
ಬಾವಿ ಕಪ್ಪೆ ಬಾವಿಯೊಳಗೆ
“ಇದೇ ಜಗ”ವೆಂದಿತಯ್ಯಾ
ಸಾಗರ ಕಂಡ ಮೊಸಳೆಯೂ
“ನನ್ನದೇ ಲೋಕ” ಎಂದಿತಯ್ಯಾ।
ಸಿಂಹ ತಾನು ಕಾಡಿನ ರಾಜ
ಎಂದು ಗರ್ವ ಪಟ್ಟಿತಯ್ಯಾ
ಸಣ್ಣ ಇಲಿಯ ಬಲೆಯೊಳಗೆ
ಬಿದ್ದು ಮೌನಗೊಂಡಿತಯ್ಯಾ।
ಓಟದ ಮೊಲ ಗೆಲುವು ತನ್ನದು
ಎಂದು ನಿದ್ರೆ ಹೊತ್ತಿತಯ್ಯಾ
ಛಲದ ಆಮೆ ಹೆಜ್ಜೆ ಬಿಡದೆ
ಗುರಿಯ ತಲುಪಿತಯ್ಯಾ।
ಅಜ್ಜಿ ತನ್ನ ಕೋಳಿಯ ಕೂಗೇ
ಜಗದ ಬೆಳಕು ಎಂದಳಯ್ಯಾ
ತನ್ನೆಲ್ಲ ಉರಿದು ಹಣತೆ ಮಾತ್ರ
ಇರುಳ ಕಳೆದು ನಿಂತಿತಯ್ಯಾ।
ಮೊಸಳೆ ಕುತಂತ್ರ ಮಾಡಿ
ಕೋತಿಯ ಹೃದಯ ಬೇಡಿತಯ್ಯಾ
ಬುದ್ಧಿಯ ಕೋತಿ ಮಾತಿನಲಿ
ತನ್ನ ಪ್ರಾಣ ಉಳಿಸಿತಯ್ಯಾ।
ಗೋವು ಮಾತು ಕೊಟ್ಟ ಬಳಿಕ
ಹುಲಿಯ ಮುಂದೆ ನಿಂತಿತಯ್ಯಾ
ಸತ್ಯದ ಶಕ್ತಿ ಕಂಡ ಹುಲಿ
ತನ್ನ ಹೃದಯ ಕರಗಿತಯ್ಯಾ।
ಮುಂಗುಸಿಯನು ಕೊಂದ ತಾಯಿ
ದುಡುಕಿ ಕಣ್ಣೀರು ಸುರಿತಯ್ಯಾ
ಮಗುವ ಕಾಯ್ದ ಹಾವಿನ ಶವ
ತೊಟ್ಟಿಲ ಬಳಿಯ ಕಂಡಿತಯ್ಯಾ।
“ನಾನೆ ಮೇಲು” ಎಂದ ಮನುಜ
ಭೂಮಿಯೆಲ್ಲ ಸುತ್ತಿತಯ್ಯಾ
ದೇವನಿಗಿಂತ ತಾನೇ ದೊಡ್ಡ
ಎಂದು ಅಹಂಕಾರ ಪಟ್ಟಿತಯ್ಯಾ।
ಧನ ಸಂಪತ್ತು ವಿದ್ಯೆ ಬಂದರೂ
ನೀತಿ ಮರೆತ ಮಾನವಯ್ಯಾ
ದೇವ ಕರುಣೆ ದೂರವಾದರೆ
ಬಾಳು ದುಃಖ ಸಾಗರಯ್ಯಾ।
ಗರ್ವದಿಂದ ತಲೆ ಎತ್ತಿದವನು
ಕ್ಷಣದಲ್ಲಿ ನೆಲ ಸೇರುವನು
ವಿನಯ ಧರ್ಮ ಹಿಡಿದ ಜೀವಿ
ಜಗದೊಳಗೆ ಬೆಳಗುವನು।
ಮೂರ್ಖನು ಯಾರು ಕೇಳಿದರೆ
ತನ್ನನು ತಾನೆ ಅರಿಯದವನು
ಜ್ಞಾನವಿದ್ದರೂ ದರ್ಪ ಹಿಡಿದು
ಸತ್ಯವ ಮರೆಯುವವನು॥
ಸಂಪಾದಕರ ಮನವಿ
“ಮೂರ್ಖರು ಯಾರು?” ಎಂಬ ವಿಶಿಷ್ಟ ಕವನದ ಮೂಲಕ ನವ ಕವಿ ವೇಣುಗೋಪಾಲ್ ತುಮಕೂರು ಅವರು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ಸರಳ ಪದಗಳಲ್ಲಿ ಗಾಢವಾದ ಜೀವನ ಸತ್ಯಗಳನ್ನು ಹೇಳುವ ಈ ಕವನವು ಓದುಗರ ಮನಸ್ಸಿಗೆ ತಟ್ಟುವ ಶಕ್ತಿಯನ್ನು ಹೊಂದಿದೆ.
ಹೊಸ ಕವಿಯಾಗಿ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿರುವ ವೇಣುಗೋಪಾಲ್ ರವರಿಗೆ ಕನ್ನಡಿಗರ ಪ್ರೋತ್ಸಾಹ, ಅಭಿಮಾನ ಮತ್ತು ಆಶೀರ್ವಾದ ಅತ್ಯಗತ್ಯವಾಗಿದೆ. ಜನಸಾಮಾನ್ಯರು ಈ ಕವನವನ್ನು ಓದಿ ತಮ್ಮ ಅನಿಸಿಕೆ, ಅಭಿಪ್ರಾಯ ಹಾಗೂ ಪ್ರೋತ್ಸಾಹದ ಮಾತುಗಳನ್ನು ಹಂಚಿಕೊಳ್ಳುವ ಮೂಲಕ ಪ್ರತಿಭಾವಂತ ಕವಿಗೆ ಬೆಂಬಲ ನೀಡಬೇಕು.
ಒಬ್ಬ ಹೊಸ ಸಾಹಿತ್ಯ ಪ್ರತಿಭೆ ಬೆಳೆಯುವುದು ಕೇವಲ ಅವರ ವೈಯಕ್ತಿಕ ಸಾಧನೆಯಲ್ಲ, ಕನ್ನಡ ಸಾಹಿತ್ಯದ ಬೆಳವಣಿಗೆಯೂ ಆಗಿದೆ. ಸಮಾಜಮುಖಿ ಚಿಂತನೆ ಹೊಂದಿರುವ ಇಂತಹ ಕವಿಗಳು ದೇಶಾದ್ಯಂತ ಗುರುತಿಸಿಕೊಂಡು ಬೆಳೆಯಲು ಎಲ್ಲರೂ ಕೈಜೋಡಿಸೋಣ.
ನವ ಕವಿ ವೇಣುಗೋಪಾಲ್ ತುಮಕೂರು ಅವರಿಗೆ ಇನ್ನಷ್ಟು ಉತ್ತಮ ಕೃತಿಗಳನ್ನು ರಚಿಸುವ ಶಕ್ತಿ ದೊರೆಯಲಿ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಲಿ ಎಂಬ ಹಾರೈಕೆಗಳು.
ಸಾಹಿತ್ಯಾಸಕ್ತರ ಪರವಾಗಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


