ಮಧುಗಿರಿ: ಸಾವಿನ ಮನೆಯಲ್ಲಿ ಮಾಜಿ ಶಾಸಕರು ರಾಜಕೀಯ ಮಾಡುವುದು ಸರಿಯಲ್ಲ ಅದು ಯಾರಿಗೂ ಶೋಭೆ ತರಲ್ಲ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿರುಗೇಟು ನೀಡಿದರು.
ತಾಲೂಕಿನ ಕಂಬದಹಳ್ಳಿಯಲ್ಲಿ 49 ಲಕ್ಷ ರೂ. ವೆಚ್ಚದ ಮನೆ ಮನೆಗೆ ಗಂಗೆ ಯೋಜನೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗುರುವಾರ ತಾಲೂಕಿನಲ್ಲಿ ನಡೆದ ಜೋಡಿ ಕೊಲೆಯ ಬಗ್ಗೆ ಮಾಜಿ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿ, ನನ್ನ ಸಹೋದರ ಪಾತರಾಜು ಕೊರಟಗೆರೆ, ಶಿರಾ ಹಾಗೂ ತುಮಕೂರಿನಲ್ಲಿ ತಹಶೀಲ್ದಾರ್ ಸೇವೆ ಸಲ್ಲಿಸಿ ಜನಸ್ನೇಹಿಯಾಗಿದ್ದಾನೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮುಖ್ಯಮಂತ್ರಿ ಪರಿಹಾರ ನಿಧಿಯ ಅಧಿಕಾರಿಯಾಗಿದ್ದಾಗ ಮಧುಗಿರಿ ಜನತೆಗೆ ಸಹಾಯ ಮಾಡಿದ್ದಾನೆ. ಆದರೆ ಅದನ್ನು ಸಹಿಸದೆ ಇಂಡಿ ಕ್ಷೇತ್ರಕ್ಕೆ ವರ್ಗ ಮಾಡಿಸಿದ್ದು, ಕೆಎನ್ ಆರ್ ಹಿಂದೆ ಇವನ ಕರ್ತವ್ಯವನ್ನು ಹೊಗಳಿದ್ದರು. ಆದ್ರೆ, ಇವರೇ ಇಂದು ‘ಕ್ರಿಮಿನಲ್’ ಎಂದು ಏಕವಚನ ಪದ ಬಳಕೆಯನ್ನು ನಾನು ಖಂಡಿಸುತ್ತೇನೆ ಎಂದರು.
ಮಿಡಿಗೇಶಿಯಲ್ಲಿ ನಡೆದ ಈ ಜೋಡಿ ಕೊಲೆಯ ಬಗ್ಗೆ ಪೊಲೀಸರಿಗೆ ಸಮಗ್ರವಾದ ಮಾಹಿತಿಯಿದ್ದು ರಾಜಕೀಯ ಉದ್ದೇಶ ಹೊಂದಿಲ್ಲ. ಮೃತರ ಕುಟುಂಬದ ಬಗ್ಗೆ ನನಗೂ ಸಹಾನುಭೂತಿ ಅವರ ಆತ್ಮಕ್ಕೆ ಕೋರಲಿದ್ದು, ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತೇನೆ ಎಂದರು.
ಇಂತಹ ಘಟನೆಗಳು ಕ್ಷೇತ್ರದಲ್ಲಿ ನಡೆಯಬಾರದು. ಮಧುಗಿರಿಗೆ ಶಾಂತಿ ತರುವ ನಾಯಕರು ಬೇಕಿದ್ದು, ಶಾಂತಿ ಕದಡುವವರು ಬೇಕಿಲ್ಲ. ಪೊಲೀಸರು ಯಾವ ಆಯಾಮದಲ್ಲಿ ತನಿಖೆ ಮಾಡಿದರೂ ಸ್ವಾಗತ. ಆದರೆ ವಿನಾಕಾರಣ ರಾಜಕಾರಣ ಮಾಡಲೆಂದೇ ಮಾಜಿ ಶಾಸಕರು ಹೇಳಿರುವ ಈ ಹೇಳಿಕೆ ಬಾಲಿಷದಿಂದ ಕೂಡಿದೆ. ಯಾರು ತಪ್ಪಿತಸ್ಥರು ಇದ್ದಾರೆ ಅವರನ್ನು ಪೊಲೀಸರು ಕಾನೂನಿನ ಅಡಿಯಲ್ಲಿ ಶಿಕ್ಷಿಸಬೇಕು ಎಂದರು.
ಈ ವಿಚಾರವನ್ನು ಸದನದಲ್ಲಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಲಿದ್ದು ಅವಕಾಶ ಸಿಗಲಿಲ್ಲ. ಆದರೂ ಗೃಹ ಮಂತ್ರಿಗಳ ಬಳಿ ಮಾತನಾಡಿದ್ದು ಸೂಕ್ತ ತನಿಖೆಗೆ ಸೂಚಿಸಿದ್ದಾರೆ ಎಂದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy