ಈಶ್ವರನು ಒಮ್ಮೆ ಭೂಲೋಕದಲ್ಲಿ ಕಷ್ಟದಲ್ಲಿರುವ ತನ್ನ ಭಕ್ತರಿಗೆ ಒಳ್ಳೆಯದು ಮಾಡಲೆಂದು ನಿರ್ಧರಿಸಿ ಒಂದು ನಾಯಿಯ ವೇಷ ಹಾಕಿಕೊಂಡು ಮೊದಲು ಒಂದು ಗುರುಕುಲಕ್ಕೆ ಹೋದನು. ಅಲ್ಲಿ ಗುರುಗಳು ಒಬ್ಬ ಶಿಷ್ಯನನ್ನು ನಿಲ್ಲಿಸಿ ನಿನಗೆ ಈ ಜನ್ಮದಲ್ಲಿ ವಿದ್ಯೆ ತಲೆಗೆ ಹತ್ತುವುದಿಲ್ಲ, ಬರೀ ಈಶ್ವರ ಭಜನೆ ಮಾಡುವುದರಲ್ಲೇ ಕಾಲ ಕಳೆಯುತ್ತಿರುವೆ ಏನು, ನಿನಗೆ ಈಶ್ವರ ಬಂದು ವಿದ್ಯ ಕಲಿಸುವನೇ ಎನ್ನುತ್ತಿದ್ದಂತೆ ಅಲ್ಲಿಗೆ ಬಂದಿದ್ದ ನಾಯಿ ವೇಷದ ಶಿವನು ಓಡಿಬಂದು ಆ ಶಿಷ್ಯನಿಗೆ ಬಂದು ಕಚ್ಚಿತು ಮತ್ತು ಅಲ್ಲಿಂದ ಯಾರ ಕೈಗೂ ಸಿಕ್ಕದೆ ಓಡಿ ಹೋಯಿತು.
ಎಲ್ಲರೂ ಗಾಬರಿಯಾಗುತ್ತಿದ್ದರೆ ಇತ್ತ ಶಿಷ್ಯನು ಇದ್ದಕ್ಕಿದ್ದಂತೆ ವೇದ ಉಪನಿಷತ್ತುಗಳನ್ನು ತಪ್ಪಿಲ್ಲದೆ ಜೋರಾಗಿ ಪಠಣ ಮಾಡಲು ಪ್ರಾರಂಭಿಸಿದನು. ಅವನಲ್ಲಿ ಆದ ಬದಲಾವಣೆಗೆ ಆ ನಾಯಿಯೇ ಕಾರಣವಿರಬಹುದು ಎಲ್ಲರೂ ಶಂಕಿಸಿದರು. ನಂತರ ನಾಯಿಯು ಒಬ್ಬ ಭಕ್ತ ಬಡವನ ಮನೆಗೆ ಹೋಯಿತು, ಅಲ್ಲಿ ಬಡವನು ಭಿಕ್ಷೆಯಲ್ಲಿ ಬಂದಿದ್ದ ಊಟವನ್ನು ಮನೆ ಮಂದಿ ಎಲ್ಲಾ ಹಂಚಿಕೊಂಡು ಇನ್ನೇನು ತಿನ್ನಬೇಕು ಅಷ್ಟರಲ್ಲಿ ಬಂದ ನಾಯಿಯನ್ನು ನೋಡಿ ಅಯ್ಯೋಪಾಪ ಹಸಿದಿರಬೇಕು ಎಂದು ಎಲ್ಲವನ್ನೂ ತಂದು ಆ ನಾಯಿಯ ಮುಂದೆ ಇಟ್ಟನು ತಕ್ಷಣವೇ ನಾಯಿಯು ಅವನನ್ನು ಕಚ್ಚಿ ಅಲ್ಲಿಂದ ಓಡಿ ಹೋಯಿತು ಎಲ್ಲರೂ ಮತ್ತೆ ಗಾಬರಿಯಾದರು, ಆದರೆ ನೋಡನೋಡುತ್ತಿದ್ದಂತೆ ಬಡವನ ಮನೆ ಮಹಲಾಯಿತು, ವಜ್ರ ವೈಡೂರ್ಯಗಳು ಬಂದವು. ಇದಕ್ಕೆ ಕಾರಣ ಆ ನಾಯಿ ಕಚ್ಚಿದ ಪರಿಣಾಮವಿರಬೇಕು ಎಂದು ಎಲ್ಲರೂ ಶಂಕಿಸಿದರು.
ಮತ್ತೆ ಆ ನಾಯಿಯು ಆನೆಗಳಿಂದ ಬೆಳೆ ಹಾನಿಯಾಗಿದ್ದ ಈಶ್ವರ ಭಕ್ತನೊಬ್ಬ ಹೊಲದಲ್ಲಿ ರೋದಿಸುತ್ತಿದ್ದನು ಓಡಿ ಹೋಗಿ ಅವನನ್ನೂ ಕಚ್ಚಿತು ಇದ್ದಕ್ಕಿದ್ದಂತೆ ಹಾನಿಯಾಗಿದ್ದ ಬೆಳೆಗಳೆಲ್ಲಾ ಮತ್ತೆ ಎದ್ದು ನಿಂತವು ಇದಕ್ಕೆ ಕಾರಣ ಆ ನಾಯಿ ಕಚ್ಚಿದ್ದರಿಂದ ಎಂದು ಎಲ್ಲರೂ ಶಂಕಿಸಿದರು. ಈ ವಿಚಾರಗಳೆಲ್ಲಾ ರಾಜ ಭಟರ ಮೂಲಕ ಆ ಊರಿನ ರಾಜನಿಗೆ ಹೋಯಿತು ಮತ್ತು ರಾಜ ಭಟರು ರಾಜನಿಗೆ ಪ್ರಭು ಪಕ್ಕದ ಊರಿನ ರಾಜನಿಗೂ ಆ ನಾಯಿ ಕಚ್ಚಿತಂತೆ ಇದರಿಂದ ಆ ರಾಜನಿಗೆ ಮತ್ತಷ್ಟು ಗ್ರಾಮಗಳನ್ನು ಅವನು ಯುದ್ಧದಲ್ಲಿ ಗೆದ್ದು ಬಂದನಂತೆ ಎಂದು ವರದಿ ನೀಡಿದರು.
ಇದನ್ನೆಲ್ಲಾ ಕೇಳಿದ ರಾಜನು ಹಾಗಾದರೆ ನಾನು ಆ ನಾಯಿಯನ್ನು ಹೇಗಾದರು ಮಾಡಿ ಹಿಡಿದು ಕಚ್ಚಿಸಿಕೊಳ್ಳಬೇಕು, ಆಗ ನಾನು ಈ ಊರನ್ನು ಮತ್ತಷ್ಟು ಯುದ್ಧಗಳನ್ನು ಮಾಡಿ ವಿಸ್ತರಿಸಬಹುದು ಎಂದು ಯೋಚಿಸಿ ರಾಜಭಟರಿಗೆ ಈ ಕೂಡಲೇ ಆ ನಾಯಿಯನ್ನು ಸೆರೆ ಹಿಡಿದು ತನ್ನಿ ಎಂದು ಆಜ್ಞಾಪಿಸಿದನು. ತಕ್ಷಣ ಹೊರಟ ಸೈನಿಕರು, ಕಷ್ಟಪಟ್ಟು ಹುಡುಕಿ ಹಿಡಿಯಲು ಹರ ಸಾಹಸ ಪಟ್ಟು ಕೊನೆಗೂ ಪಂಜರದಲ್ಲಿ ಬಂಧಿಸಿ ಅರಮನೆಗೆ ತಂದರು.
ರಾಜನು ಅದನ್ನು ಬಂಧಮುಕ್ತ ಮಾಡಿ ತನ್ನನ್ನೂ ಕಚ್ಚುವಂತೆ ಹೇಳಿದನು, ಕೂಡಲೇ ಮೇಲೆರಗಿದ ನಾಯಿಯು ಸಿಕ್ಕ ಸಿಕ್ಕ ಹಾಗೆ ರಾಜನನ್ನು ಕಚ್ಚಿಹಾಕಿ ಬಿಟ್ಟಿತು ಮತ್ತು ಮಾಯವಾಯಿತು ಕೂಡಲೇ ರಾಜನಿಗೆ ಮೈಯಲ್ಲಾ ಉರಿ ಊತ ಉಂಟಾಗಿ ಸಹಿಸಲಾಗದ ನೋವಿನಿಂದ ಚೀರಾಡತೊಡಗಿದನು ಅದೇ ಸಮಯಕ್ಕೆ ಸರಿಯಾಗಿ ಪಕ್ಕದ ಊರಿನ ರಾಜನು ಆಕ್ರಮಣ ನಡೆಸಿ ಆ ಊರನ್ನೂ ಗೆದ್ದು ಬಿಟ್ಟನು ಮತ್ತು ಈ ರಾಜನನ್ನು ಕಾಡಿಗಟ್ಟಿದನು. ರೋಗಗ್ರಸ್ಥನಾದ ರಾಜನು ನಡೆಯಲಾಗದೇ ನಡೆಯುತ್ತಾ ಕಾಡಿನ ಒಂದು ಋಷಿಯ ಆಶ್ರಮಕ್ಕೆ ಬಂದು ಸೇರಿದನು, ಋಷಿಗಳು ಅವನನ್ನು ಗುರುತಿಸಿ ಸತ್ಕರಿಸಿದರು. ನಂತರ ರಾಜನು ನಡೆದುದೆಲ್ಲಾ ವಿವರಿಸಿ ತನಗೇಕೆ ಹೀಗಾಯಿತು ಎಂದು ಋಷಿಗಳನ್ನು ಕೇಳಿದಾಗ ಋಷಿಗಳು ಹೇಳಿದರು, ಮೊದಲಿಗೇ ನೀನು ರಾಜನಾದ ಕಾರಣ ಗರ್ವದಿಂದ ದೇವರನ್ನು ಮರೆತದ್ದು, ಮತ್ತು ದುರಾಸೆಪಟ್ಟು ನಾಯಿಯಿಂದ ಕಚ್ಚಿಸಿಕೊಂಡು ರಾಜ್ಯ ಗೆಲ್ಲಲು ಹೊರಟಿದ್ದು ಎಂದು ಹೇಳಿ ಅದು ಸಾಧಾರಣ ನಾಯಿಯಲ್ಲ ನಾಯಿಯ ವೇಷದ ಶಿವ ಎಂದಾಗ ರಾಜನಿಗೆ ತನ್ನ ತಪ್ಪು ಅರಿವಾಗಿ ಅಂದಿನಿಂದ ಈಶ್ವರನ ಧ್ಯಾನ ಮಾಡುತ್ತಾ ತಾನು ಕಳೆದುಕೊಂಡಿದ್ದ ಎಲ್ಲವನ್ನು ಮತ್ತೆ ನಿಧಾನವಾಗಿ ಗಳಿಸಿದ.

ಸಂಪಾದಕರ ನುಡಿ:
“ಶಿವನ ವೇಷ” ಎಂಬ ಈ ಕಥೆ ಮಾನವ ಜೀವನದ ಆಳವಾದ ಸತ್ಯವನ್ನು ಸುಂದರವಾಗಿ ಮನದಟ್ಟುಗೊಳಿಸುತ್ತದೆ. ದೇವರು ನಮ್ಮ ಮುಂದೆ ಯಾವ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೋ ನಾವು ತಿಳಿಯಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಕಥೆ ಸ್ಪಷ್ಟವಾಗಿ ಹೇಳುತ್ತದೆ. ಭಕ್ತಿ, ನಿಸ್ವಾರ್ಥತೆ ಮತ್ತು ವಿನಯ ಇರುವವರ ಮೇಲೆ ದೈವಕೃಪೆ ಹೇಗೆ ಅನಾಯಾಸವಾಗಿ ಬೀಳುತ್ತದೆ ಎಂಬುದನ್ನು ಬಡವನ, ಶಿಷ್ಯನ ಹಾಗೂ ರೈತನ ಘಟನೆಗಳ ಮೂಲಕ ಲೇಖಕರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
ಇನ್ನೊಂದೆಡೆ, ಗರ್ವ ಮತ್ತು ದುರಾಸೆ ಮನುಷ್ಯನ ಪತನಕ್ಕೆ ಕಾರಣವಾಗುತ್ತವೆ ಎಂಬುದನ್ನು ರಾಜನ ಪಾತ್ರದ ಮೂಲಕ ತಿಳಿಸಲಾಗಿದೆ. ದೇವರನ್ನು ಉಪಯೋಗಿಸಿಕೊಳ್ಳುವ ಮನೋಭಾವವು ಅಪಾಯಕಾರಿಯಾಗಿದೆ; ದೇವರನ್ನು ಭಜಿಸಬೇಕಾದರೆ ನಿಷ್ಠೆಯಿಂದ, ಸ್ವಾರ್ಥವಿಲ್ಲದೆ ಭಜಿಸಬೇಕು ಎಂಬುದು ಈ ಕಥೆಯ ಮುಖ್ಯ ಸಾರಾಂಶ.
ಸರಳ ಭಾಷೆಯಲ್ಲಿ ಗಂಭೀರ ಅರ್ಥವನ್ನು ಒಳಗೊಂಡಿರುವ ಈ ಕಥೆ ಓದುಗರಿಗೆ ನೈತಿಕ ಮೌಲ್ಯಗಳನ್ನು ನೆನಪಿಸುತ್ತದೆ. ನಮ್ಮ ಬದುಕಿನಲ್ಲಿ ನಡೆಯುವ ಘಟನೆಗಳ ಹಿಂದೆ ದೈವ ಇಚ್ಛೆ ಇರಬಹುದು ಎಂಬ ನಂಬಿಕೆಯನ್ನು ಬಲಪಡಿಸುವ ಜೊತೆಗೆ, ಸದ್ಗುಣಗಳನ್ನು ಬೆಳೆಸಿಕೊಳ್ಳುವ ಅಗತ್ಯವನ್ನು ಮನದಟ್ಟು ಮಾಡುತ್ತದೆ.
— ಸಂಪಾದಕರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


