ತುಮಕೂರು: ತುಮಕೂರು ಜಿಲ್ಲಾಧಿಕಾರಿಯಾದ ಶುಭ ಕಲ್ಯಾಣ್, (ಭಾ.ಆ.ಸೇ.) ISDA Infracon National Awards — 2025 (IINA) ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಹಾಗೂ ಮಹತ್ವದ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಬೇಕಾದ ಭೂಸ್ವಾಧೀನ ಪ್ರಕ್ರಿಯೆಗೆ ಇವರು ತೆಗೆದುಕೊಂಡ ಕ್ರಮಗಳಿಗೆ ಈ ಪ್ರಶಸ್ತಿ ಲಭಿಸಿದೆ.
ತುಮಕೂರು ಜಿಲ್ಲೆಯ ಸರಾಸರಿ ವಾರ್ಷಿಕ ಮಳೆಯ ಪ್ರಮಾಣ ಕೇವಲ 590 ಮಿ.ಮೀ. ಆಗಿದ್ದು, ಈ ಹಿನ್ನಲೆಯಲ್ಲಿ, ಕುಡಿಯುವ ನೀರಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿರುವುದು ಅತ್ಯವಶ್ಯಕವಾಗಿದ್ದು. ಈ ಸಮಸ್ಯೆಯ ತೀವ್ರತೆಯನ್ನು ಅರಿತುಕೊಂಡ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ರವರು ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡಿರುತ್ತಾರೆ. ಎತ್ತಿನಹೊಳೆ ಯೋಜನೆಗೆ ಅವಶ್ಯಕವಾಗಿ ಬೇಕಾದ 1335 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡು, ರೂ. 365 ಕೋಟಿ ಪರಿಹಾರ ಹಣವನ್ನು ಕೇವಲ ಒಂದು ವರ್ಷದ ಅವಧಿಯಲ್ಲಿ ಭೂ-ಮಾಲೀಕರಿಗೆ ಪಾರದರ್ಶಕವಾಗಿ ಪಾವತಿಸಿ ಭೂ ಸ್ವಾಧೀನಕ್ಕೆ ಹೆಚ್ಚಿನ ಒತ್ತು ನೀಡಿರುತ್ತಾರೆ.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 75ಕ್ಕೂ ಹೆಚ್ಚು ಪರಿಶೀಲನಾ ಸಭೆಗಳನ್ನು ಕೈಗೊಂಡು, ಭೂಸ್ವಾಧೀನ ಪ್ರಕ್ರಿಯೆ ವೇಗ ನೀಡಿದ್ದಲ್ಲದೆ, ಎಲ್ಲಾ ತಾಲ್ಲೂಕುಗಳಲ್ಲಿ ದಾಖಲೆ ಶುದ್ಧೀಕರಣ ಶಿಬಿರಗಳನ್ನು ನಡೆಸಿ ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕಾಗಿ ಅವಶ್ಯಕತೆ ಇರುವ 1335 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು, ರೂ. 365 ಕೋಟಿ ಪರಿಹಾರ ಹಣವನ್ನು ಭೂ-ಮಾಲೀಕರಿಗೆ ಪಾರದರ್ಶಕವಾಗಿ ನೀಡಿ ಸಂಬಂಧಿಸಿದ ತಾಂತ್ರಿಕ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ತಾಲ್ಲೂಕು ಮಟ್ಟದ ಸಭೆಗಳನ್ನು ನಡೆಸಿರುತ್ತಾರೆ.
ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಎತ್ತಿನಹೊಳೆ ಯೋಜನೆಯ ಪ್ರಮುಖ ಹಂತವಾದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿರುವುದರಿಂದ ತುಮಕೂರು ಜಿಲ್ಲೆಗೆ ಸುಮಾರು 5 ಟಿಎಂಸಿ ನೀರಿನ ಲಾಭ ದೊರೆಯಲಿದ್ದು, ಸಮಗ್ರ ಹಾಗೂ ಪರಿಣಾಮಕಾರಿಯಾಗಿ ಆಡಳಿತಾತ್ಮಕ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿದ ಸೇವೆಯನ್ನು ಪರಿಗಣಿಸಿ ಶ್ರೀಮತಿ ಶುಭ ಕಲ್ಯಾಣ್ ರವರಿಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಗಣ್ಯರು ಅಭಿನಂದನೆ ಸಲ್ಲಿಸಿರುತ್ತಾರೆ.
ಎತ್ತಿನಹೊಳೆ ಯೋಜನೆಯ ವಿಶೇಷತೆಗಳೆನೆಂದರೆ ಈ ಯೋಜನೆಯಡಿಯಲ್ಲಿ 10.47 ಕಿ.ಮೀ ಉನ್ನತ ಗುರುತ್ವಾಕರ್ಷಣ ಕಾಲುವೆ ಮತ್ತು 520 ವಿಶೇಷ ಸೇತುಬಂಧಗಳನ್ನು ನಿರ್ಮಿಸುವ ಮೂಲಕ ಆಕ್ವಡಕ್ಟ್ ಎಂಜಿನಿಯರಿಂಗ್ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಯೋಜನೆ ಬರಪೀಡಿತ ಪ್ರದೇಶಗಳಲ್ಲಿ ಕಣಿವೆಗಳ ನಡುವೆ ನೀರಿನ ವರ್ಗಾವಣೆ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅವಳಿ ತೊಟ್ಟಿಗಳು ಮತ್ತು ಸರ್ವಿಸ್ ರಸ್ತೆಗಳ ಸಮನ್ವಯವು ನಿರ್ವಹಣೆ ಮತ್ತು ಕಾರ್ಯಾಚರಣೆಯ ದಕ್ಷತೆಗಾಗಿ ಹೊಸ ವಿನ್ಯಾಸದ ಉದಾಹರಣೆಯಾಗಿದೆ.
ಬಹು–ಏಜೆನ್ಸಿ ಸಹಯೋಗ ಮತ್ತು 3ನೇ ವ್ಯಕ್ತಿಯ ಗುಣಮಟ್ಟ ನಿಯಂತ್ರಣದ ಬಳಕೆ ಮೂಲಸೌಕರ್ಯ ನಿರ್ವಹಣೆಯಲ್ಲಿ ಉತ್ತಮ ಪ್ರಕ್ರಿಯೆಗಳ ಪ್ರತಿಬಿಂಬವಾಗಿದೆ.
ಈ ಕಾರಣಕ್ಕಾಗಿ ISDA ಸಂಸ್ಥೆ ವತಿಯಿಂದ ಆಯೋಜಿಸಲಾದ “Infracon National Awards – 2025” New Delhiಯಲ್ಲಿ ದಿನಾಂಕ: 14.06.2025ರಂದು ನಡೆದ ಕಾರ್ಯಕ್ರಮದಲ್ಲಿ ಮೂಲಭೂತ ಸೌಲಭ್ಯಗಳ ಅಧಿವೃದ್ಧಿ, ಕೃಷಿಸ್ಥಿರತೆ ಹಾಗೂ ತುಮಕೂರು ಜಿಲ್ಲೆಯ ನಾಗರೀಕರ ಕಲ್ಯಾಣಕ್ಕಾಗಿ ಶ್ರಮಿಸಿದ ಜಿಲ್ಲಾಧಿಕಾರಿ ಶ್ರೀಮತಿ ಶುಭ ಕಲ್ಯಾಣ್ ಇವರಿಗೆ ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವರಾದ ಮಾನ್ಯ ಶ್ರೀ ಹರ್ಷ ಮಲ್ಲೋತ್ರಾ ರವರು ಮತ್ತು ಇತರೆ ಗಣ್ಯರ ಸಮ್ಮುಖದಲ್ಲಿ ಪಾರಿತೋಷಕ ಮತ್ತು ಪ್ರಶಸ್ತಿ ಪ್ರಧಾನವನ್ನು ನೀಡಿ ಗೌರವಿಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW