ಸಿರಾ: ಸುಮಾರು 50 ವರ್ಷಗಳ ರಾಜಕೀಯ ಜ್ಞಾನ ಹೊಂದಿರುವ ಸಿರಾ ಶಾಸಕರಾದ ಟಿ.ಬಿ.ಜಯಚಂದ್ರ ಅವರಿಗೆ ಸರ್ಕಾರದಲ್ಲಿ ಕಾನೂನಿನ ಪೂರ್ಣ ಅರಿವಿದೆ. ಇಡೀ ಸರ್ಕಾರವನ್ನು ಎಚ್ಚರಿಕೆಯಿಂದ ನಡೆಯುವಂತೆ ಶ್ರಮಿಸುವಲ್ಲಿ ಹೆಚ್ಚಿನ ಶಕ್ತಿಯೂ ಇದೆ. ಆದರೆ ಸಂಪುಟದ ಮೊದಲ ಪಟ್ಟಿಯಲ್ಲಿ ಅವರ ಹೆಸರನ್ನು ಪ್ರಕಟಿಸಿಲ್ಲ. ಎರಡನೆಯ ವಿಸ್ತರಣೆಯಲ್ಲಿ ಅವರಿಗೂ ಸೂಕ್ತ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯ ನಗರ ಘಟಕದ ಅಧ್ಯಕ್ಷ ಪಿ.ಆರ್. ಮಂಜುನಾಥ್ ಒತ್ತಾಯಿಸಿದರು.
ಪ್ರವಾಸಿ ಮಂದಿರದಲ್ಲಿ ಬುಧವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಲಕ್ಷಾಂತರ ಕುಂಚಿಟಿಗ ಒಕ್ಕಲಿಗ ಮತದಾರರಿದ್ದು, ಜಯಚಂದ್ರ ಅವರು ಕುಂಚಿಟಿಗ ಸಮುದಾಯದ ಏಕೈಕ ಶಾಸಕರಾಗಿದ್ದಾರೆ. ಈ ಸಮುದಾಯಕ್ಕೆ ಸಚಿವ ಸಂಪುಟ ಸ್ಥಾನ ಲಭ್ಯವಾಗದೆ ಇದ್ದಲ್ಲಿ ಈ ಸಮುದಾಯ ಬೇರೆ ತೀರ್ಮಾನಗಳ ಬಗ್ಗೆ ಯೋಚಿಸುವ ಮುನ್ನ ಡಿಕೆಶಿ ಸರ್ಕಾರದಲ್ಲಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ಲಭ್ಯವಾಗಬೇಕು ಎಂದು ಒತ್ತಾಯ ಮಾಡಿದರು.
ಸಿರಾ ಕ್ಷೇತ್ರವನ್ನಷ್ಟೇ ಅಲ್ಲದೆ ರಾಜ್ಯದ ಬಹುಭಾಗದ ತಾಲೂಕುಗಳು ನೀರಾವರಿ ಸೌಲಭ್ಯ ಹಾಗೂ ನೀರಾವರಿ ಯೋಜನೆಗಳನ್ನು ಹೊಂದಲು ಜಯಚಂದ್ರ ಕೂಡ ಪ್ರಮುಖ ಕಾರಣಕರ್ತರು. ಈ ಹಿಂದೆ 5 ವರ್ಷಗಳ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿವಿಧ ಸಚಿವ ಸ್ಥಾನಗಳನ್ನು ನಿಭಾಯಿಸುವುದರ ಜೊತೆಗೆ 29 ಸಮಿತಿಗಳ ಅಧ್ಯಕ್ಷ ಸ್ಥಾನ ಹೊತ್ತು ಸರ್ಕಾರದ ಮುನ್ನಡೆಗೆ ಜಯಚಂದ್ರ ಅವರು ಕಾರಣರಾಗಿದ್ದರು ಎಂದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು ಮಾತನಾಡಿ, ಪ್ರಸ್ತುತ ಸರ್ಕಾರದ ಆರಂಭದಲ್ಲಿಯೇ ಜಯಚಂದ್ರ ಅವರಿಗೆ ಸಚಿವ ಸ್ಥಾನ ನೀಡಬೇಕಿತ್ತು. ಅವರ ಹಿರಿತನ, ರಾಜಕೀಯ ಅನುಭವ, ಎಲ್ಲಾ ಜಾತಿಯ ಸಮುದಾಯಗಳನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಹೊಂದಿರುವ ಜಯಚಂದ್ರ ಅವರು 50 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿದ್ದು ಅಭಿವೃದ್ಧಿಯ ಮಂತ್ರ ಅವರ ದೈನಂದಿನ ಕಾರ್ಯವಾಗಿದೆ. ಇಂತಹ ನಿಷ್ಠಾವಂತ ಹಿರಿಯ ಜೀವಕ್ಕೆ ಸಚಿವ ಸಂಪುಟ ಸ್ಥಾನ ನೀಡಲೇಬೇಕು ಎಂದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಪಕ್ಷದ ವಿವಿಧ ಪದಾಧಿಕಾರಿಗಳು, ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು, ನಗರಸಭಾ ಸದಸ್ಯರು, ನಗರಸಭೆಯ ಮಾಜಿ ಸದಸ್ಯರು, ವಿವಿಧ ಸಮಿತಿಗಳ ನಾಮ ನಿರ್ದೇಶನ ಸದಸ್ಯರು, ಸ್ಥಳೀಯ ಸಂಘ-ಸಂಸ್ಥೆಗಳ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕ ಪ್ರಮುಖರು ಸುದ್ದಿಗೋಷ್ಠಿಯಲ್ಲಿ ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


