ಕೊರಟಗೆರೆ : ಇತ್ತೀಚಿಗೆ ನಡೆದ ದೃಷ್ಠಿ ಚೇತನ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಗೆದ್ದು ಸಾಧನೆ ಮಾಡಿದ ತಂಡದ ಆಟಗಾರ್ತಿ ಕಾವ್ಯಗೆ ತಾಲ್ಲೂಕಿನ ಜಟ್ಟಿ ಅಗ್ರಹಾರ ಗ್ರಾಮ ಪಂಚಾಯಿತಿಯಲ್ಲಿ ಗ್ರಾ.ಪಂ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ತಹಶೀಲ್ದಾರ್ ಕೆ. ಮಂಜುನಾಥ್ ಹಾಗೂ ಇಓ ಅಪೂರ್ವ ಸಿ ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಮಂಜುನಾಥ್ ಮಾತನಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರಾ ಹೋಬಳಿಯ ನಾಯಕನಪಾಳ್ಯ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಕಾವ್ಯ ಅವರ ಸಾಧನೆ ಇಡೀ ದೇಶವೇ ಮೆಚ್ಚುವಂತ ಸಾಧನೆ ಮಾಡಿದ್ದಾರೆ. ವಿಶೇಷ ಚೇತನರು ಆಗಿದ್ದರೂ ಸಹ ನಾವು ಕೂಡ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಇವರನ್ನ ಸ್ಪೂರ್ತಿಯಾಗಿ ಇಟ್ಟುಕೊಂಡು ಮಹಿಳೆಯರು ಹಾಗೂ ಇವತ್ತಿನ ಹೆಣ್ಣು ಮಕ್ಕಳು ವಿವಿಧ ರಂಗ ಕ್ಷೇತ್ರಗಳಲ್ಲಿ ಆರಿಸಿಕೊಂಡು ತಮ್ಮ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದಾಗಿದೆ ಎಂದು ತಿಳಿಸಿದರು.
ನಮ್ಮ ಜಿಲ್ಲೆಯಲ್ಲಿ ಇಬ್ಬರು ವಿಶೇಷ ಚೇತನರು ಸಾಧನೆ ಮಾಡಿ ನಮ್ಮ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇಂತಹ ಪ್ರತಿಭೆಗಳನ್ನ ಗುರಿತಿಸುವುದು ನಮ್ಮ ಕರ್ತವ್ಯ. ಮ್ಯಾರಥಾನ್ ಹಾಕಿ ಸೇರಿದಂತೆ ಇನ್ನಿತರ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನ ಪಡೆದುಕೊಂಡಿದ್ದು, ಇವರು ಇನ್ನಷ್ಟು ಅವಕಾಶಗಳು ದೊರೆತು ದೊಡ್ಡ ಸಾಧನೆ ಮಾಡಲಿ. ನಾನು ಕೂಡ ಇವರಿಗೆ ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ ಎಂದು ಹೇಳಿದರು.
ದೃಷ್ಠಿ ಚೇತನ ಮಹಿಳಾ ಟಿ20 ವಿಶ್ವ ಕಪ್ ಗೆದ್ದ ತಂಡ ಆಟಗಾರ್ತಿ ಕಾವ್ಯ ಮಾತನಾಡಿ, ನಾನು ಆರು ವರ್ಷ ಇರುವಾಗಲೇ ನಮ್ಮ ತಂದೆ ಕೂಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋಗಿದ್ದೆ, ಅದೇ ಸಂದರ್ಭದಲ್ಲಿ ಯಾರಿಂದಲೋ ಆಕಸ್ಮಿಕವಾಗಿ ಕಲ್ಲೊಂದು ನನ್ನ ಕಣ್ಣಿಗೆ ತಾಗಿ ಕಣ್ಣಿನ ಸಮಸ್ಯೆಯಾಗಿತ್ತು. ನನ್ನ ಒಂದು ಕಣ್ಣು ದೃಷ್ಠಿ ಕಳೆದುಕೊಂಡಾಗ ಬಡತನದಲ್ಲಿದ್ದ ನನ್ನ ತಂದೆ ಆಸ್ಪತ್ರೆಗೆ ತೋರಿಸಲು ಶಕ್ತಿ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಬೆಂಗಳೂರಿನ ಸಮಸ್ತಂ ಸಂಸ್ಥೆಯಲ್ಲಿ ನನಗೆ ಎಲ್ಲಾ ತರದ ವ್ಯವಸ್ಥೆಯನ್ನ ಮಾಡಿಕೊಟ್ಟಿರುವ ಕಾರಣ ಇಂದು ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಡಿ.ಪ್ರಭಾಕರ್ ಮಾತನಾಡಿ, ಸಹೋದರಿ ಕಾವ್ಯ ಅವರ ತಂದೆ ನನ್ನ ಬಾಲ್ಯ ಸ್ನೇಹಿತ ಇವರ ಮಗಳ ಸಾಧನೆ ನನಗೆ ತುಂಬಾ ಖುಷಿ ತಂದಿದೆ. ನಮ್ಮ ಗ್ರಾಮದ ಪಕ್ಕದವರೇ ಆದ ಕಾವ್ಯ ಅವರ ಸಾಧನೆ ಕಂಡು ನಮ್ಮ ಮನೆಯ ಮಗಳು ಸಾಧನೆ ಮಾಡಿದಷ್ಟು ಸಂತಸ ತಂದಿದೆ. ಇಂತಹ ಸಾಧನೆಗಳು ನಮ್ಮ ಕಾವ್ಯಗೆ ಇನ್ನಷ್ಟು ಸಿಗಲಿ ಎಂದು ದೇವರಲ್ಲಿ ಕೇಳಿಕೊಳ್ಳತ್ತೇನೆ. ಅವರ ಸಾಧನೆಗೆ ನಮ್ಮ ಗ್ರಾ.ಪಂ. ಹಾಗೂ ತಾಲ್ಲೂಕು ಆಡಳಿತದಿಂದ ಸನ್ಮಾನಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಇಓ ಅಪೂರ್ವ ಸಿ, ಪಿಡಿಓ ರಂಗನಾಥ್, ಕಾರ್ಯದರ್ಶಿ ಮುನಿಯಯ್ಯ, ಮುಖಂಡರಾದ ಮಂಜುನಾಥ್, ರಾಮಚಂದ್ರಯ್ಯ, ಪುಟ್ಟ ಹನುಮಂತರಾಯಪ್ಪ, ಚಿಕ್ಕರಂಗಯ್ಯ, ಲಕ್ಷೀಪತಿ, ಕಮಲಮ್ಮ, ಏರ್ ಟೆಲ್ ಗೋಪಿ, ಶಕ್ತಿ, ರಮೇಶ್, ಹರ್ಷ ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


