ತುಮಕೂರು: ಆರ್ಥಿಕವಾಗಿ, ಸಾಮಾಜಿಕವಾಗಿ,ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಉಪಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಬೇಕೆಂದು ಆಗ್ರಹಿಸಿ ಇಂದು ಅಖಿಲ ಭಾರತ ವೀರಶೈವ,ಲಿಂಗಾಯಿತ ಮಹಾಸಭಾದವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ವಿವಿಧ ಮಠಗಳ ಸ್ವಾಮೀಜಿಗಳ ನೇತೃತ್ವದಲ್ಲಿ ನಂದಿ ಧ್ವಜ,ವೀರಗಾಸೆ ಕಲಾ ಪ್ರದರ್ಶನದ ಜೊತೆಗೆ,ಸಾವಿರಾರು ಸಂಖ್ಯೆಯಲ್ಲಿದ್ದ ಲಿಂಗಾಯಿತ,ವೀರಶೈವ ಸಮುದಾಯದ ಮುಖಂಡರುಗಳು ನಗರದ ಟೌನ್ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಪ್ರತಿಭಟನಾನಿರತ ವೀರಶೈವ,ಲಿಂಗಾಯಿತ ಸಮುದಾಯದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಚಿಕ್ಕತೊಟ್ಲುಕೆರೆಯ ಶ್ರೀಅಟವಿ ಶಿವಲಿಂಗಸ್ವಾಮೀಜಿ,ಗೊಲ್ಲಹಳ್ಳಿಮಠದ ಶ್ರೀವೀಭವ ವಿದ್ಯಾಶಂಕರ ಸ್ವಾಮೀಜಿ, ಮಾಕನಹಳ್ಳಿ ಮಠದ ಶ್ರೀಗಂಗಾಧರ ಸ್ವಾಮೀಜಿ, ಬೆಳ್ಳಾವಿಯ ಶ್ರೀಕಾರದೇಶ್ವರ ಮಠದ ಶ್ರೀಕಾರದ ವೀರಬಸವಸ್ವಾಮೀಜಿ, ಶ್ರೀರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಹರಳೂರು ಮಠದ ಶ್ರೀ ಚನ್ನಬಸವಸ್ವಾಮೀಜಿಗಳು, ರಾಜ್ಯ ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಲ್ಲಿ ವೀರಶೈವ, ಲಿಂಗಾಯಿತರು ಸೇರಿದ್ದಾರೆ.ಆದರೆ ಕೇಂದ್ರದ ಪಟ್ಟಿಯಲ್ಲಿ ಇಲ್ಲ.ಇದರಿಂದ ಯುಪಿಎಸ್ಸಿ,ಸೇರಿದಂತೆ ಕೇಂದ್ರ ಸರಕಾರದ ಉದ್ಯೋಗಗಳಲ್ಲಿ ವೀರಶೈವ ಲಿಂಗಾಯಿತ ಸಮುದಾಯಕ್ಕೆ ಸೇರಿದ ಉಪಪಂಗಡಗಳಿಗೆ ತೀವ್ರ ಅನ್ಯಾಯವಾಗುತ್ತಿದ್ದು,ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೂಡಲೇ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ನಮ್ಮೆಲ್ಲಾ ವೀರಶೈವ,ಲಿಂಗಾಯಿತ ಸಮುದಾಯದ ಉಪಪಂಗಡಗಳ ಒತ್ತಾಯವಾಗಿದೆ ಎಂದರು.
ವೀರಶೈವ, ಲಿಂಗಾಯಿತ ಸಮುದಾಯವು ಬಹುತೇಕ ಕೃಷಿ ಮತ್ತು ಕೃಷಿಯಾಧಾರಿತ ಕಸುಬುಗಳನ್ನು ಅವಲಂಬಿಸಿದ್ದು, ಆರ್ಥಿಕವಾಗಿ,ಸಾಮಾಜಿಕವಾಗಿ,ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವಾಗಿದ್ದು,ಕೇಂದ್ರದ ಓಬಿಸಿ ಪಟ್ಟಿಗೆ ಸೇರದ ಕಾರಣ ಹಲವಾರು ದಶಕಗಳಿಂದ ಕೇಂದ್ರ ಸರಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಕೇಂದ್ರದ ನೇಮಕಾತಿಗಳಿಂದ ವಂಚಿತ ವಾಗಿವೆ. ಆದರೆ ೧೪-೦೯-೧೯೯೪ರಲ್ಲಿ ಕೇಂದ್ರದ ಓಬಿಸಿ ಪಟ್ಟಿಗೆ ವೀರಶೈವ,ಲಿಂಗಾಯಿತ ಸಮುದಾಯಕ್ಕೆ ಸೇರಿದ ೧೬ ಉಪ ಪಂಗಡಗಳನ್ನು ಸೇರಿಸಲಾಗಿದೆ.ಆದೇ ರೀತಿ ಉಳಿದ ಉಪಪಂಗಡಗಳನ್ನು ಓಬಿಸಿ ಪಟ್ಟಿಗೆ ಸೇರಿಸುವ ಮೂಲಕ ಆ ಸಮುದಾಯಗಳು ಮೀಸಲಾತಿಯ ಲಾಭ ಪಡೆಯಲು ಅವಕಾಶ ಕಲ್ಪಿಸಬೇಕೆಂಬುದು ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾದ ಒತ್ತಾಯವಾಗಿದೆ ಎಂದು ಶ್ರೀಗಳು ತಿಳಿಸಿದರು.
ಈ ವಿಚಾರವಾಗಿ ೨೦೧೯ರಲ್ಲಿ ಎರಡು ಬಾರಿ ಮತ್ತು ೨೦೨೧ರಲ್ಲಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.ಆದರೆ ಇದುವರೆಗೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸರಕಾರದ ಈ ವಿಳಂಬದಿಂದಾಗಿ ನಮ್ಮ ಮಕ್ಕಳ ಉನ್ನತ ಹುದ್ದೆಗಳ ಕನಸು ಈಡೇರುವ ಲಕ್ಷಣಗಳಿಲ್ಲ.ಇಂದು ಕೂಡ ನಾವು ಸರಕಾರಕ್ಕೆ ಒತ್ತಾಯ ಮಾಡುತ್ತಿದ್ದೇವೆ.ಒಂದು ವೇಳೆ ಸರಕಾರ ಕ್ರಮ ಕೈಗೊಳ್ಳದಿದ್ದರೆ ವಿಧಾನಸೌಧ ಮುತ್ತಿಗೆಯಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ವೀರಶೈವ, ಲಿಂಗಾಯಿತ ಸಮುದಾಯದ ಎಲ್ಲಾ ಉಪಪಂಗಡಗಳನ್ನು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಬೇಕೆಂಬ ಒತ್ತಾಯಕ್ಕೆ ರಾಜ್ಯದ ಎಲ್ಲಾ ವೀರಶೈವ,ಲಿಂಗಾಯಿತ ಮಠಾಧೀಶರುಗಳು ಸಹಮತ ವ್ಯಕ್ತಪಡಿಸಿದ್ದು,ಮುಖ್ಯಮಂತ್ರಿಗಳಿಗೆ ಸಲ್ಲಿಸುವ ಮನವಿ ಪತ್ರಕ್ಕೆ ಸಹಿ ಹಾಕುವ ಮೂಲಕ ಸರಕಾರಕ್ಕೆ ಒತ್ತಾಯವನ್ನು ಮಾಡಿದ್ದಾರೆ.ಯುಪಿಎಸ್ಸಿ,ರೈಲ್ವೆ,ಬ್ಯಾಂಕಿಂಗ್ ಸೇರಿದಂತೆ ಕೇಂದ್ರ ಸರಕಾರಿ ನೇಮಕಾತಿಗಳಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ದ ಹೋರಾಟ ಅನಿವಾರ್ಯ ಎಂದು ಸ್ವಾಮೀಜಿಗಳು ನುಡಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಪಾವರ್ತಿ ಕ.ರೆಡ್ಡಿ,ಜಿಲ್ಲಾಧ್ಯಕ್ಷ ಮೋಹನ್ ಕುಮಾರ್ ಪಟೇಲ್,ಪ್ರಧಾನಕಾರ್ಯದರ್ಶಿ ಕೆ.ಟಿ.ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷರುಗಳಾದ ಎಸ್.ಡಿ.ದಿಲೀಪ್, ಚಂದ್ರಮೌಳಿ,ಜಯರಾಂ,ಕೋಶಾಧ್ಯಕ್ಷರಾದ ಎಂ.ಬಿ.ಶೇಖರ್, ರಾಷ್ಟ್ರೀಯಯಸಮಿತಿ ಸದಸ್ಯರಾದ ರಾಜಶೇಖರ್, ಜಿಲ್ಲೆಯ ಎಲ್ಲಾ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ವೀರಶೈವ,ಲಿಂಗಾಯಿತ ಕ್ಷೇತ್ರಗಳ ಮುಖಂಡರು ಪಾಲ್ಗೊಂಡಿದ್ದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz