ಶಿರಾ: ಅಪಘಾತ ಅಥವಾ ತುರ್ತು ಆರೋಗ್ಯ ಸಮಸ್ಯೆ ಎದುರಾದಾಗ ವೈದ್ಯರು ಸಿಗುವ ಮೊದಲೇ ಸ್ಥಳೀಯರೇ ಅಥವಾ ಮನೆಯವರೇ ಅರೆಕಾಲಿಕ ವೈದ್ಯರಾಗಿ ಜೀವ ಉಳಿಸುವ ಮಹತ್ವದ ‘ತಾಯಿ’ (TAI — Tamil Nadu Accident Emergency Initiative) ಯೋಜನೆ ಈಗ ತುಮಕೂರು ಜಿಲ್ಲೆಯಲ್ಲಿ ಸದ್ದಿಲ್ಲದೆ ಜಾರಿಯಾಗುತ್ತಿದೆ. ಹೆಸರಾಂತ ವೈದ್ಯ ಡಾ. ಎಂ.ಆರ್. ಹುಲಿನಾಯ್ಕರ್ ಅವರ ನೇತೃತ್ವದಲ್ಲಿ ಈ ವಿಶಿಷ್ಟ ಆರೋಗ್ಯ ತರಬೇತಿ ಕಾರ್ಯಕ್ರಮಕ್ಕೆ ಶಿರಾದಲ್ಲಿ ಚಾಲನೆ ನೀಡಲಾಗಿದೆ.
ತಮಿಳುನಾಡಿನಲ್ಲಿ ಯಶಸ್ವಿಯಾಗಿರುವ ಈ ಮಾದರಿಯನ್ನು ಈಗ ತುಮಕೂರು ಜಿಲ್ಲೆಗೆ ಪರಿಚಯಿಸಲಾಗುತ್ತಿದೆ. ಶಿರಾದ ತಾಯಿ–ಮಗು ಆರೈಕೆ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯೋಜನೆಯ ಉಸ್ತುವಾರಿ ಡಾ. ರಾಮ್ ಕೆ. ನಾಯರ್ ಪ್ರಾಸ್ತಾವಿಕವಾಗಿ ಮಾತನಾಡಿದರು. “ಆಸ್ಪತ್ರೆಗೆ ತಲುಪುವ ಮೊದಲಿನ ‘ಗೋಲ್ಡನ್ ಅವರ್’ (Golden Hour) ಅತ್ಯಂತ ನಿರ್ಣಾಯಕ. ಈ ಸಮಯದಲ್ಲಿ ಸ್ಥಳೀಯರು ಸೂಕ್ತ ತರಬೇತಿ ಪಡೆದಿದ್ದರೆ ಸಾವು-ನೋವಿನ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು,” ಎಂದು ಅವರು ತಿಳಿಸಿದರು.
ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕನಿಷ್ಠ 500 ಜನರಿಗೆ ತುರ್ತು ಚಿಕಿತ್ಸಾ ತರಬೇತಿ ನೀಡುವ ಗುರಿ ಹೊಂದಲಾಗಿದೆ. ವಿಡಿಯೋ, ಆಡಿಯೋ, ಚಿತ್ರಗಳು ಹಾಗೂ ಗೊಂಬೆಗಳ (Mannequins) ಮೂಲಕ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ.
ಶ್ರೀದೇವಿ ಆಸ್ಪತ್ರೆಯ 20 ನುರಿತ ವೈದ್ಯರು, 20 ಶುಶ್ರೂಷಕರು ಮತ್ತು 10 ಆರೋಗ್ಯ ಕಾರ್ಯಕರ್ತರನ್ನೊಳಗೊಂಡ 50 ಜನರ ತಂಡ ಈ ಜಾಗೃತಿ ಮೂಡಿಸಲಿದೆ. ಹೃದಯಾಘಾತ, ರಸ್ತೆ ಅಪಘಾತ, ಹಾವು ಕಡಿತ, ಪಾರ್ಶ್ವವಾಯು, ನೀರಿನಲ್ಲಿ ಮುಳುಗುವುದು, ಮರದಿಂದ ಬೀಳುವುದು ಹಾಗೂ ತೀವ್ರ ರಕ್ತಸ್ರಾವದಂತಹ ತುರ್ತು ಪರಿಸ್ಥಿತಿಗಳು.
ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಅತಿ ಹೆಚ್ಚು ಪ್ರಾಣಹಾನಿ ಸಂಭವಿಸುವ ರಾಜ್ಯಗಳಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಬೆಂಗಳೂರಿನ ನಿಮ್ಹಾನ್ಸ್ ಅಥವಾ ಜಯದೇವ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ಯಲು ಹೆಚ್ಚಿನ ಸಮಯ ಹಿಡಿಯುವುದರಿಂದ, ತುಮಕೂರಿನಲ್ಲಿಯೇ ಸುಸಜ್ಜಿತ ‘ಟ್ರಾಮಾ ಕೇಂದ್ರ’ ಸ್ಥಾಪಿಸುವ ಉದ್ದೇಶವನ್ನು ಡಾ. ಎಂ.ಆರ್. ಹುಲಿನಾಯ್ಕರ್ ಹೊಂದಿದ್ದಾರೆ ಎಂದು ಡಾ. ರಾಮ್ ಕೆ. ನಾಯರ್ ವಿವರಿಸಿದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್. ಗೌಡ ಮಾತನಾಡಿ, “ಶಿರಾದಲ್ಲಿ ಆರಂಭವಾಗಿರುವ ಈ ಅಭಿಯಾನವು ಮುಂದಿನ ತಿಂಗಳು ಮಧುಗಿರಿಯಲ್ಲಿ ಹಾಗೂ ತದನಂತರ ಜಿಲ್ಲೆಯ ಉಳಿದ ಎಂಟು ತಾಲೂಕುಗಳಲ್ಲಿಯೂ ನಡೆಯಲಿದೆ,” ಎಂದರು. ಹೃದಯಾಘಾತವಾದ ಮೊದಲ ಅರ್ಧ ಗಂಟೆಯೊಳಗೆ ಚಿಕಿತ್ಸೆ ಸಿಗದಿದ್ದರೆ ಹೃದಯದ ರಕ್ತನಾಳಗಳಿಗೆ ಶಾಶ್ವತ ಹಾನಿಯಾಗುವ ಸಂಭವವಿರುತ್ತದೆ ಎಂದು ಅವರು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್. ಪಾಟೀಲ್ ವಹಿಸಿದ್ದರು. ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಈ ‘ತಾಯಿ’ ಯೋಜನೆ ಜಿಲ್ಲೆಯಾದ್ಯಂತ ಭರವಸೆಯ ಕಿರಣವಾಗಿ ಮೂಡಿಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


