ಮಂಗಳೂರು: ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದ 6 ಮಂದಿಯಿದ್ದ ಅಪರಿಚಿತರ ತಂಡ ಉದ್ಯಮಿಯೊಬ್ಬರ ಮನೆಯಿಂದ 30 ಲಕ್ಷ ರೂಪಾಯಿ ದೋಚಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪಟ್ಟಣದಲ್ಲಿ ನಡೆದಿದೆ.
ಜನವರಿ 3ರ ರಾತ್ರಿ ಈ ಘಟನೆ ನಡೆದಿದೆ. ಕೊಳ್ನಾಡು ನಿವಾಸಿ ಹಾಗೂ ಕೃಷಿಕ, ಬೀಡಿ ಉದ್ಯಮಿ ಮೊಹಮ್ಮದ್ ಇಕ್ಬಾಲ್(27) ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ತಮಿಳುನಾಡು ನೋಂದಣಿಯ ವಾಹನದಲ್ಲಿ ರಾತ್ರಿ 8:10ರ ಸುಮಾರಿಗೆ ಬಂದ ದರೋಡೆ ಕೋರರು, ತಾವು ಇಡಿ ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದು, ಮನೆಯನ್ನು ಶೋಧಿಸಲು ಆದೇಶವಿದೆ ಎಂದು ಹೇಳಿದ್ದಾರೆ. ಮನೆ ಪ್ರವೇಶಿಸಿದ ನಂತರ, ಅವರು ಶೋಧ ನಡೆಸುವ ಮೊದಲು ಕುಟುಂಬ ಸದಸ್ಯರಿಂದ ಐದು ಮೊಬೈಲ್ ಫೋನ್ ಗಳನ್ನು ಕಿತ್ತುಕೊಂಡಿದ್ದಾರೆ.
ತಪಾಸಣೆ ವೇಳೆ, ವ್ಯವಹಾರದ ಉದ್ದೇಶದಿಂದ ಬೀರುದಲ್ಲಿಟ್ಟಿದ್ದ 25–30 ಲಕ್ಷ ರೂ. ನಗದನ್ನು ತೆಗೆದುಕೊಂಡು ಹೋಗಿದ್ದಾರೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಮನೆಯಲ್ಲಿ ಇಡಲು ಅನುಮತಿ ಇಲ್ಲ. ಹೀಗಾಗಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ರಾತ್ರಿ 10.30ಕ್ಕೆ, ವಶಪಡಿಸಿಕೊಂಡ ನಗದಿಗೆ ಸೂಕ್ತ ದಾಖಲೆಗಳನ್ನು ಒದಗಿಸಿ, ಬೆಂಗಳೂರಿನ ಕಚೇರಿಯಿಂದ ಹಣವನ್ನು ಸಂಗ್ರಹಿಸಬಹುದು ಎಂದು ಕುಟುಂಬಕ್ಕೆ ಭರವಸೆ ನೀಡಿ ನಿವಾಸದಿಂದ ತೆರಳಿದರು ಎಂದು ಉದ್ಯಮಿ ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ ನಂತರ, ಇಡಿ ಅಧಿಕಾರಿಗಳಂತೆ ಸೋಗಿನಲ್ಲಿ ಬಂದವರು ವಂಚಕರು ಎಂದು ಅರಿತುಕೊಂಡ ನಂತರ ಇಕ್ಬಾಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx