ತುಮಕೂರು:ನಮ್ಮ ಭಾರತೀಯ ಪರಂಪರೆಯಲ್ಲಿ ಯೋಗಾಸನಕ್ಕೆ ಸಾಕಷ್ಟು ಮಹತ್ವವಿದೆ. ಕಳೆದ 9 ವರ್ಷಗಳಿಂದ ಯೋಗ ಅಂತರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ ಎಂದು ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಸಿದ್ದಗಂಗಾ ಮಠದಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಮೂಲಕ ಯೋಗಾಸನವನ್ನು ಪ್ರಪಂಚಕ್ಕೆ ಪರಿಚಯಿಸಿ ಕೊಟ್ಟಂತಹ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.
ದೈಹಿಕ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡಿರುವಂತಹ ಮನುಷ್ಯ ಶ್ರೀಮಂತನಾಗಿರುತ್ತಾನೆ. ಪ್ರಸ್ತುತ ಸಮಾಜದಲ್ಲಿ ಹಣವಂತವರು ಆಸ್ತಿ ಇರುವವರು ಶ್ರೀಮಂತರಲ್ಲ ಬದಲಾಗಿ ಆರೋಗ್ಯವನ್ನು ಕಾಪಾಡಿಕೊಂಡಿರುವವರೇ ಶ್ರೀಮಂತನಾಗಿದ್ದಾನೆ ಎಂದು ತಿಳಿಸಿದರು.
ಆರೋಗ್ಯವೇ ಭಾಗ್ಯ ಎಂಬಂತಹ ನಾಣ್ಣುಡಿಯನ್ನು ಬಹು ಹಿಂದಿನಿಂದಲೂ ನಾವು ಕೇಳುತ್ತಿದ್ದೇವೆ. ಹೀಗಾಗಿ ಉತ್ತಮ ಆಚಾರ ವಿಚಾರ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡರೆ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯವಿದೆ ಎಂದು ಹೇಳಿದರು.
ಪ್ರತಿಯೊಬ್ಬರಿಗೂ ಆರೋಗ್ಯ ಬೇಕು, ಆದರೆ ಆರೋಗ್ಯ ಸೂತ್ರಗಳನ್ನು ಪಾಲನೆ ಮಾಡುತ್ತಿಲ್ಲ ಇದು ಹೇಗೆ ಸಾಧ್ಯವಿರುತ್ತದೆ ಆರೋಗ್ಯವಂತರಾಗಿರಲು, ಎಂದು ಹೇಳಿದ ಅವರು ಉತ್ತಮ ಆರೋಗ್ಯ ಜೀವನದಲ್ಲಿ ಯೋಗಾಸನ ಅತಿ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಅಲ್ಲದೆ ಕ್ರಮಬದ್ಧವಾಗಿ ಯೋಗಾಸನವನ್ನು ಮಾಡುವುದರಿಂದ ನಾವು ಬದುಕಿನಲ್ಲಿ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠ