ಬಹಳ ಹಿಂದೆ ಒಂದು ಕಾಡಿನ ಕುಟೀರದಲ್ಲಿ ಬಾದರಾಯಣ ಎಂಬ ಗುರುವಿದ್ದರು. ಇವರಿಗೆ ನಾಲ್ವರು ಶಿಷ್ಯರು ಅನಿಕ, ಮನಿಕ, ಸುನಿಕ ಮತ್ತು ಮುನಕ ಎಂಬ ನಾಲ್ವರು. ಬಹಳ ಕಾಲದ ನಂತರ ಆ ಕಾಡಿಗೆ ಭೀಕರ ಬರಗಾಲ ಮತ್ತು ಕ್ಷಾಮ ತಲೆದೋರಿತು. ಅವರು ತಿನ್ನಲು ಕುಡಿಯಲು ಏನೂ ಸಿಗದಂತಾಯಿತು ಅನಿವಾರ್ಯವಾಗಿ ಕಾಡನ್ನು ತೊರೆಯಬೇಕಾದ ಪರಿಸ್ಥಿತಿ ಬಂದೊದಗಿತು. ಕೊನೆಗೆ ಗುರುಗಳು ನಾಲ್ವರು ಶಿಷ್ಯರನ್ನು ಉದ್ದೇಶಿಸಿ ನೋಡಿ ಶಿಷ್ಯರೆ ನಾವು ಪ್ರಯಾಣ ಮಾಡುವ ಮಾರ್ಗ ಮಧ್ಯೆ ದಣಿವಾದಾಗ ಕುಡಿಯಲು ನೀರಾದರೂ ಬೇಕಾಗುತ್ತದೆ, ನೀವುಗಳು ಹೇಗಾದರೂ ಮಾಡಿ ದೊನ್ನೆಗಳಲ್ಲಿ ನೀರನ್ನಾದರೂ ತನ್ನಿರಿ ಎಂದಾಗ ಶಿಷ್ಯರುಗಳು ಬಹಳ ಅಲೆದಾಡಿ ಕೇವಲ 4 ದೊನ್ನೆಗಳಲ್ಲಿ ಮಾತ್ರವೇ ನೀರು ದೊರಕಿತು ಅದನ್ನೇ ತಂದು ಗುರುಗಳಿಗೆ ತೋರಿಸಿ ಗುರುಗಳೇ ಈ 4 ದೊನ್ನೆಗಳ ನೀರು ಕೇವಲ ನಿಮಗಾಗಿ ಮಾತ್ರ ನಾವುಗಳು ದಣಿವನ್ನು ಹೇಗೋ ಸಂಭಾಳಿಸುತ್ತೇವೆ ಇನ್ನು ಹೊರಡೋಣವೇ ಗುರುಗಳೇ ಎಂದಾಗ ಗುರುಗಳು ಆಯಿತು ಎಂದು ಹೇಳಿ ಹೊರಟರು.
ಬಹಳ ದೂರ ನಡೆದರು ಎಲ್ಲರಿಗೂ ದಣಿವು ಶುರುವಾಯಿತು ಗುರುಗಳು ಹಿಂದೆಬರುತ್ತಿದ್ದ ಶಿಷ್ಯರನ್ನು ನೋಡಿ ನನಗೆ ತುಂಬಾ ದಣಿವಾದಾಗ ಮಾತ್ರ ನೀರು ಕೇಳುತ್ತೇನೆ ನೀವುಗಳು ಯಾರೂ ಕುಡಿಯಬಾರದು, ನಾನು ಕೇಳಿದಾಗ ಮಾತ್ರ ನನಗೆ ಕೊಡಬೇಕು ಎಂದಾಗ ಶಿಷ್ಯಂದಿರೆಲ್ಲಾ ಆಯಿತು ಗುರುಗಳೆ ಎಂದರು. ಎಷ್ಟು ದೂರ ನಡೆದರೂ ಗುರುಗಳು ನೀರನ್ನೇ ಕೇಳಲಿಲ್ಲ ಕೊನೆಗೆ ಅನಿಕನಿಗೆ ಬಹಳ ದಣಿವಾಗಿ ಇನ್ನು ದಣಿವು ತಡೆಯಲಾರೆ ನೀರು ಕುಡಿಯದಿದ್ದರೆ ಸತ್ತೇ ಹೋಗುತ್ತೇನೆ ಅನಿಸತೊಡಗಿತು. ಕೊನೆಗೆ ಗುರುಗಳು ಕೇಳಿದಾಗ ನೋಡೋಣ ಎಂದು ಯೋಚಿಸಿ ತನ್ನ ಕೈಲಿದ್ದ ದೊನ್ನೆಯ ನೀರನ್ನು ಕುಡಿದು ಸಮಾಧಾನಗೊಂಡನು. ಹೀಗೆಯೇ ಪ್ರಯಾಣ ಮುಂದುವರೆಯಿತು. ಮತ್ತಷ್ಟು ಮುಂದೆ ಬಂದರೂ ಗುರುಗಳು ನೀರು ಕೇಳಲೇ ಇಲ್ಲ ಮನಿಕನಿಗೆ ಅಧಿಕ ಧಣಿವಾಗಿ ಗುರುಗಳು ಕೇಳಿದಾಗ ನೋಡಿಕೊಳ್ಳೋಣ ಎಂದುಕೊಂಡು ಅವನೂ ತನ್ನ ಕೈಲಿದ್ದ ನೀರನ್ನು ಕುಡಿದು ಬಿಟ್ಟನು.
ಮತ್ತೆ ಪ್ರಯಾಣ ಮುಂದುವರೆಯಿತು ಗುರುಗಳು ನೀರು ಕೇಳಲೇ ಇಲ್ಲ ಕೊನಗೆ ಸುನಿಕನಿಗೂ ಬಹಳ ದಣಿವಾಗಿ ಗುರುಗಳು ಕೇಳಿದಾಗ ನೋಡಿಕೊಳ್ಳೋಣ ಎಂದುಕೊಳ್ಳುತ್ತಾ ಅವನ ಕೈಲಿದ್ದ ದೊನ್ನೆಯ ನೀರನ್ನು ಕುಡಿದು ಬಿಟ್ಟನು. ಹೀಗೆಯೇ ಪ್ರಯಾಣ ಮುಂದುವರೆದು ಕೊನಗೆ ಮುನಕನಿಗೆ ಸಾವೇ ಎದುರುಬಂದಂತೆ ದಣಿವಾಯಿತು. ಅವನೂ ಕೂಡ ಗುರುಗಳು ಕೇಳಿದಾಗ ನೋಡಿಕೊಳ್ಳೋಣ ಎಂದುಕೊಂಡು ತನ್ನ ಕೈಲಿದ್ದ ನೀರನ್ನು ಕುಡಿದುಬಿಟ್ಟನು. ಕೊನಗೆ ಬಹಳ ದೂರ ನಡೆದಾಗ ದೂರದಲ್ಲಿ ಒಂದು ಬಾವಿ ಕಾಣಿಸಿತು. ಮುಂದೆ ಹತ್ತಿರದಲ್ಲಿ ಒಂದು ಗ್ರಾಮವಿರಬೇಕು ಎಂದು ಎಲ್ಲರೂ ಹರ್ಷಿತರಾದರು ಮತ್ತು ಬಾವಿಯ ಬಳಿ ಹೋದರು ಅಲ್ಲಿ ರಾಟೆಗೆ ಒಂದು ಹಗ್ಗಹಾಕಿ ಒಂದು ಬಿಂದಿಗೆ ಹಗ್ಗಕ್ಕೆ ಕುಣಿಕೆ ಹಾಕಲಾಗಿತ್ತು. ನಂತರ ಗುರುಗಳು ನನಗೆ ತುಂಬಾ ದಣಿವಾಗಿದೆ ಮೊದಲು ನೀರು ಕೊಡಿ ಎಂದಾಗ ಶಿಷ್ಯರು ಬಾವಿಯಿಂದ ನೀರು ಸೇದಿ ಗುರುಗಳಿಗೆ ಕುಡಿಸಿದರು.
ನಂತರ ಶಿಷ್ಯರು ಅತ್ಯಂತ ಆಶ್ಚರ್ಯಚಕಿತರಾಗಿ ಗುರುಗಳೇ ನಾವು ನಿಮಗಾಗಿ ತಂದಿದ್ದ ನೀರನ್ನು ದಣಿವು ತಡೆಯಲಾಗದೇ ಮಾರ್ಗ ಮಧ್ಯೇ ನಾವುಗಳೇ ಕುಡಿದು ಬಿಟ್ಟೆವು ನೀವು ಇಲ್ಲಿಯವರೆಗೂ ನೀರನ್ನೇ ಕೇಳಲಿಲ್ಲ ಹೇಗೆ ದಣಿವನ್ನು ನಿವಾರಿಸಿಕೊಂಡಿರಿ ಎಂದಾಗ ಗುರುಗಳು ಶಂತಚಿತ್ತದಿಂದ ಹೀಗೆ ಹೇಳಿದರು ನಾವು ದೃಢ ಸಂಕಲ್ಪ ಮಾಡಿ ಗುರಿಮುಟ್ಟುವುದೊಂದೇ ನಮ್ಮ ಧ್ಯೇಯ ಮಾಡಿಕೊಂಡಾಗ ನಮ್ಮ ಇತರ ಸಮಸ್ಯಗಳು ಏನಿದ್ದರೂ ಎಲ್ಲವೂ ಗೌಣವಾಗುತ್ತವೆ, ನಾನು ಇದನ್ನೇ ಮಾಡಿದ್ದು ಆದರೆ ನೀವುಗಳು ಗುರಿಯ ಕಡೆ ಮುಖ ಮಾಡದೇ ಪ್ರಯಾಣದ ಕಡೆ ಮುಖ ಮಾಡಿದ್ದರಿಂದ ನಿಮಗೆ ಸಮಸ್ಯೆ ಯಾಯಿತು ನಾನು ನಿಮಗಾಗಿಯೇ ನೀರನ್ನು ತರಿಸಿದ್ದು ಆದ್ದರಿಂದಲೇ ನೀವು ನೀರು ಕುಡಿದು ಜೀವ ಉಳಿಸಿಕೊಂಡಿರಿ ಎಂದಾಗ ಶಿಷ್ಯರಿಂದೆಲ್ಲಾ ನಾಚಿ ತಲೆಬಾಗಿಸಿ ಗುರುಗಳಲ್ಲಿ ಕ್ಷಮೆ ಕೇಳಿ ಅಂದಿನಿಂದ ಏಕಾಗ್ರತೆ ಮತ್ತು ದೃಢ ಸಂಕಲ್ಪದಿಂದ ಸಾಧಿಸಿ ಗುರುಮೆಚ್ಚದ ಉತ್ತಮ ಶಿಷ್ಯಂದಿರಾದರು.

ಸಂಪಾದಕರ ಮಾತು:
ಇಂದಿನ “ಗುರು ಶಿಷ್ಯರು” ಕಥೆ ಜೀವನದ ಅತ್ಯಂತ ಮಹತ್ವದ ಸಂದೇಶವೊಂದನ್ನು ಮನಮುಟ್ಟುವ ರೀತಿಯಲ್ಲಿ ತಿಳಿಸುತ್ತದೆ. ಬದುಕಿನಲ್ಲಿ ಸಂಕಷ್ಟಗಳು, ದಣಿವು, ಕೊರತೆಗಳು ಬಂದಾಗ ಹಲವರು ಮಧ್ಯದಲ್ಲೇ ಮನಸ್ಸು ಬದಲಾಯಿಸಿ ಗುರಿಯನ್ನು ಮರೆತುಬಿಡುತ್ತಾರೆ. ಆದರೆ ದೃಢ ಸಂಕಲ್ಪ ಮತ್ತು ಏಕಾಗ್ರತೆ ಇದ್ದರೆ ಎಷ್ಟೇ ಕಷ್ಟ ಬಂದರೂ ಗುರಿಯನ್ನು ತಲುಪಬಹುದು ಎಂಬುದನ್ನು ಗುರು ಬಾದರಾಯಣರ ನಡೆ ಸ್ಪಷ್ಟವಾಗಿ ಸಾರುತ್ತದೆ. ಗುರುಗಳು ಶಿಷ್ಯರಿಗೆ ನೀರು ತರಲು ಹೇಳಿದರೂ, ಅದನ್ನು ತಮ್ಮಗಾಗಿ ಮಾತ್ರವಲ್ಲ ಶಿಷ್ಯರ ಜೀವ ಉಳಿಯಲೆಂದೇ ತರಿಸಿದ್ದರು ಎಂಬ ಅರ್ಥ ಕೊನೆಯಲ್ಲಿ ಬೆಳಕಿಗೆ ಬರುತ್ತದೆ. ನಿಜವಾದ ಗುರು ಎಂದರೆ ಕೇವಲ ಬೋಧನೆ ಮಾಡುವವನು ಅಲ್ಲ, ಶಿಷ್ಯರ ಒಳಿತಿಗಾಗಿ ದೂರದೃಷ್ಟಿಯಿಂದ ಯೋಚಿಸುವ ಮಾರ್ಗದರ್ಶಕ. ಇದೇ ವೇಳೆ ಶಿಷ್ಯರು ಮಾಡಿದ ತಪ್ಪು ಮಾನವ ಸಹಜ ದೌರ್ಬಲ್ಯವನ್ನು ಪ್ರತಿಬಿಂಬಿಸುತ್ತದೆ — ಗುರಿಗಿಂತ ತಾತ್ಕಾಲಿಕ ಕಷ್ಟಗಳಿಗೆ ಹೆಚ್ಚು ಮಹತ್ವ ಕೊಡುವುದು.
ಈ ಕಥೆ ವಿದ್ಯಾರ್ಥಿಗಳು, ಯುವಕರು ಹಾಗೂ ಪ್ರತಿಯೊಬ್ಬರ ಜೀವನಕ್ಕೂ ಅನ್ವಯಿಸುತ್ತದೆ. ಗುರಿಯತ್ತ ಮನಸ್ಸು ನೆಟ್ಟಾಗ ಸಣ್ಣ ಸಣ್ಣ ಅಡಚಣೆಗಳು ನಮ್ಮನ್ನು ತಡೆಯಲಾರವು. ಏಕಾಗ್ರತೆ, ಸಹನೆ ಮತ್ತು ಗುರುಗಳ ಮಾರ್ಗದರ್ಶನ ಇದ್ದರೆ ಸಾಧನೆ ನಿಶ್ಚಿತ ಎಂಬ ಸತ್ಯವನ್ನು ಈ ಕಥೆ ಸುಂದರವಾಗಿ ತಿಳಿಸುತ್ತದೆ.
— ಸಂಪಾದಕರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


