ಕೊರಟಗೆರೆ : ಕೊರಟಗೆರೆ ತಾಲೂಕಿನ 62 ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಸುವ ಕಾಮಗಾರಿಗಳ ಚಾಲನೆ ತಾಲ್ಲೂಕಿನ ಇತಿಹಾಸ ಪುಟ ಸೇರಿದೆ ಎಂದು ಗೃಹ ಸಚಿವ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಕೊರಟಗೆರೆ ತಾಲ್ಲೂಕಿನ ಸುಪ್ರಸಿದ್ದ ಯಾತ್ರಾಸ್ಥಳ ಗೊರವನಹಳ್ಳಿಯಲ್ಲಿ ಸುಮಾರು 453 ಕೋಟಿ ರೂಗಳ ಕಾಮಗಾರಿಗಳ ಉದ್ಘಾಟನೆ ಶಂಕುಸ್ಥಾಪನೆಗಳನ್ನು ನೆರವೇರಿಸಿ ಮಾತನಾಡಿ, 2008 ರಲ್ಲಿ ನಾನು ಕೊರಟಗೆರೆ ಕ್ಷೇತ್ರಕ್ಕೆ ಚುನಾವಣೆಗೆ ಬಂದಾಗ ಕೊಡ್ಲಹಳ್ಳಿಯ ಒಬ್ಬ ರೈತ ಮಹಿಳೆ ನನ್ನನ್ನು ಈ ಭಾಗಕ್ಕೆ ನೀರು ಹರಿಸುವಂತೆ ಕೋರಿದ್ದರು. ನಾನು ಅಂದು ಆಕೆಗೆ ಮಾತು ನೀಡಿ ಚುನಾವಣೆಯಲ್ಲಿ ಗೆದ್ದಾಗ ಸರ್ಕಾರ ಬರಲ್ಲಿಲ್ಲ, 2013ರಲ್ಲಿ ನಾನು ಈ ಕ್ಷೇತ್ರದಲ್ಲಿ ಸೋತೆ ಸರ್ಕಾರ ಬಂತು ಆದರೆ ನಾನು ಸರ್ಕಾರದ ಭಾಗವಾಗಲ್ಲಿಲ್ಲ, ಆದರೂ ಎರಡು ವರ್ಷವಾದ ನಂತರ ನಾನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಈ ಭಾಗದ ಜನರಿಗೆ ಎತ್ತಿನಹೊಳೆ ಯೋಜನೆಯನ್ನು ರೂಪಿಸಿ 6,500 ಸಾವಿರ ಕೋಟಿ ಮಂಜೂರು ಮಾಡಿಸಲಾಯಿತು ಎಂದರು.
2023 ರಲ್ಲಿ ನಮ್ಮ ಸರ್ಕಾರ ಬಂದ ಮೇಲೆ ಎತ್ತಿನಹೊಳೆ ಯೊಜನೆಗೆ ಬದ್ದರಾಗಿದ್ದು 24 ಟಿ.ಎಂ.ಸಿ ನೀರಿನ ಈ ಯೋಜನೆಯಲ್ಲಿ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಭಾಗದ ಜನರಿಗೆ ನೀರು ಹರಿಸಲಾಗುತ್ತದೆ, ಈ ಬಾರಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಎತ್ತಿನಹೊಳೆ ಯೋಜನೆಯಲ್ಲಿ ಕೊರಟಗೆರೆ ತಾಲ್ಲೂಕಿನ 62 ಕೆರೆಗಳು ಮಧುಗಿರಿ ತಾಲ್ಲೂಕಿನ 48 ಕೆರೆಗಳಿಗೆ ನೀರು ಹರಿಸಲು ತಲಾ 285 ಕೋಟಿ ಮತ್ತು 280 ಕೋಟಿ ರೂಗಳನ್ನು ಸಣ್ಣ ನೀರಾವರಿ ಇಲಾಖೆಗೆ ಮಂಜೂರು ಮಾಡಿದ್ದು ಇದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಮತ್ತು ಇದನ್ನು ಉದ್ಘಾಟಿಸಿದ ಸಣ್ಣ ನೀರಾವರಿ ಸಚಿವರ ಬೋಸರಾಜುಗೆ ಧನ್ಯವಾದ ತಿಳಿಸಿದರು.
ಕೊರಟಗೆರೆ ತಾಲ್ಲೂಕು ಕ್ಷೇತ್ರದ ಪುರವಾರ ಹೋಬಳಿಯ 8 ಕೆರೆಗಳಿಗೆ ನೀರು ಹರಿಯಲಿದ್ದು ಕೋರ ಹೊಬಳಿಯ ಬೆಳ್ಳಾವಿ-ಕೋರ ಲೈನ್ ಯೋಜನೆಯಲ್ಲಿ 36 ಕೆರೆಗಳಿಗೆ ನೀರು ಹರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಅದನ್ನು ಶೀಘ್ರವಾಗಿ ಮಂಜೂರು ಮಾಡಿಸಲಾಗುವುದು. ಕೊರಟಗೆರೆ 62 ಕೆರೆಗಳಿಗೆ ನೀರು ಹರಿಸಲು ಈ ಯೋಜನೆಯಲ್ಲಿ 826 ಎಂಸಿಎಪ್ಟಿ ನೀರನ್ನು ಅಲೋಕೇಷನ್ ಮಾಡಿಕೊಳ್ಳಲಾಗಿದ್ದು ನೀರಾವರಿ ಯೋಜನೆ ಸರ್ಕಾರದ ಅದ್ಯತೆ ಎಂದರು.
ಸಣ್ಣ ನೀರಾವರಿ ಸಚಿವ ಬೋಸರಾಜು ಮಾತನಾಡಿ, ಡಾ.ಜಿ.ಪರಮೇಶ್ವರಗೆ ಗೃಹ ಇಲಾಖೆ ಬಹಳ ದೊಡ್ಡ ಜವಾಬ್ದಾರಿ ಇಲಾಖೆಯಾಗಿದೆ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹಳ ನಂಬಿಕೆ ಇಟ್ಟು ಈ ಜವಾಬ್ದಾರಿಯನ್ನು ಡಾ.ಜಿ.ಪರಮೇಶ್ವರರಿಗೆ ಒಪ್ಪಿಸಿ ನೀಡಿದ್ದಾರೆ ಈ ಜಿಲ್ಲೆಗೆ ಸಾವಿರಾರು ಕೋಟಿ ಅನುಧಾನ ತಂದಿದ್ದಾರೆ ನನ್ನ ಇಲಾಖೆಯ 288 ಕೋಟಿ ವಿಶೇಷ ಹಣ ಡಾ.ಜಿ.ಪರಮೇಶ್ವರ ಶ್ರಮವಹಿಸಿ ಮಂಜೂರು ಮಾಡಿದ್ದಾರೆ, ಈ ಭಾಗದಲ್ಲಿ ಅಂತರಜಲ ಕಡಿಮೆ ಇದ್ದು 800 ರಿಂದ 1000 ಅಡಿಗಳ ಅವರಿಗೆ ಕೊಳವೆಬಾವಿಗೆ ನೀರು ಸಿಗಬಹುದಾದ ಪರಿಸ್ಥಿತಿಯಲ್ಲಿ 62 ಕೆರೆಗಳಿಗೆ ನೀರು ಹರಿಯುವುದರಿಂದ ಅಂತರಜಲ ಸಂಪೂರ್ಣ ವೃದಿಯಾಗುತ್ತದೆ ಇದರೊಂದಿಗೆ ಗೃಹ ಸಚಿವರು ನನ್ನ ಇಲಾಖೆಯಿಂದ 86 ಹೆಚ್ಚುವರಿಯಾಗಿ ಕೊಳವೆ ಬಾವಿಯನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಈ ರಾಜ್ಯದಲ್ಲಿ ಮುಖ್ಯಮತ್ರಿಗಳ ನಂಬಿಗಸ್ಥರಲ್ಲಿ ಡಾ.ಜಿ.ಪರಮೇಶ್ವರ ಮೊದಲಿಗರು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಮತ್ತು ತುಮುಲ್ ಅದ್ಯಕ್ಷ ವೆಂಕಟೇಶ್, ಸಣ್ಣ ನೀರಾವರಿ ಕಾರ್ಯದರ್ಶಿ ರಾಘವನ್, ಮುಖ್ಯಇಂಜಿಯರ್ ಹರಿಪ್ರಕಾಶ್, ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಪೋಲೀಸ್ ವರಿಷ್ಠಾಧಿಕಾರಿ ಅಶೋಕ್, ಅಪಾರ ಜಿಲ್ಲಾಧಿಕಾರಿ ತಿಪ್ಪೆಸ್ವಾಮಿ, ಮೂಡ್ಲಗಿರಿ, ಜಿಲ್ಲಾ ಗ್ಯಾರೆಂಟಿ ಸಮಿತಿ ಅಧ್ಯಕ್ಷ ಚಂದ್ರಶೇಖರಗೌಡ, ಉಪವಿಭಾಗಾಧಿಕಾರಿ ಘೋಟೂರು ಶಿವಪ್ಪ, ತಹಶೀಲ್ದಾರ್ ಮಂಜುನಾಥ್, ಇಓ ಅಪೂರ್ವ, ನೀರಾವರಿ ಅದೀಕ್ಷಕ ಸಂಜೀವರಾಯಪ್ಪ, ತಿಪ್ಪೇಸ್ವಾಮಿ, ರಮೇಶ್, ಸೇರಿದಂತೆ ಇತರರು ಹಾಜರಿದ್ದರು.
ವರದಿ : ಮಂಜುಸ್ವಾಮಿ ಎಂ.ಎನ್., ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW