ತುಮಕೂರು: ಜಿಲ್ಲೆಯಲ್ಲಿ ಕ್ಷಯರೋಗದ (Tuberculosis) ಹಾವಳಿ ಹೆಚ್ಚಾಗುತ್ತಿದ್ದು, ಸುಮಾರು 682 ಹಳ್ಳಿಗಳಲ್ಲಿ ವಾಸಿಸುವ 7.69 ಲಕ್ಷಕ್ಕೂ ಹೆಚ್ಚು ಜನರು ಈ ರೋಗದ ಅಪಾಯದ ಅಂಚಿನಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.
ಜಿಲ್ಲೆಯ 682 ಹಳ್ಳಿಗಳನ್ನು ಕ್ಷಯರೋಗದ ಹೆಚ್ಚಿನ ಅಪಾಯವಿರುವ ಪ್ರದೇಶಗಳೆಂದು ಗುರುತಿಸಲಾಗಿದೆ. ಇಲ್ಲಿ ಒಟ್ಟು 7,69,111 ಜನರು ವಾಸಿಸುತ್ತಿದ್ದಾರೆ. ಈ ಗ್ರಾಮಗಳಲ್ಲಿ ಪ್ರಸ್ತುತ 345 ಸಕ್ರಿಯ ಕ್ಷಯರೋಗ ಪ್ರಕರಣಗಳು ವರದಿಯಾಗಿವೆ.
ತೀವ್ರ ಅಪೌಷ್ಟಿಕತೆ, ಮಧುಮೇಹ (Diabetes), ರಕ್ತದೊತ್ತಡ (BP) ಮತ್ತು ಬಡತನದ ಕಾರಣದಿಂದಾಗಿ ಈ ಭಾಗದ ಜನರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿದ್ದು, ಕ್ಷಯರೋಗ ಬೇಗ ಹರಡುತ್ತಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ‘ಕ್ಷಯ ಮುಕ್ತ ಭಾರತ’ ಅಭಿಯಾನದಡಿ 100 ದಿನಗಳ ವಿಶೇಷ ಪತ್ತೆ ಹಚ್ಚುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ 682 ಹಳ್ಳಿಗಳಲ್ಲಿ ‘ನಿ–ಕ್ಷಯ್’ ಶಿಬಿರಗಳನ್ನು ಆಯೋಜಿಸಿ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ತಪಾಸಣೆ ನಡೆಸಲಾಗುತ್ತಿದೆ.
ರೋಗ ಲಕ್ಷಣಗಳು ಕಂಡುಬಂದವರಿಗೆ ತಕ್ಷಣ ಚಿಕಿತ್ಸೆ ನೀಡಲಾಗುತ್ತಿದ್ದು, ‘ನಿ–ಕ್ಷಯ್ ಮಿತ್ರ’ ಯೋಜನೆಯಡಿ ದಾನಿಗಳು ಮತ್ತು ಸರ್ಕಾರದ ಮೂಲಕ ರೋಗಿಗಳಿಗೆ ಬೇಳೆಕಾಳು, ಮೊಟ್ಟೆ ಮತ್ತು ಧಾನ್ಯಗಳನ್ನೊಳಗೊಂಡ ಪೌಷ್ಟಿಕ ಆಹಾರದ ಕಿಟ್ಗಳನ್ನು ವಿತರಿಸಲಾಗುತ್ತಿದೆ.
“ಹೆಚ್ಚು ಜನಸಂದಣಿ ಇರುವ ಗ್ರಾಮಗಳಲ್ಲಿ ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಪತ್ತೆ ಹಚ್ಚುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ,” ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಆರ್.ಬಿ. ಮೋಹನ್ದಾಸ್ ತಿಳಿಸಿದ್ದಾರೆ.
ಜಿಲ್ಲೆಯ 51 ಗ್ರಾಮ ಪಂಚಾಯಿತಿಗಳನ್ನು ಈಗಾಗಲೇ ಕ್ಷಯ ಮುಕ್ತ ಎಂದು ಗುರುತಿಸಲಾಗಿದೆ. ಒಂದು ಸಾವಿರ ಜನಸಂಖ್ಯೆಗೆ ಒಂದಕ್ಕಿಂತ ಕಡಿಮೆ ಪ್ರಕರಣ ದಾಖಲಾದರೆ ಆ ಪಂಚಾಯಿತಿಯನ್ನು ಕ್ಷಯ ಮುಕ್ತ ಎಂದು ಪರಿಗಣಿಸಲಾಗುತ್ತದೆ. ಇಡೀ ಜಿಲ್ಲೆಯನ್ನು ಈ ಗುರಿಯತ್ತ ಕೊಂಡೊಯ್ಯಲು ಇಲಾಖೆ ಶ್ರಮಿಸುತ್ತಿದೆ.
ಸಾರ್ವಜನಿಕರು ಸಕಾಲಕ್ಕೆ ತಪಾಸಣೆ ಮಾಡಿಸಿಕೊಂಡು, ರೋಗದ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಚಿಕಿತ್ಸೆ ಪಡೆಯುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


