ವೈ.ಎನ್.ಹೊಸಕೋಟೆ : ಹೋಬಳಿಯ ಹನುಮಂತನಹಳ್ಳಿ ಗ್ರಾಮದ ಬಡಗಿ ತಿಮ್ಮರಾಯಪ್ಪರವರ ಮನೆಯಲ್ಲಿ ಬುಕ್ಕರಾಯರ ಕಾಲಕ್ಕೆ ಸಂಬಂದಿಸಿದ ತಾಮ್ರ ಶಾಸನ ಪತ್ತೆಯಾಗಿದೆ.
ಈ ಭಾಗದ ಇತಿಹಾಸ ಸಂಶೋಧಕ ಹೊ.ಮ.ನಾಗರಾಜು ಸ್ಥಳೀಯ ಜಾನಪದ ಕಲಾವಿದರಾದ ಟಿ.ಎ.ಶಿವಣ್ಣರ ಸಹಕಾರದಿಂದ ಶಾಸನವನ್ನು ಪತ್ತೆಹಚ್ಚಿದ್ದಾರೆ. ಅಷ್ಟವಧಾನಿ ಗುರುವೇಪಲ್ಲಿ ನರಸಿಂಹುಲು ರವರ ಸಹಕಾರದಿಂದ ಶಾಸನವನ್ನು ಓದಲಾಗಿದ್ದು, ಗೌರಿಬಿದನೂರು ತಾಲ್ಲೂಕಿನಲ್ಲಿರುವ ನಗರಗೆರೆ ಗ್ರಾಮದ ರಚನೆಯ ವಿಷಯ ಒಳಗೊಂಡಿದೆ ಎಂದಿದ್ದಾರೆ.
ಶಾಸನ ಫಲಕವು 12 ಇಂಚು ಎತ್ತರ 6 ಇಂಚು ಅಗಲ ಅಳತೆಯನ್ನು ಹೊಂದಿದೆ. ದಪ್ಪದ ತಾಮ್ರದ ಹಲಗೆಯ ಎರಡು ಮುಖಗಳ ಮೇಲೆ ಶಾಸನವನ್ನು ಕೆತ್ತಲಾಗಿದ್ದು, ಒಟ್ಟು 80 ಸಾಲುಗಳಿವೆ. ಅಕ್ಷರಗಳು ಕನ್ನಡ ಲಿಪಿಯಾಗಿದ್ದು, ತೆಲುಗು ಭಾಷೆಯನ್ನು ಒಳಗೊಂಡ ಶಾಸನ ಇದಾಗಿದೆ.
ಗ್ರಾಮಕ್ಕೆ ರಾಮದೇವರುಗಳು ದಯಮಾಡಿದಾಗ ಬರೆದ ರುಜುವು ಎಂದು ಶಾಸನದ ಪ್ರಾರಂಭದ ಸಾಲುಗಳಲ್ಲಿ ತಿಳಿಸಲಾಗಿದೆ. ಆದರೆ ಶಾಸನದಲ್ಲಿ ಶಾಸನ ರಚನಾ ಕಾಲ ಲಭ್ಯವಿರುವುದಿಲ್ಲ. ನಿಡಗಲ್ಲು, ಹೊಸಕೋಟೆ ಹರತಿ ಪಾಳೇಗಾರರ ಮೂಲಪುರುಷನಾದ ಆನೆಗೊಂದಿಯ ತಿಪ್ಪನಾಯಕನು ಶಾಲಿ ಶಕ 1157 ರಲ್ಲಿ ಬಹದ್ದೂರ್ ಮಲ್ಲಿಕನ ಮೇಲೆ ಯುದ್ದ ಮಾಡಿ ಗೆದ್ದ ಎಂಬ ಉಲ್ಲೇಖವಿದೆ. ಇದರೊಟ್ಟಿಗೆ ಶಾಸನದಲ್ಲಿ ಬರುವ ಮಾನ್ಯಗಳ ಅಳತೆಯನ್ನು ವಿಜಯನಗರ ಕಾಲದ ನಾಣ್ಯಗಳಾದ ರಾಮ ಟಂಕಿಗಳು, ದುರ್ಗಿಗಳು ಮತ್ತು ಪುತಳಿಗಳಿಗಳಿಂದ ಗುರ್ತಿಸಲಾಗಿದೆ.
ಆದಾಗಿ ಈ ಶಾಸನವು ವಿಜಯನಗರ ಕಾಲಘಟ್ಟದ ಶಾಸನವೆಂದು ತಿಳಿಯಬಹುದು. ಶಾಸನ ಪಾಠಾಂಶದಲ್ಲಿ ಅಕ್ಷರ ಮತ್ತು ಕಾಗುಣಿತ ದೋಷಗಳು ಬಹಳಷ್ಟಿದ್ದು ವಾಕ್ಯ ಜೋಡಣೆಯು ಅಲ್ಲಲ್ಲಿ ಅಸ್ಪಷ್ಟವಾಗಿದೆ. ಆದಾಗಿ ಮೇಲ್ಮೋಟಕ್ಕೆ ಇದೊಂದು ಕೂಟ ಶಾಸನವೆಂಬಂತೆ ಕಂಡುಬರುತ್ತಿದೆ ಎನ್ನುತ್ತಾರೆ ಸಂಶೋಧಕರು.
ವೃಷಭ ಪತಿಗಾ ತೆಲಿಸಿತಿ ಎಂಬ ಬೀಜಾಕ್ಷರಗಳುಳ್ಳ ಮೂರು ಪಟ್ಟಿಯ ಚೌಕಟ್ಟಿನೊಂದಿಗೆ ಪ್ರಾರಂಭವಾಗುವ ಶಾಸನವು ನಗರಿಗೆರಿ ತಾಮ್ರ ಶಾಸನ ಎಂಬ ತಲೆಬರಹವನ್ನು ಹೊಂದಿದೆ.
ವಿಜಯನಗರದ ಅರಸ ಬುಕ್ಕಭೂಪತಿರಾಯರ ಆಜ್ಞೆಯಂತೆ ಎಮ್ಮೇಲೋರು ಗೋತ್ರದ ಆನೆಗೊಂದಿ ತಿಪ್ಪನಾಯಕನು ಬಹದ್ದೂರ್ ಮಲ್ಲಿಕನನ್ನು ಸೋಲಿಸಿ ರಾಯರಿಂದ ಬಹುಮತಿ ಮತ್ತು ಬಳುವಳಿ ಪಡೆಯುತ್ತಾನೆ. ನಂತರದ ಕಾಲಘಟ್ಟದಲ್ಲಿ ಆತನ ಸಂತತಿಯವರು ಗೂಟೂರು ಎಂಬಲ್ಲಿ ನೆಲೆ ನಿಂತಿದ್ದಾಗ ಸಮೀಪದ ಪೆನಗೊಂಡಗು ಮತ್ತು ಸೋಮಪುರಿ ಪಟ್ಟಣಕ್ಕೂ ಯುದ್ದ ಸಂಭವಿಸಿ ಅಲ್ಲಿದ್ದ ತಿಪ್ಪನಾಯಕನ ವಂಶಜರು ಸೋಮಪುರಿ ಪಟ್ಟಣವನ್ನು ಪೆನಗೊಂಡೆ ರಾಯರಿಗೆ ಗೆದ್ದುಕೊಡುತ್ತಾರೆ. ಅದಕ್ಕೆ ಪ್ರತಿಫಲವಾಗಿ ರಾಯರು ಅವರಿಗೆ ನಾರಸೀಮೆಯಲ್ಲಿ ಊರುಗಳನ್ನು ಕಟ್ಟಲು ಅನುಮತಿ ನೀಡುತ್ತಾನೆ. ಅದರಂತೆ ಅವರು ನಾರಸೀಮೆಯ ಮಲೆಯನ್ನು ಕಡಿದು ಊರನ್ನು ಕಟ್ಟುತ್ತಾರೆ. ಅದನ್ನು ‘12 ಅರ್ರಕೂಟ 10’ ಎಂದು ಗುರ್ತಿಸುತ್ತಾರೆ. ಅಲ್ಲಿ ಕೆರೆ ಮತ್ತು ದೇವಾಲಯಗಳ ಕಟ್ಟುತ್ತಾರೆ. ನಂತರ ಪೆದ್ದತಿಮ್ಮಳನಾಯಕ ಮತ್ತು ತಿರುಮಲ ನಾಯಕರು ಪರಿವಾರ ಸಮೇತರಾಗಿ ತಿರುಮಲಕ್ಕೆ ಹೋಗಿ ಸ್ವಾಮಿಯನ್ನು ಕರೆತಂದು ಕರ್ಕಾಟಕ ಲಗ್ನದಲ್ಲಿ ಗ್ರಾಮಕ್ಕೆ ತಮ್ಮ ‘ಅಳ್ಳೂರು’ ಎಂತಲೂ ಪ್ರತಿನಾಮ ‘ನಗರಿಗೆರಿ’ ಎಂತಲೂ ನಾಮಕರಣ ಮಾಡಿಸುತ್ತಾರೆ. ಗ್ರಾಮಕ್ಕೆ ಸರಹದ್ದುಗಳನ್ನು ಗುರ್ತಿಸಿ ಆಯಗಾರರನ್ನು ನೇಮಿಸಿ ತಾಮ್ರ ಶಾಸನವನ್ನು ರಚಿಸಿ ನಗರಿಗೆರಿ ಹನುಮಂತರಾಯ ದೇವಾಲಯದಲ್ಲಿ ಅಂಕೆ ಕೊಂಡಪುನಾಯಕನಿಗೆ ನೀಡುತ್ತಾರೆ. ಇದಕ್ಕೆ ಹನ್ನೆರಡು ಜನ ಆಯಗಾರರು ಒಪ್ಪುತ್ತಾರೆ ಎಂದು ತಿಳಿಸುತ್ತಾ ಶಾಸನ ಕೊನೆಗೊಳ್ಳುತ್ತದೆ.
ಶಾಸನವು ಬುಕ್ಕಭೂಪತಿರಾಯರ ಬಿರುದಾವಳಿಗಳು ಸೋಮಪುರಿ ಪಟ್ಟಣದ ಮೇಲೆ ಯುದ್ದ ಮಾಡಿದವರು, ಗ್ರಾಮದ 12 ಜನ ಆಯಗಾರರು, ಅವರಿಗೆ ಕೊಟ್ಟ ಮಾನ್ಯದ ಭಾಗಗಳು, ಗ್ರಾಮದಲ್ಲಿ ಕಟ್ಟಿದ ದೇವಾಲಯಗಳು, ತಿಪ್ಪನಾಯಕನ ಸಂತತಿ, ಶಾಸನಗಳನ್ನು ಹಾಕಿಸಿದ ಸ್ಥಳಗಳ ಮಾಹಿತಿಯನ್ನು ಒಳಗೊಂಡಿದೆ ಎಂದಿದ್ದಾರೆ ಸಂಶೋದಕರು.
ಈ ಶಾಸನವು ನಮಗೆ ಪಿತ್ರಾರ್ಜಿತವಾಗಿ ಬಂದಿದೆ. ತಿರುಪತಿ ತಿಮ್ಮಪ್ಪನ ಪ್ರತಿರೂಪವೆಂದು ನಾವು ಭಾವಿಸಿದ್ದು, ತಲೆಮಾರುಗಳ ಕಾಲದಿಂದ ಶ್ರದ್ಧಾಭಕ್ತಿಗಳಿಂದ ಪೂಜೆ ಮಾಡುತ್ತಿದ್ದೇವೆ. ಆದಾಗಿ ಮತ್ತೊಬ್ಬರಿಗೆ ತೋರಿಸುವ ಅಥವಾ ಮುಟ್ಟುವ ಅವಕಾಶ ಕೊಡುವುದಿಲ್ಲ ಎಂದು ಅನಿಲ್, ಹನುಮಂತನಹಳ್ಳಿ ಹೇಳಿದ್ದಾರೆ.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q