ದಾವಣಗೆರೆ: ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆ ಭಗ್ನಗೊಳಿಸಿರುವ ಎಂಇಎಸ್ ಪುಂಡರ ಕೃತ್ಯ ಖಂಡಿಸಿ ನಗರದಲ್ಲಿ ದಾಸಶ್ರೇಷ್ಠ ಶ್ರೀಕನಕದಾಸರು ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೋರಾಟ ಸಮಿತಿ ಹಾಗೂ ಕರ್ನಾಟಕ ಸಮರ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಪಿಬಿ ರಸ್ತೆಯಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿದ ಪ್ರತಿಭನಾಕಾರರು, ರಾಯಣ್ಣರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಎಂಇಎಸ್ ಪುಂಡಾಟಿಕೆ ವಿರುದ್ಧ ಘೋಷಣೆ ಕೂಗಿ, ಟಯರ್ ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾನಿರತರು ಪಿಬಿ ರಸ್ತೆಯಲ್ಲಿ ಟಯರ್ ಸುಡಲು ಮುಂದಾದಾಗ ಪೊಲೀಸರು ಅದನ್ನು ತಡೆಯಲು ಮುಂದಾದರು. ಆಗ ಪ್ರತಿಭಟನಾನಿರತರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಎಷ್ಟೇ ಮನವೊಲಿಸಲು ಮುಂದಾದರೂ ಪಟ್ಟು ಸಡಲಿಸದ ಪ್ರತಿಭಟನಾಕಾರರು ಟಯರ್ ಸುಟ್ಟು ಎಂಇಎಸ್ ಪುಂಡಾಟಿಕೆ ವಿರುದ್ಧ ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು, ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡರು ಅಪ್ರತಿಮ ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಿ ಭಗ್ನಗೊಳಿಸಿರುವುದು ಮತ್ತು ಸರ್ಕಾರಿ ವಾಹನಗಳನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಇಎಸ್ ಪುಂಡರು ಬೆಳಗಾವಿ ವಿಷಯದಲ್ಲಿ ಕನ್ನಡಿಗರೊಂದಿಗೆ ಪದೇ, ಪದೇ ತಗಾದೆ ತೆಗೆಯುತ್ತಿದೆ. ನಮ್ಮ ನಾಡಿನ ಗಾಳಿ, ನೀರು, ಅನ್ನ ಸೇವಿಸುತ್ತಿರುವ ಮತ್ತು ಸರ್ಕಾರದ ಸೌಲಭ್ಯ ಪಡೆಯುತ್ತಿರುವ ಪುಂಡರಿಗೆ ನಮ್ಮ ಕನ್ನಡ ಭಾಷೆ ಬೇಡವಾಗಿದೆ. ಹೀಗಾಗಿ, ಇವರೆಲ್ಲರೂ ತಕ್ಷಣವೇ ಕರ್ನಾಟಕ ಬಿಟ್ಟು ತೊಲಗಬೇಕು. ಸಂಗೊಳ್ಳಿ ರಾಯಣ್ಣರ ಪ್ರತಿಮೆ ಭಗ್ನಗೊಳಿಸಿರುವ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ ಅವರುಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಕುರುಬ ಸಮಾಜದ ಹಿರಿಯ ಮುಖಂಡ ಪಿ.ರಾಜಕುಮಾರ್, ವಿವಿಧ ಸಂಘಟನೆಗಳ ಮುಖಂಡರಾದ ಬಿ.ಲಿಂಗರಾಜ, ದೀಟೂರು ಚಂದ್ರು, ಜೆ.ಡಿ.ಪ್ರಕಾಶ್, ಇಟ್ಟಿಗುಡಿ ಮಂಜುನಾಥ, ಡಾ.ಬಿ.ವಾಸುದೇವ, ಉಮೇಶ್ ಪಟೇಲ್, ರಾಜುಮೌರ್ಯ, ಬಾಡದ ರವಿ, ಶಿವಣ್ಣ ಮೇಷ್ಟ್ರು, ಪರಶುರಾಮ್, ಉಮೇಶ್, ವೀರಣ್ಣ, ನವೀನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ : ಆನಂದ್ ತಿಪಟೂರು
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700