ಮಧುಗಿರಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಸ್ಥಾನಗಳನ್ನು ಗಳಿಸಬಹುದು. ಪದವಿಯ ಜೊತೆಗೆ ಹಲವಾರು ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು. ಜೀವನದಲ್ಲಿ ಬರುವ ಹಲವಾರು ಅಡೆತಡೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಸದೃಢ ಜೀವನ ಕಟ್ಟಿಕೊಳ್ಳಬೇಕು. ಜೀವನದಲ್ಲಿ ಅವಕಾಶವಂಚಿತರಾಗಿ ಹತಾಶರಾಗುವ ಬದಲು, ಸಾಧನೆಗೆ ಹಾತೊರೆಯಬೇಕು. ಭವಿಷ್ಯದ ಬಗ್ಗೆ ಆಶಾವಾದಿಯಾಗಿರಬೇಕೆಂದು ಬೆಂಗಳೂರಿನ ಪ್ರತಿಷ್ಟಿತ ಸರ್ಕಾರಿ ಆರ್.ಸಿ.ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಕೆ.ಜಯಲಕ್ಷ್ಮಮ್ಮ ಕರೆನೀಡಿದರು.
ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಎಂ.ಕಾಂ. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಓರಿಯೆಂಟೇಶನ್ ಮತ್ತು ವಿಶೇಷ ಉಪನ್ಯಾಸ ಮತ್ತು ಸ್ವಾಗತ ಕಾರ್ಯಕ್ರಮನ್ನುದ್ದೇಶಿಸಿ ಮಾತನಾಡಿದ ಅವರು, ಆಳವಾದ ಅಧ್ಯಯನ, ಸತತ ಪರಿಶ್ರಮದಿಂದ ಯಶಸ್ಸಿನ ಮಂತ್ರ ಅಡಗಿದೆ. ಪ್ರಸಕ್ತ ದಿನಗಳಲ್ಲಿ ಯುಜಿಸಿ, ಐ.ಸಿ.ಎಸ್.ಎಸ್.ಆರ್ ಮತ್ತು ಸರ್ಕಾರಿ ಮತ್ತು ಖಾಸಗೀ ಸಂಶೋಧನಾ ಕೇಂದ್ರಗಳು ಸಂಶೋಧನೆಗೆ ಒತ್ತು ನೀಡಿದ್ದು, ಸ್ನಾತಕೋತ್ತರ ಪದವಿ ಅಧ್ಯಯನ ಜೊತೆಗೆ ಕಿರು ಸಂಶೋಧನೆ ಕೈಗೊಳ್ಳಬೇಕು. ಪದವಿ ಜೊತೆಗೆ ಡ್ಯುಯಲ್ ಡಿಗ್ರಿ ಮಾಡುವ ಅವಕಾಶವಿದೆ. ಸ್ವಯಂ, ಮೂಕ್ಸ್ ಪೋರ್ಟಲ್ಗಳಲ್ಲಿ ಲಭ್ಯವಿರುವ ವಿವಿಧ ಕೋರ್ಸ್ಗಳನ್ನು ಕಲಿತು ಉದ್ಯೋಗಾರ್ಹತೆ ಹೆಚ್ಚಿಸಿಕೊಳ್ಳಬೇಕು. ಮೂನ್ಲೈಟಿಂಗ್ ಕಲ್ಪನೆಯಡಿಯಲ್ಲಿ ತಜ್ಞತೆ ಹೊಂದಿರುವ ಉದ್ಯೋಗಿ ಅಧಿಕೃತ ಉದ್ಯೋಗದ ಸಮಯದ ನಂತರ ಹೆಚ್ಚುವರಿ ಸಂಪಾದನೆಗಾಗಿ ಅಥವಾ ಆತ್ಮತೃಪ್ತಿಗಾಗಿ ಬೇರೆ ಬೇರೆ ಉದ್ಯೋಗಗಳನ್ನು ಕೈಗೊಳ್ಳಬಹುದು. ಕೊರೋನಾ ನಂತರ ಕಾಲಘಟ್ಟದಲ್ಲಿ ಆನ್ಲೈನ್, ವರ್ಚುವಲ್ ಅವಕಾಶಗಳು ಎಲ್ಲೆಡೆ ವ್ಯಾಪ್ತಿ ವಿಸ್ತರಿಸಿವೆ.ಈ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಟಿ.ಎನ್.ನರಸಿಂಹಮೂರ್ತಿ ಮಾತನಾಡಿ ಬದಲಾಗುತ್ತಿರುವ ಜಗತ್ತಿನಲ್ಲಿ ವಿದ್ಯಾರ್ಥಿಗಳು ಸಮಯಕ್ಕೆ ಆದ್ಯತೆಕೊಟ್ಟು, ವಿವಿಧ ಆಯಾಮಗಳಲ್ಲಿ ಅಧ್ಯಯನಶೀಲರಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸವಾಲಿನಿಂದ ಎದುರಿಸಿಬೇಕು. ವಿವಿಧ ಕ್ಷೇತ್ರಗಳಲ್ಲಿ ನೈಪುಣ್ಯವುಳ್ಳ ನುರಿತ ಸಿಬ್ಬಂದಿ ಅವಶ್ಯವಿದ್ದು, ಕೆಲವರು ಹಣಕ್ಕಾಗಿ ತಮ್ಮ ಜೀವನವನ್ನು ಸವೆಸುತ್ತಾರೆ. ಆದರೆ ಬುದ್ದಿವಂತರು ಹಣವನ್ನೇ ತಮ್ಮ ಜೀವನದುದ್ದಕ್ಕೂ ದುಡಿಸಿಕೊಳ್ಳುತ್ತಾರೆ. ಆದುದರಿಂದ ಉನ್ನತ ಆಲೋಚನೆಗಳಿಗೆ ಮನ್ನಣೆ ನೀಡಿ, ವಿವಿಧ ಕ್ಷೇತ್ರಗಳಲ್ಲಿ ಮಂಚೂಣಿ ಸ್ಥಾನ ಪಡೆಯಬೇಕೆಂದರು. ಆಧುನಿಕ ಜಗತ್ತಿನಲ್ಲಿ ಹಲವಾರು ವಿಷಯಗಳು ವಿಕಾಸ ಹೊಂದಿ, ಹಲವಾರು ಕ್ಷೇತ್ರಗಳಾಗಿ ಉದಯಿಸಿವೆ. ಪರಿಣಿತ ವಾಣಿಜ್ಯ ಪದವೀಧರರಿಗೆ ಹಲವಾರು ಉದ್ಯೋಗಾವಕಾಶಗಳು ಕೈಬೀಸಿ ಕರೆಯುತ್ತಿವೆ. ಉದ್ಯಮಿಯಾಗಲು ಸಾಕಷ್ಟು ಸರ್ಕಾರದ ಸವಲತ್ತು, ರಿಯಾಯಿತಿಗಳು ಲಭ್ಯವಿದೆ ಎಂದರು.
ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಚಾಲಕರಾದ ಬಿ.ಮಂಜುನಾಥ್ ಮಾತನಾಡಿ ಸ್ನಾತಕೋತ್ತರ ವಾಣಿಜ್ಯ ವಿಭಾಗವು ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಯೋಜನಾ ವರದಿ ತಯಾರಿಕೆ, ಕೈಗಾರಿಕಾ ವೀಕ್ಷಣೆ, ಕ್ಷೇತ್ರ ಸಂಚಾರ, ಬ್ಯಾಂಕಿಂಗ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಲಹೆ ಮಾರ್ಗದರ್ಶನ ನೀಡುತ್ತಿದ್ದು ಇವುಗಳ ಸದ್ಬಳಕೆ ಮಾಡಿಕೊಳ್ಳಿ, ಹಲವು ಹಿರಿಯ ವಿದ್ಯಾರ್ಥಿಗಳು ಉನ್ನತ ಸ್ಥಾನಗಳಿಸಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಆದುದರಿಂದ ಕಿರಿಯ ವಿದ್ಯಾರ್ಥಿಗಳು ಹಿರಿಯರ ಮಾರ್ಗದರ್ಶನದಲ್ಲಿ ನಡೆದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಿ.ಎಸ್.ಮುನೀಂದ್ರಕುಮಾರ್ ಮಾತನಾಡಿ ಯಶಸ್ಸನ್ನು ಯಾರೂ ತಂದು ನಮ್ಮ ಬೊಗಸೆಯಲ್ಲಿಡುವುದಿಲ್ಲ, ಯಶಸ್ಸು ಗಳಿಸಲು ನಿರಂತರ ಸಾಧನೆ, ಕಠಿಣ ಪರಿಶ್ರಮ ಅಗತ್ಯ. ಚಂಚಲ ಮನಸ್ಸನ್ನು ಹತೋಟಿಯಲ್ಲಿಟ್ಟು, ಅರಿಷಡ್ವರ್ಗಗಳನ್ನು ನಿಯಂತ್ರಿಸಿ ಸಾಧನೆಗೆ ಮುಂದಾದರೆ ಯಶಸ್ಸು ನಮ್ಮದಾಗುತ್ತದೆ. ಸಾಮಾನ್ಯರೂ ಮೇರುವ್ಯಕ್ತಿಗಳಾಗಿ ಪರಿವರ್ತನೆಯಾಗಲು ಬೌದ್ದಿಕ ಸಾಮಥ್ರ್ಯ ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತುಬದ್ದ ಜೀವನ ನಿಮ್ಮದಾದರೆ ಭವಿಷ್ಯದ ಬದುಕು ಹಸನಾಗುತ್ತದೆ. ಆದುದರಿಂದ ಜೀವನವೇ ಒಂದು ಕೊಡುಗೆ, ಇಲ್ಲಿ ಸಾರ್ಥಕ ಜೀವನಕಟ್ಟಿಕೊಂಡು ತಂದೆತಾಯಿ, ಗುರುಹಿರಿಯರ ಮೆಚ್ಚುಗೆ ಗಳಿಸಬೇಕೆಂದರು.
ಸಮಾರಂಭದಲ್ಲಿ ಅಧ್ಯಾಪಕರಾದ ಡಾ.ಲಕ್ಷ್ಮೀಪತಯ್ಯ, ಬಿ.ಎನ್.ರೇಖಾ, ಬಿ.ಪಿ.ಪುಟ್ಟರಾಜು ಮಾತನಾಡಿದರು. ನಾಗಪ್ಪ, ಶಿವಶಂಕರರೆಡ್ಡಿ, ನರಸಿಂಹರಾಜು, ತಿಪ್ಪೇಶಪ್ಪ, ರುಬಿಯಾ ಖಾನಂ ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ಪ್ರಥಮ ಎಂ.ಕಾಂ.ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು. ದ್ವಿತೀಯ ಎಂ.ಕಾಂ. ವಿದ್ಯಾರ್ಥಿಗಳಾದ ಶಾಲಿನಿ, ಸಂದೀಪ್ ನಿರ್ವಹಿಸಿ, ತಿಪ್ಪೇಶ್ ಯಾದವ್ ಸ್ವಾಗತಿಸಿ. ಸೌಮ್ಯ ಪ್ರಾರ್ಥಿಸಿ, ಗಂಗರಾಜು ವಂದಿಸಿ, ತೌಸೀಫ್ ಮತ್ತು ಧನಂಜಯ ಕಾರ್ಯಕ್ರಮ ನಿರೂಪಿಸಿದರು.
ವರದಿ: ಆಬಿದ್, ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1