ತುಮಕೂರು: ಯಾವುದೇ ಸಭೆ ಸಮಾರಂಭಗಳಲ್ಲಿ ಮೇಲ್ವರ್ಗದವರು, ಕೆಳವರ್ಗದವರು ಎಂಬ ಪದ ಬಳಕೆ ಮಾಡಬಾರದು. ಬದಲಾಗಿ ಮುಂದುವರಿದವರು ಮತ್ತು ಹಿಂದುಳಿದವರು ಎಂಬ ಪದ ಬಳಕೆ ಮಾಡಿ ಎಂದು ಮಾಜಿ ಸಚಿವರು, ಶಾಸಕರಾದ ಕೆ.ಎನ್.ರಾಜಣ್ಣ ಸಲಹೆ ನೀಡಿದರು.
ಇಲ್ಲಿನ ನಗರ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಚರಕ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಮತ್ತು ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಬಹಳಷ್ಟು ಕಾರ್ಯಕ್ರಮಗಳಲ್ಲಿ ಮೇಲು–ಕೀಳು ಎಂಬ ಪದ ಬಳಕೆ ಮಾಡಲಾಗುತ್ತದೆ. ಇದನ್ನು ಬದಲಾಯಿಸಿಕೊಳ್ಳುವುದು ಒಳಿತು. ಏಕೆಂದರೆ, ಯಾರೂ ಕೀಳಲ್ಲ. ಮೇಲು–ಕೀಳು ಎಂಬ ಪದ ಬಳಕೆಯೇ ಸರಿ ಇಲ್ಲ. ಇದರ ಬದಲಿಗೆ ಹಿಂದುಳಿದವರು ಎಂಬ ಪದ ಬಳಕೆ ಮಾಡುವುದು ಸೂಕ್ತ ಎಂದರು.
ಹಿಂದುಳಿದ ವರ್ಗಗಳಲ್ಲಿಯೂ ಸಾಕಷ್ಟು ಬುದ್ಧಿವಂತಿದ್ದಾರೆ. ಅವರನ್ನು ನಾವುಗಳು ಗುರುತಿಸಬೇಕು. ಇಂತಹ ಸಮಾರಂಭಗಳಲ್ಲಿ ಅವರ ಸಾಧನೆಯನ್ನು ಗೌರವಿಸಿದಾಗ ಮತ್ತಷ್ಟು ಕೆಲಸ ಮಾಡಲು ಶಕ್ತಿ ನೀಡಿದಂತಾಗುತ್ತದೆ. ಈ ಕಾರಣಕ್ಕಾಗಿ ಅಭಿನಂದನಾ ಸಮಾರಂಭಗಳು ಮುಖ್ಯವಾಗುತ್ತವೆ ಎಂದರು.
ದಲಿತ ಸಂಘಟನೆಗಳ ಹೋರಾಟ ಯಾವತ್ತೂ ತಮ್ಮ ಹಕ್ಕುಗಳಿಗೆ ವಂಚನೆಯಾದಾಗ ಪ್ರತಿಭಟಿಸುವ ರೀತಿ ಇರಬೇಕು. ಆದರೆ ಇತರೆ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಹೋಗಬೇಕು. ಯಾವಾಗಲೂ ಇತರರನ್ನು ದೂಷಿಸುತ್ತಾ ಹೋದರೆ ನಮ್ಮ ಹೋರಾಟ ಗುರಿ ಮುಟ್ಟುವುದಿಲ್ಲ. ಇತರೆ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಹೋರಾಟ ಮುಂದುವರಿಸಬೇಕೇ ಹೊರತು, ಅವರನ್ನು ದ್ವೇಷಿಸುತ್ತಾ ಮುನ್ನಡೆಯುವುದು ಸರಿಯಲ್ಲ ಎಂದು ಕರೆ ನೀಡಿದರು.
“ಹಿಂದಿನ ದಲಿತ ಸಂಘರ್ಷ ಸಮಿತಿ ಆಶಯ ಮತ್ತು ಈಗಿನ ಹೋರಾಟಗಳಿಗೆ ಸಾಕಷ್ಟು ಭಿನ್ನತೆಗಳು ಇವೆ. ಈಗಿನ ಹೋರಾಟಗಳು ಸ್ವಾರ್ಥಕ್ಕೆ ಆಗುತ್ತಿವೆಯೇನೋ ಎಂದೆನಿಸುತ್ತದೆ. ಸಂಘಟನೆಗಳನ್ನು ಯಾವತ್ತೂ ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು. ಸಮುದಾಯದಲ್ಲಿರುವ ಅಜ್ಞಾನವನ್ನು ತೊಡೆದು ಹಾಕಲು, ಶಿಕ್ಷಣವಂತರನ್ನಾಗಿಸಲು ಸಂಘಟನೆಗಳು ಶ್ರಮಿಸಬೇಕು. ಇಂತಹ ಅರಿವಿನಿಂದಲೇ ಹಿಂದುಳಿದ, ಅಶಕ್ತ, ದಲಿತ ಸಮುದಾಯ ಮುಂದೆ ಬರಲು ಸಾಧ್ಯ ಎಂದರು.
ಮುಂದುವರಿದ ಜನಾಂಗಕ್ಕಿಂತ ಹೆಚ್ಚಾಗಿ ದಲಿತರು ಮತ್ತು ಹಿಂದುಳಿದವರೇ ಹೆಚ್ಚು ದೈವ ಭಕ್ತರು. ಈ ಜನಾಂಗದವರೇ ದೇವರುಗಳಿಗೆ ಹೆಚ್ಚು ಹರಕೆ ಮಾಡುತ್ತಾರೆ. ಮುಂದುವರಿದ ಜಾತಿಗಳಿಗಿಂತ ಇವರೇ ಹೆಚ್ಚು ಹೋಮ, ಹವನ ನಡೆಸುತ್ತಾರೆ. ದಲಿತ ಸಂಘರ್ಷ ಸಮಿತಿ ಹೋರಾಟ ಕಲಿಸಿಕೊಟ್ಟಿರುವುದು ಇದನ್ನೇನಾ ಎಂದು ನಾವೆಲ್ಲಾ ಪ್ರಶ್ನಿಸಿಕೊಳ್ಳಬೇಕು ಎಂದು ಸೂಕ್ಷ್ಮವಾಗಿ ವಿಶ್ಲೇಷಿಸಿದರು.
ಸಹಕಾರ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ತರಲು ನಾನು 1980 ರಿಂದ ಪ್ರಯತ್ನಿಸುತ್ತಿದ್ದೇನೆ. ಕೆಲವು ಪಟ್ಟಭದ್ರರು ಈ ಕ್ಷೇತ್ರವನ್ನು ತಮ್ಮ ಮುಷ್ಠಿಯಲ್ಲಿ ಹಿಡಿದುಕೊಂಡಿದ್ದರು. ಈಗ ಬದಲಾಗಿದೆ. ಎಲ್ಲರಿಗೂ ಸಾಲ ನೀಡುವಂತಾಗಿದೆ. ಹಿಂದೆ ಸಾಲ ನೀಡುವವರೂ ಅವರೇ, ಪಡೆದುಕೊಳ್ಳುವವರೂ ಅವರೇ ಆಗಿದ್ದರು. ದಲಿತರಿಗೆ ಇಲ್ಲಿ ಅವಕಾಶವೇ ಇರಲಿಲ್ಲ. ಮೀಸಲಾತಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ. ಸಹಕಾರ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಹಿಂದುಳಿದವರು, ದಲಿತರು, ಮಹಿಳೆಗೆ ಇಲ್ಲಿ ಅವಕಾಶವಿದೆ. ಧ್ವನಿ ಇಲ್ಲದವರಿಗೂ ಇಲ್ಲಿ ಧ್ವನಿ ನೀಡಲಾಗಿದೆ. ನಾವು ಮಾಡಬೇಕಾಗಿರುವುದು ಇದೇ ಕೆಲಸ ಎಂದರು.
ಸಮಕಾಲೀನ ಸಾಮಾಜಿಕ ರಾಜಕೀಯ ಸಾಂಸ್ಕೃತಿಕ ತಲ್ಲಣಗಳು ಕುರಿತು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ವಿಚಾರ ಗೋಷ್ಠಿಯಲ್ಲಿ ವಿಷಯ ಮಂಡಿಸಿದರು. ದಲಿತ ಚಳುವಳಿಯ ಸವಾಲು ಮತ್ತು ಸಾಧ್ಯತೆಗಳು ಕುರಿತು ರವಿಕುಮಾರ್ ಬಾಗಿ, ಸಮಕಾಲೀನ ಕರ್ನಾಟಕ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ ಕುರಿತು ಎ.ಎಲ್.ನರಸಿಂಹಮೂರ್ತಿ ಅವರು ವಿಷಯ ಮಂಡಿಸಿ ಮಾತನಾಡಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ತಂಬೂರಿ ರಾಮಯ್ಯ, ಬಾಬು ಜಗಜೀವನರಾಂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕುಂದೂರು ತಿಮ್ಮಯ್ಯ, ಕೆ.ದೊರೈರಾಜ್ ಅವರಿಗೆ ಅಭಿನಂದನೆ ನಡೆಯಿತು. ಡಾ.ರವಿಕುಮಾರ್ ನೀಹ ಅಭಿನಂದನಾ ನುಡಿಗಳನ್ನಾಡಿದರು. ಡಾ.ಶಿವಣ್ಣ ತಿಮ್ಮಾಪುರ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಚರಕ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಪರಶುರಾಮ ಅಧ್ಯಕ್ಷತೆ ವಹಿಸಿ ಆಶಯ ನುಡಿಗಳನ್ನಾಡಿದರು. ಉಪ ವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ಲೇಖಕಿಯರ ಸಂಘದ ಅಧ್ಯಕ್ಷೆ ಆಶಾ ಬೆಳ್ಳದೂರು, ಸಾಮಾಜಿಕ ಹೋರಾಟಗಾರ ಶ್ರೀ ಪಾದ ಭಟ್ ಇತರರಿದ್ದರು. ಎ.ರಾಮಚಂದ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದ್ಯಾಗೇರಹಳ್ಳಿ ವಿರೂಪಾಕ್ಷ, ತುಮಕೂರು ಶ್ರೀ ಧರ್, ಕುಂದೂರು ಮುರುಳಿ ಇತರರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


