿತ್ತು ಹಾಕುವ ಕಾಲ ದೂರವಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ ತುಂಬಿದ ಸಂಭ್ರಮದಲ್ಲಿ ತುಮಕೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು ಪಂಚ ರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ದರ ಹೆಚ್ಚಿಸಿ ಬಡ, ಮಧ್ಯಮ ವರ್ಗದವರ ನೆಮ್ಮದಿಗೆ ಕೊಳ್ಳಿ ಇಟ್ಟಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು. ನುಡಿದಂತೆ ನಡೆಯುತ್ತಿರುವ ಕಾಂಗ್ರೆಸ್ ಪಂಚ ಗ್ಯಾರಂಟಿಗಳನ್ನು ಯಶಸ್ವಿ ಅನುಷ್ಠಾನ ಮಾಡುವ ಮೂಲಕ 1 ಕೋಟಿಗೂ ಹೆಚ್ಚು ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆ ತಂದಿದ್ದು, 2028ರ ಚುನಾವಣೆಯಲ್ಲೂ ಜಯಭೇರಿ ಬಾರಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪಂಚ ಗ್ಯಾರಂಟಿಗಳು ಅಸಮಾನತೆಯ ನಿವಾರಣೆಯ ನಿಟ್ಟಿನಲ್ಲಿ ಬಹುದೊಡ್ಡ ಶಕ್ತಿಯಾಗಿದೆ ಎಂದು ಈಶ್ವರ ಖಂಡ್ರೆ, ನಮ್ಮ ಗ್ಯಾರಂಟಿಗಳನ್ನು ಟೀಕಿಸುತ್ತಿದ್ದ ಪಕ್ಷಗಳೇ ಇಂದು, ಗ್ಯಾರಂಟಿ ಹೈಜಾಕ್ ಮಾಡುತ್ತಿವೆ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


