ತುಮಕೂರು: ಚುನಾವಣಾ ಆಯೋಗ ಕೈಗೊಂಡಿರುವ SIR ಪ್ರಕ್ರಿಯೆ ಮತದಾರ ಪಟ್ಟಿಯನ್ನು ಶುದ್ದೀಕರಿಸುವ ಹೆಸರಿನಲ್ಲಿ ಮನೆ ಮನೆಗೆ ಸಮೀಕ್ಷೆ ನಡೆಸಿ, ಸತ್ತವರು, ಸ್ಥಳಾಂತರಗೊಂಡವರು ಹಾಗೂ ನಕಲಿ ಹೆಸರುಗಳನ್ನು ತೆಗೆದುಹಾಕುವುದಾಗಿ ಹೇಳಿದರೂ, ಪ್ರಸ್ತುತ ನಡೆಯುತ್ತಿರುವ ಪ್ರಕ್ರಿಯೆಗಳು ಸರಿಯಾಗಿಲ್ಲ ಮತ್ತು ಅಸಂವಿಧಾನಿಕವಾಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ತಿಳಿಸಿದರು.
ಸಂವಿಧಾನ ವಿರೋಧಿ ದೇಶ ಸಮಗ್ರ ಪರಿಶೀಲನೆ (SIR) ವಿರುದ್ಧ ಸಿಪಿಎಂ ವತಿಯಿಂದ ಜನಜಾಗೃತಿ ಪ್ರತಿಭಟನೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಸಮಿತಿಯು ನಗರದ ಬಾರ್ಲೈನ್ ವಾರ್ಡ್ಗಳ ಬಿಎಸ್ಎನ್ಎಲ್ ಕಚೇರಿ ಮುಂಭಾಗ ಶುಕ್ರವಾರ ನಡೆಸಲಾಯಿತು. ಎಸ್ಐಆರ್ ಪ್ರಕ್ರಿಯೆ ಮೂಲತಃ ಮತದಾರ ಪಟ್ಟಿಯನ್ನು ಶುದ್ದೀಕರಿಸುವ ಉದ್ದೇಶದಿಂದ ಚುನಾವಣಾ ಆಯೋಗ ನಡೆಸುವ ಪರಿಶೀಲನಾ ಅಭಿಯಾನವಾಗಿದ್ದು, ಅರ್ಹ ಮತದಾರರನ್ನು ಸೇರಿಸಿ, ಅನರ್ಹರನ್ನು ತೆಗೆದುಹಾಕುವುದು ಅದರ ಉದ್ದೇಶವಾಗಿದೆ ಆದರೆ ಪ್ರಸ್ತುತ ನಡೆಯುತ್ತಿರುವ ಕ್ರಮಗಳು ಜನವಿರೋಧಿಯಾಗಿದ್ದು, ಅದರ ಹಿಂದೆ ಎನ್ಆರ್ಸಿ ರೀತಿಯ ಉದ್ದೇಶಗಳು ಅಡಗಿವೆ ಎಂದು ಆರೋಪಿಸಿದರು.
ಇತ್ತೀಚಿನ ವರದಿಗಳ ಪ್ರಕಾರ ಕೆಲವು ರಾಜ್ಯಗಳಲ್ಲಿ ಲಕ್ಷಾಂತರ ಜನರ ಹೆಸರುಗಳು ಮತದಾರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿರುವುದರಿಂದ ಮತದಾನದ ಹಕ್ಕು ಕಳೆದುಕೊಳ್ಳುವ ಆತಂಕ ವ್ಯಕ್ತವಾಗಿದೆ. ಇದರಿಂದ ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತದೆ. ಇದು ಹಿಂದುತ್ವ ಹಾಗೂ ಕಾರ್ಪೊರೇಟ್ ನಿರಂಕುಶತೆಯ ಭಾಗವಾಗಿ ದೇಶವನ್ನು ನವ ಫ್ಯಾಸಿಸ್ಟ್ ದಿಕ್ಕಿನಲ್ಲಿ ಕೊಂಡೊಯ್ಯುವ ಪ್ರಯತ್ನವಾಗಿದೆ ಎಂದು ಆಕ್ಷೇಪಿಸಿದರು.
ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಉಮೇಶ್ ಮಾತನಾಡಿ, ಕರ್ನಾಟಕದಲ್ಲಿ ಈ ಪ್ರಕ್ರಿಯೆಯಿಂದ 1 ಕೋಟಿ 20 ಲಕ್ಷ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಆದ್ದರಿಂದ ಸಂಘಟಿತವಾಗಿ ಎಸ್ಐಆರ್ ಹೆಸರಿನಲ್ಲಿ ಅಘೋಷಿತ ಎನ್ಆರ್ಸಿ ಪ್ರಜಾಪ್ರಭುತ್ವವನ್ನು ಉಳಿಸಲು ಧ್ವನಿ ಎತ್ತಲು ಮತದಾರರು, ದೇಶಪ್ರೇಮಿಗಳು ಮತ್ತು ಸಂವಿಧಾನವನ್ನು ಕಾಪಾಡುವವರು ಈ ಕ್ರಮದ ವಿರುದ್ಧ ಒಂದಾಗಿ ಹೋರಾಡಬೇಕು ಎಂದರು.
ನಗರ ಕಾರ್ಯದರ್ಶಿ ಎನ್.ಲೋಕೇಶ್ ರವರು ಮಾತನಾಡಿ, ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ಪರಿಶೀಲಿಸಿಕೊಂಡು, ಬಿಎಲ್ ಒ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಮನವಿ ಮಾಡಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಇನ್ಸಾಫ್ ರಫೀಕ್, ಸುಬ್ರಮಣ್ಯ, ಶಿವಕುಮಾರಸ್ವಾಮಿ, ರಂಗನಾಥ್, ವಿಲೀಲ್, ಇಂತಿಯಾ, ಮಧುಸೂದನ್, ಕಲ್ಪನಾ, ಮಾರುತಿ, ಲಕ್ಷ್ಮೀಕಾಂತ್, ವಸೀಂ ಅಕ್ರಂ, ರಾಘವೇಂದ್ರ ಮುಂತಾದವರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


