ಸರಗೂರು: ತಾಲ್ಲೂಕಿನ ಪಟ್ಟಣದ ಗ್ರಂಥಾಲಯದ ಮುಂಭಾಗದಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಗ್ರಂಥಾಲಯದ ಸುತ್ತ ನೀರು ಆವರಿಸಿದ್ದು, ಸಾರ್ವಜನಿಕರು ಗ್ರಂಥಾಲಯಕ್ಕೆ ಹೋಗಲು ಪರದಾಡಿದ ಘಟನೆ ನಡೆದಿದೆ.
ಪಟ್ಟಣದ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಇಲ್ಲದ ಕಾರಣ ಶಾಲೆಯ ಒಂದು ಕಟ್ಟಡವನ್ನು ಗ್ರಂಥಾಲಯವಾಗಿ ಬಳಸಿಕೊಳ್ಳಲಾಗುತ್ತಿದೆ. ಮಳೆ ಬಂದರೆ ಸಾಕು ಕಟ್ಟಡದ ಮೇಲ್ಛಾವಣಿ ಸೋರಿಕೆಯಾಗುತ್ತಿದೆ. ಇದರಿಂದಾಗಿ ಗ್ರಂಥಾಲಯದ ಪುಸ್ತಕಗಳ ರಕ್ಷಣೆ ಕೂಡ ಕಷ್ಟಕರವಾಗಿದ್ದು, ಜೊತೆಗೆ ಸಾರ್ವಜನಿಕರಿಗೆ ಗ್ರಂಥಾಲಯದಲ್ಲಿ ಕುಳಿತು ಓದಲು ಕಷ್ಟಕರವಾಗಿದೆ.
ಈ ಬಗ್ಗೆ ಪಟ್ಟಣ ಪಂಚಾಯತ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ, ಗ್ರಂಥಾಲಯಕ್ಕೆ ಹೊಸ ಕಟ್ಟಡ ನಿರ್ಮಾಣ ಮಾಡುವಂತೆ ಹಲವು ಮಾಡಿ ಸಂಸದರು ಹಾಗೂ ಶಾಸಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯದ ವರ್ತನೆಯಿಂದಾಗಿ ಗ್ರಂಥಾಲಯ ದುಸ್ಥಿತಿಗೆ ತಲುಪಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಮಳೆ ಬಂದಾಗ ಚರಂಡಿ ನೀರು ಗ್ರಂಥಾಲಯದ ಮುಂಭಾಗದಲ್ಲಿ ಶೇಖರಣೆಯಾಗುತ್ತಿದೆ. ಗ್ರಂಥಾಲಯದ ಸಮೀಪದಲ್ಲೇ ಕೋಳಿ ಅಂಗಡಿ ಕೂಡ ಕಾರ್ಯಾಚರಿಸುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಗ್ರಂಥಾಲಯದೊಳಗೆ ಕುಳಿತುಕೊಳ್ಳುವಂತಾಗಿದೆ.
ವಾರ್ಡ್ ಗಳಿಂದ ಬರುವ ಕೊಳಚೆ ನೀರುಗಳು ಸರಿಯಾದ ಚರಂಡಿ ಇಲ್ಲದ ಕಾರಣ ಹರಿದು ಹೋಗದೇ ಗ್ರಂಥಾಲದಯ ಮುಂಭಾಗದಲ್ಲಿ ಶೇಖರಣೆಯಾಗುತ್ತಿದೆ. ಇದರಿಂದಾಗಿ ಸಾಂಕ್ರಾಮಿಕ ರೋಗದ ಭೀತಿಯೂ ಮೂಡಿದೆ.
ಇನ್ನೂ ಈ ಬಗ್ಗೆ ನಮ್ಮ ತುಮಕೂರು ಜೊತೆಗೆ ಮಾತನಾಡಿದ ಗ್ರಂಥಪಾಲಕ ಬಿಡಗಲು ಶಿವಣ್ಣ, ನಮಗೆ ಪ್ರತ್ಯೇಕ ಗ್ರಂಥಾಲಯವನ್ನು ಪಟ್ಟಣ ಪಂಚಾಯತ್ ವತಿಯಿಂದ ನಿರ್ಮಾಣ ಮಾಡಿಕೊಟ್ಟರೆ, ಓದುಗರಿಗೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿಕೊಂಡರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296