ಪಾವಗಡ: ಕಳೆದ ಹತ್ತು ವರ್ಷಗಳ ಹಿಂದೆ ಪಾವಗಡ ತಾಲ್ಲೂಕಿಗೆ ನದಿ ನೀರು ತರುವ ಉದ್ದೇಶದಿಂದ ಹೋರಾಟ ನಡೆಸಿದ ಹೋರಾಟಗಾರರು, ಸಂಘ ಸಂಸ್ಥೆಗಳ ಸದಸ್ಯರು ಹಾಗೂ ರೈತರಿಗೆ ಸೋಮವಾರ ಪಾವಗಡ ತಾಲ್ಲೂಕು ಸಮಗ್ರ ನೀರು ಹೋರಾಟ ವೇದಿಕೆಯಿಂದ ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಅದ್ದೂರಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಹತ್ತು ವರ್ಷಗಳ ಹಿಂದೆ ಪಾವಗಡದಿಂದ ಬೆಂಗಳೂರಿನವರೆಗೆ ನಡೆದ ಬೃಹತ್ ಪಾದಯಾತ್ರೆಯು ಬಹುಮಾನ್ಯ ಫಲ ನೀಡಿದ್ದು, ಅದರ ಪರಿಣಾಮವಾಗಿ ಕರ್ನಾಟಕ ಸರ್ಕಾರವು 2,352 ಕೋಟಿ ರೂಪಾಯಿ ವೆಚ್ಚದಲ್ಲಿ ತುಂಗಭದ್ರಾ ಜಲಾಶಯದಿಂದ ಕೂಡ್ಲಿಗಿ, ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಪಾವಗಡ ತಾಲೂಕುಗಳಿಗೆ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದೆ ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.
ಕಾರ್ಯಕ್ರಮದ ಮೊದಲು ಪಟ್ಟಣದ ಗುರುಭವನ ಮೈದಾನದಿಂದ ಆರಂಭವಾಗಿ ವಿವಿಧ ಕಲಾತಂಡಗಳೊಂದಿಗೆ ಹೋರಾಟಗಾರರು, ರೈತರು ಭಾಗವಹಿಸಿ ಮೆರವಣಿಗೆ ನಡೆಸಲಾಯಿತು. ಜಪಾನಂದ ಸ್ವಾಮೀಜಿ, ಹನುಮಂತನಾಥ ಸ್ವಾಮೀಜಿ ಹಾಗೂ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ರಾಮಮೂರ್ತಿ ಸ್ವಾಮೀಜಿಯವರು ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಅಂಬೇಡ್ಕರ್ ವಿಗ್ರಹಕ್ಕೆ ಮಾಲಾರ್ಪಣೆಯನ್ನು ಮಾಡಲಾಯಿತು.
ಅನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜನಾರ್ಧನ ಸ್ವಾಮಿ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಸಮಗ್ರ ನೀರು ಹೋರಾಟ ವೇದಿಕೆಯ ಅಧ್ಯಕ್ಷ ಎಸ್. ಶಿವಪ್ರಸಾದ್, ಕಾರ್ಯದರ್ಶಿ ಸೊಗಡು ವೆಂಕಟೇಶ್, ರೈತ ಸಂಘದ ಅಧ್ಯಕ್ಷ ಪೂಜಾರಪ್ಪ, ನರಸಿಂಹ ರೆಡ್ಡಿ, ತುಮುಲ್ ನಿರ್ದೇಶಕ ಚಂದ್ರಶೇಖರ ರೆಡ್ಡಿ ಸೇರಿದಂತೆ ಹಲವು ಗಣ್ಯರು ಮಾತನಾಡಿದರು.
ಕಾರ್ಯಕ್ರಮದಲ್ಲಿ 200ಕ್ಕು ಹೆಚ್ಚು ಹೋರಾಟಗಾರರು ಸನ್ಮಾನಿಸಲ್ಪಟ್ಟರು. ಸದ್ಯ ಸರ್ಕಾರ ಎತ್ತಿನಹೊಳೆ ಯೋಜನೆಯಲ್ಲಿ ಕೊರಟಗೆರೆ ಮತ್ತು ಮಧುಗಿರಿಯನ್ನ ಮಾತ್ರ ಸೇರಿಸಿದ್ದು ಪಾವಗಡವನ್ನು ಕೈ ಬಿಟ್ಟಿದ್ದು ಮುಂದಿನ ದಿನಗಳಲ್ಲಿ ಬೃಹತ್ ಹೋರಾಟವನ್ನು ಕೈಗೊಳ್ಳುವ ನಿರ್ಣಯವನ್ನು ಮಂಡಿಸಲಾಯಿತು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW