ಪುನಿತ್ ರಾಜ್ಕುಮಾರ್ ಅವರ ಮೈಸೂರಿನ ಪ್ರೀತಿಯ ಶಕ್ತಿಧಾಮದ ಹೆಣ್ಣು ಮಕ್ಕಳ ಜೊತೆಗೂಡಿ ನಟ ಡಾ.ಶಿವರಾಜ್ ಕುಮಾರ್ ದಂಪತಿ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಪುನೀತ್ ರಾಜ್ ಕುಮಾರ್ ನಿಧನ ನಂತರ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು ಮೈಸೂರಿನಲ್ಲಿರುವ ಶಕ್ತಿಧಾಮದ ಮಕ್ಕಳು. ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಹುಟ್ಟು ಹಾಕಿದ ಸಂಸ್ಥೆಯನ್ನು ಪುನೀತ್ ರಾಜ್ ಕುಮಾರ್ ಅತ್ಯಂತ ಕಾಳಜಿಯಿಂದ ಅಲ್ಲಿರುವ ಹೆಣ್ಣು ಮಕ್ಕಳನ್ನು ಸಾಕಿ ಸಲಹುವ ಜವಾಬ್ದಾರಿ ಹೊತ್ತಿದ್ದರು.ಆದರೆ, ಪುನೀತ್ ರಾಜ್ ಕುಮಾರ್ ನಿಧನದ ನಂತರ ಅವರಿಗೆ ಅನಾಥ ಭಾವ ಕಾಡಬಾರದು ಎಂಬ ಕಾರಣಕ್ಕೆ ಸ್ವತಃ ಡಾ.ಶಿವರಾಜ್ ಕುಮಾರ್ ಅವರೇ ಶಕ್ತಿಧಾಮದ ಹೆಣ್ಣುಮಕ್ಕಳನ್ನು ಚಿಕ್ಕಬಳ್ಳಾಪುರದ ನಂದಿ ಗ್ರಾಮಕ್ಕೆ ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದರು.
ಬೆಳಗ್ಗೆ ನಂದಿಯಲ್ಲಿರುವ ಜಗದ್ವಿಖ್ಯಾತ ಭೋಗ ನಂದೀಶ್ವರ ಸ್ವಾಮಿ ದೇವಾಲಯಕ್ಕೆ ಬಂದಿದ್ದ ಮಕ್ಕಳು ಸಾಲಿನಲ್ಲಿ ಹೋಗಿ ದೇವರ ದರ್ಶನ ಪಡೆದರು. ಮಕ್ಕಳೊಂದಿಗೆ ಶಿವರಾಜ್ ಕುಮಾರ್ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ದೇವರ ದರ್ಶನ ಪಡೆದರು.ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, ಶಕ್ತಿಧಾಮದ ಹೆಣ್ಣು ಮಕ್ಕಳಿಗೆ ನಾವು ಬೇರೆಯವರು , ನಾವೇ ಬೇರೆ ಎಂಬ ಕಲ್ಪನೆ ಬರಬಾರದು ಎಂಬ ಕಾರಣಕ್ಕೆ ನಾವೂ ಅವರ ಜೊತೆಗೆ ಬಂದಿದ್ದೇವೆ. ನಾವು ಮಾತ್ರವಲ್ಲ. ಇಡೀ ರಾಜ್ ಕುಮಾರ್ ಕುಟುಂಬ ಸೇರಿದಂತೆ ಹಲವರ ಆಶೀರ್ವಾದ ಈ ಮಕ್ಕಳ ಮೇಲೆ ಇದೆ ಎಂದರು.
1999ರಲ್ಲಿ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರು ಹುಟ್ಟು ಹಾಕಿದ ಸಂಸ್ಥೆ ಶಕ್ತಿಧಾಮ. ಹೆಣ್ಣು ಮಕ್ಕಳಿಗಾಗಲೇ ಇರುವ ಸಂಸ್ಥೆ ಇದು. ಅವರಿಗೆ ವಸತಿ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ಆ ಮಕ್ಕಳಿಗೆ ಅನಾಥ ಪ್ರಜ್ಞಾ ಕಾಡಬಾರದು ಎಂಬ ಕಾರಣಕ್ಕೆ ನಾವು ಆಗಾಗ್ಗೆ ಈ ರೀತಿಯ ಶಿಕ್ಷಣೇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ. ಅವರಲ್ಲಿ ಆ ರೀತಿಯ ಭಾವನೆಯೇ ಬರಬಾರದು ಎಂಬುದು ನಮ್ಮ ಉದ್ದೇಶ ಎಂದರು.
ಸದ್ಯ ಶಕ್ತಿಧಾಮದಲ್ಲಿ 150 ಹೆಣ್ಣು ಮಕ್ಕಳಿದ್ದಾರೆ. ಈ ಬಾರಿಯಿಂದ ಅವರ ಸಂಖ್ಯೆ 200ಕ್ಕೆ ಏರಿಕೆಯಾಗಿದ್ದು, ನಮ್ಮ ಇಡೀ ಕುಟುಂಬ ಅವರನ್ನು ನೋಡಿಕೊಳ್ಳಲಿದೆ ಎಂದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB