ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚೊಚ್ಚಲ ಬಜೆಟ್ ಸಿದ್ಧತೆಗಳು ಮುಗಿದಿದ್ದು, ನಾಳೆ ರಾಜ್ಯ ಸರ್ಕಾರದ ಆರ್ಥಿಕ ವರ್ಷ 2022-23 ರ ಬಜೆಟ್ ಮಂಡನೆ ಮಾಡಲಿದ್ದಾರೆ. ಆದರೆ ಆರ್ಥಿಕ ಇಲಾಖೆ ಹೇಳುವ ಪ್ರಕಾರ ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಜಿ ಎಸ್ ಟಿ ಪರಿಹಾರ ಮತ್ತು ಕೇಂದ್ರ ಅನುದಾನ ಸಾವಿರಾರು ಕೋಟಿ ಬಾಕಿ ಇರಿಸಿಕೊಂಡಿದೆ.
ಜಿಎಸ್ ಟಿ ಪರಿಹಾರ ಪಾವತಿ ಬಾಕಿ ₹ 7000 ಕೋಟಿ:
GST ಜಾರಿ ಆದ ಸಂದರ್ಭದಿಂದಲೂ ರಾಜ್ಯ ಸರ್ಕಾರ ಕೇಂದ್ರ ಹಣಕಾಸು ಇಲಾಖೆಯ ಕದ ತಟ್ಟುತ್ತಲೇ ಇದೆ ಹೊರತು ಈವರೆಗೆ ಸಮಾಧಾನಕರವಾದ ಪರಿಹಾರ ರಾಜ್ಯಕ್ಕೆ ಸಿಕ್ಕಿಲ್ಲ. ಈ ನಡುವೆ ರಾಜ್ಯ ಸರ್ಕಾರ ಕಳೆದ ಎರಡು ವರ್ಷದಿಂದ ಜಿಎಸ್ ಟಿ ಪರಿಹಾರವಾಗಿ ಸಾಲ ಪಡೆಯುವ ವಿಶೇಷ ಅವಕಾಶವನ್ನು ಬಳಸಿಕೊಂಡಿದೆ.ವಾಣಿಜ್ಯ ಇಲಾಖೆ ಮಾಹಿತಿ ಪ್ರಕಾರ 2021-22ರಲ್ಲಿ ಜಿಎಸ್ ಟಿ ಪರಿಹಾರ ಹಾಗೂ ಸಾಲದ ರೂಪದಲ್ಲಿ 18,000 ಕೋಟಿ ಸ್ವೀಕರಿಸಿದೆ. ಇನ್ನೂ 7,000 ಕೋಟಿ ಪಾವತಿಯಾಗದೇ ಬಾಕಿ ಉಳಿದುಕೊಂಡಿದೆ. ಒಟ್ಟು 11,000 ಕೋಟಿ ಜಿಎಸ್ ಟಿ ನಷ್ಟ ಪರಿಹಾರ ಹಾಗೂ ವಿಶೇಷ ಸಾಲದ ರೂಪದ ಹಣ ಬಾಕಿ ಉಳಿದುಕೊಂಡಿದೆ.
ಕೇಂದ್ರದ ಅನುದಾನಗಳೂ ಪಾವತಿಯಾಗದೆ 7500 ಕೋಟಿ ಬಾಕಿ :
ರಾಜ್ಯ ಸರ್ಕಾರಗಳು ತನ್ನ ಹಣಕಾಸು ನಿರ್ವಹಣೆಗೆ ನೆಚ್ಚಿಕೊಂಡಿರುವುದು ಕೇಂದ್ರದ ಅನುದಾನಗಳನ್ನು. ಕೇಂದ್ರದ ಅನುದಾನವೂ ಬಿಡುಗಡೆಯಾಗದೇ 7,851 ಬಾಕಿ ಉಳಿದಿದೆ.
ಕೇಂದ್ರದ ತೆರಿಗೆಗಳಲ್ಲಿ ರಾಜ್ಯದ ಪಾಲಿನ ರೂಪದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ 2021-22ರಲ್ಲಿ 24,273 ಕೋಟಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಈವರೆಗೆ ರಾಜ್ಯ ಸರ್ಕಾರ ಸ್ವೀಕಾರ ಮಾಡಿರುವುದು 16,422 ಕೋಟಿ ಮಾತ್ರ. ಅಂದರೆ ಇನ್ನೂ 7,851 ಕೋಟಿ ಬಾಕಿ ಉಳಿದುಕೊಂಡಿದೆ. 2020-21ರಲ್ಲಿ 28,591 ಕೋಟಿ ಬಿಡುಗಡೆ ಮಾಡಬೇಕಾಗಿತ್ತು. ಆದರೆ ಬಿಡುಗಡೆ ಮಾಡಿದ್ದು ₹21,694 ಕೋಟಿ . ಅಂದಾಜಿಗಿಂತ 6,897 ಕೋಟಿ ಪಾವತಿಯಾಗದೆ ಬಾಕಿ ಉಳಿದುಕೊಂಡಿದೆ.
ಇತ್ತ ಕೇಂದ್ರದಿಂದ ವಿವಿಧ ಯೋಜನೆಗಳಿಗೆ 2021-22 ಸಾಲಿನಲ್ಲಿ 28,245 ಕೋಟಿ ಅನುದಾನ ಬಿಡುಗಡೆಯ ಅಂದಾಜು ಮಾಡಲಾಗಿತ್ತು. ಆದರೆ ಈವರೆಗೆ ಅನುದಾನ ಬಿಡುಗಡೆ ಮಾಡಿರುವುದು 19,737 ಕೋಟಿ.
ಒಟ್ಟಾರೆ ಕೇಂದ್ರ ಸರ್ಕಾರದ ನೆರವಿಗೆ ಎಷ್ಟೇ ಅಂಗಲಾಚಿದರೂ ರಾಜ್ಯ ಸರ್ಕಾರದ ನೋವಿಗೆ ಕೇಂದ್ರ ಕಿವಿಗೊಡುತ್ತಿಲ್ಲ. ಈ ಹಿನ್ನಲೆಯಲ್ಲಿ ಕಳೆದ ಎರಡು ಬಜೆಟ್ ನಲ್ಲೂ ಅರ್ಥಿಕ ಇಲಾಖೆ ಎಷ್ಟೇ ಹರಸಾಹಸ ಪಟ್ಟರೂ ಯೋಜನೆಗಳಿಗೆ ಪೂರ್ಣ ಪ್ರಮಾಣದಲ್ಲಿ ಅನುದಾನ ನೀಡಲು ಸಾಧ್ಯವಾಗುತ್ತಿಲ್ಲ. ಈ ಬಾರಿಯೂ ಆರ್ಥಿಕ ಸಂಕಷ್ಟದ ನಡುವೆ ಬಜೆಟ್ ಮಂಡನೆ ಮಾಡಬೇಕಿದೆ ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿ ಯೋಜನೆಗೆ ಅನುದಾನ ನೀಡುವಾಗ ಕೈ ಹಿಸುಕಿಕೊಳ್ಳುವಂತಾಗಿದೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy