ಪಾವಗಡ: ತಾಲೂಕಿನ ಕನಿಕಲಬಂಡೆ ಗ್ರಾಮದಲ್ಲಿ ರಾಜಕೀಯ ವೈಷಮ್ಯ ಹಾಗೂ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಜಾತಿ ನಿಂದನೆ ಮತ್ತು ಜೀವ ಬೆದರಿಕೆ ಪ್ರಕರಣಗಳು ದಾಖಲಾಗಿವೆ. ಗ್ರಾಮದ ವೆಂಕಟೇಶ್ ಹಾಗೂ ನರಸಿಂಹಮೂರ್ತಿ ಎಂಬುವವರ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಪ್ರಕರಣ 1: ಚುನಾವಣಾ ರಾಜಕೀಯ ಹಾಗೂ ಬೆದರಿಕೆ ಗ್ರಾಮದ ನರಸಿಂಹ ಎಂಬುವವರು ದೂರು ನೀಡಿದ್ದು, ತಾವು ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಅಡ್ಡಗಟ್ಟಿದ ವೆಂಕಟೇಶ್ ಮತ್ತು ನರಸಿಂಹಮೂರ್ತಿ ಆಯುಧ ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. “ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅನಿಲ್ಗೆ ಬೆಂಬಲ ನೀಡಬಾರದು. ಈ ಹಿಂದಿನಂತೆ ನಮ್ಮ ಪತ್ನಿಗೆ ಅವಿರೋಧ ಆಯ್ಕೆಯಾಗಲು ಬೆಂಬಲ ನೀಡಬೇಕು” ಎಂದು ಒತ್ತಾಯಿಸಿ, ಜಾತಿ ನಿಂದನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣ 2: ಜಮೀನು ವಿವಾದ ಮತ್ತು ಹಲ್ಲೆ ಯತ್ನ ಅದೇ ಗ್ರಾಮದ ಗಿರಿಯಪ್ಪ ಎಂಬುವವರು ಮತ್ತೊಂದು ದೂರು ದಾಖಲಿಸಿದ್ದಾರೆ. ತಮ್ಮ ತಾಯಿ ಕೆಲಸ ಮಾಡುತ್ತಿದ್ದಾಗ ಸ್ಥಳಕ್ಕೆ ಬಂದ ಆರೋಪಿಗಳು, ಜಮೀನು ಬರೆದುಕೊಡುವಂತೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಅಕ್ಕಲಪ್ಪ ಎಂಬುವವರಿಗೂ ಫೋನ್ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಪಾವಗಡ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:


