ಬೆಂಗಳೂರು: ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಹಾಗೂ ಕೆಲಸದ ಒತ್ತಡ ಇಳಿಸಲು ಒತ್ತಾಯಿಸಿ ಲಕ್ಷಾಂತರ ಅಂಗನವಾಡಿ (ಐಸಿಡಿಎಸ್) ಮತ್ತು ಬಿಸಿಯೂಟ (ಅಕ್ಷರ ದಾಸೋಹ) ನೌಕರರು ಇಂದು ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗಾಗಿ ‘ಕರಾಳ ದಿನಾಚರಣೆ’ಯ ಭಾಗವಾಗಿ ಬೃಹತ್ ಮುಷ್ಕರ ಮತ್ತು ಧರಣಿ ನಡೆಸಿದರು.
ಸರ್ಕಾರಗಳ ನಿರಂತರ ನಿರ್ಲಕ್ಷ್ಯ ಮತ್ತು ಶೋಷಣೆಯ ವಿರುದ್ಧ ಆಕ್ರೋಶ ಹೊರಹಾಕಿದ ಸಾವಿರಾರು ನೌಕರರು, ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆಗೆ ಧುಮುಕಿದರು. ನಗರದ ಟೌನ್ ಹಾಲ್ನಿಂದ ಬೃಹತ್ ಮೆರವಣಿಗೆಯ ಮೂಲಕ ಸಾಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಂದು ಧರಣಿ ಕುಳಿತರು.
ಅಂಗನವಾಡಿ ನೌಕರರ ಹಕ್ಕೋತ್ತಾಯಗಳು:
NEP 2020 ವಿರೋಧ: ರಾಷ್ಟ್ರೀಯ ಶಿಕ್ಷಣ ನೀತಿ 2020 ಮತ್ತು ಅನುದಾನ ಕಡಿತದಿಂದಾಗಿ ಅಂಗನವಾಡಿ ವ್ಯವಸ್ಥೆ ಕುಸಿಯುತ್ತಿದೆ. 3–6 ವರ್ಷದ ಮಕ್ಕಳನ್ನು ಅಂಗನವಾಡಿಗಳಿಂದ ದೂರವಿಟ್ಟು ಶಾಲೆಗಳಲ್ಲಿ ಎಲ್ ಕೆಜಿ–ಯುಕೆಜಿ ಆರಂಭಿಸುವುದನ್ನು ನೌಕರರು ತೀವ್ರವಾಗಿ ವಿರೋಧಿಸಿದರು. ಬದಲಿಗೆ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲೇ ಎಲ್ ಕೆಜಿ–ಯುಕೆಜಿ ವಿಸ್ತರಣೆ ಮಾಡಿ ಸಮವಸ್ತ್ರ, ಪುಸ್ತಕ ಹಾಗೂ ಆಟಿಕೆಗಳನ್ನು ಒದಗಿಸಬೇಕು ಮತ್ತು ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಬೇಕು.
ವೇತನ ಮತ್ತು ಪಿಂಚಣಿ ಹೆಚ್ಚಳ: ರಾಜ್ಯ ಸರ್ಕಾರದ ಚುನಾವಣಾ ಭರವಸೆಯಂತೆ ಕಾರ್ಯಕರ್ತೆಯರಿಗೆ ₹15,000 ಹಾಗೂ ಸಹಾಯಕಿಯರಿಗೆ ₹10,000 ಗೌರವಧನ ನೀಡಬೇಕು. ಅಲ್ಲದೆ, 45ನೇ ಕಾರ್ಮಿಕ ಸಮ್ಮೇಳನದ ಶಿಫಾರಸಿನಂತೆ ಕನಿಷ್ಠ ವೇತನವಾಗಿ ಕಾರ್ಯಕರ್ತೆಗೆ ₹41,000, ಸಹಾಯಕಿಗೆ ₹35,000 ಮತ್ತು ₹18,000 ಮಾಸಿಕ ಪಿಂಚಣಿ ಜಾರಿಗೊಳಿಸಬೇಕು.
ಡಿಜಿಟಲ್ ಕಿರುಕುಳಕ್ಕೆ ಬ್ರೇಕ್: ಪೋಷಣ್ ಟ್ರ್ಯಾಕರ್ ಮತ್ತು ಇ-ಕೆವೈಸಿ ಮೂಲಕ ನೀಡಲಾಗುತ್ತಿರುವ ಕಿರುಕುಳವನ್ನು ನಿಲ್ಲಿಸಬೇಕು. ಡಿಜಿಟಲ್ ಕೆಲಸಗಳಿಗಾಗಿ ಸೂಕ್ತ ಟ್ಯಾಬ್ಲೆಟ್ ಮತ್ತು ಉಚಿತ ಡೇಟಾ ಪ್ಯಾಕ್ ಒದಗಿಸಬೇಕು.
ಇಲಾಖೇತರ ಕೆಲಸಗಳಿಂದ ಮುಕ್ತಿ: ಬಿ.ಎಲ್.ಓ (BLO) ಸೇರಿದಂತೆ ಇಲಾಖೇತರ ಯಾವುದೇ ಕೆಲಸಗಳಿಂದ ನೌಕರರನ್ನು ಮುಕ್ತಗೊಳಿಸಬೇಕು.
ಮೂಲಸೌಕರ್ಯ ಹಾಗೂ ಬಡ್ತಿ: ಕೇಂದ್ರಗಳಿಗೆ ಕುಡಿಯುವ ನೀರು, ಅನಿಲ ಸಂಪರ್ಕ ಒದಗಿಸಬೇಕು. ಬಾಡಿಗೆ ಕಟ್ಟಡಗಳಿಗೆ ಮಾರುಕಟ್ಟೆ ದರದಂತೆ (ಮಹಾನಗರ ₹15,000; ನಗರ ₹10,000; ಗ್ರಾಮ ₹5,000) ಬಾಡಿಗೆ ನೀಡಬೇಕು. ಅಂಗನವಾಡಿ ನೌಕರರನ್ನು ಕಾರ್ಮಿಕ ಕಾನೂನಿನ ವ್ಯಾಪ್ತಿಗೆ ತರಬೇಕು ಮತ್ತು ಬಡ್ತಿ ಮೂಲಕ ಮೇಲ್ವಿಚಾರಕ, ಎಎನ್ಎಂ, ಶಿಕ್ಷಕ ಹಾಗೂ ಗ್ರಾಮಸೇವಕ ಹುದ್ದೆಗಳಲ್ಲಿ ಮೀಸಲಾತಿ ನೀಡಬೇಕು.
ಬಿಸಿಯೂಟ ನೌಕರರ ಬೇಡಿಕೆಗಳು:
ವೇತನ ಭದ್ರತೆ: 25 ವರ್ಷಗಳ ಇತಿಹಾಸವಿರುವ ಅಕ್ಷರ ದಾಸೋಹ ಯೋಜನೆಯು ಬೆಲೆಯೇರಿಕೆ ಮತ್ತು ಅನುದಾನದ ಅಭಾವದಿಂದ ಬಲಹೀನಗೊಳ್ಳುತ್ತಿದೆ. 2008 ರಿಂದ ಸಮರ್ಪಕ ವೇತನ ಹೆಚ್ಚಳ ಮಾಡದೆ ಬಡ ಮಹಿಳಾ ನೌಕರರು ಶೋಷಣೆಗೆ ಒಳಗಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಆಶ್ವಾಸನೆಯಂತೆ ₹7,000 ವೇತನ ಹೆಚ್ಚಳ, 6 ಗಂಟೆ ಕೆಲಸದ ಅವಧಿ, ಆರೋಗ್ಯ ವಿಮೆ ಮತ್ತು ₹10,000 ಮಾಸಿಕ ಪಿಂಚಣಿ ಜಾರಿಗೊಳಿಸಬೇಕು.
ಖಾಸಗೀಕರಣಕ್ಕೆ ವಿರೋಧ: ಇಸ್ಕಾನ್ ಅಥವಾ ಇತರೆ ಮಠಗಳಿಗೆ ಬಿಸಿಯೂಟದ ಜವಾಬ್ದಾರಿ ವರ್ಗಾಯಿಸುವ ಪ್ರಸ್ತಾಪವನ್ನು ಕೈಬಿಟ್ಟು ಕೆಲಸದ ಭದ್ರತೆ ನೀಡಬೇಕು.
ಸುರಕ್ಷತೆ ಮತ್ತು ಪರಿಹಾರ: ಪ್ರತಿ ಶಾಲೆಯಲ್ಲಿ ಸುಸಜ್ಜಿತ ಅಡುಗೆ ಕೇಂದ್ರ ಮತ್ತು ಕೀಟಮುಕ್ತ ವಾತಾವರಣ ನಿರ್ಮಿಸಬೇಕು. ಕೆಲಸದ ಸ್ಥಳದಲ್ಲಿ ಮರಣ ಸಂಭವಿಸಿದರೆ ₹25 ಲಕ್ಷ ಪರಿಹಾರ ನೀಡಬೇಕು. ಉತ್ತರ ಪ್ರದೇಶ ಮತ್ತು ಪಂಜಾಬ್ ಹೈಕೋರ್ಟ್ ತೀರ್ಪಿನಂತೆ 12 ತಿಂಗಳ ಕೆಲಸ ಹಾಗೂ ಕನಿಷ್ಠ ಕೂಲಿ ಒದಗಿಸಬೇಕು. ಅಪಘಾತ/ನಿವೃತ್ತ ಸಿಬ್ಬಂದಿಯ ಕುಟುಂಬದವರಿಗೆ ಅನುಕಂಪದ ಆಧಾರದಲ್ಲಿ ಕೆಲಸ ನೀಡಬೇಕು.
ಜಾತಿ ತಾರತಮ್ಯಕ್ಕೆ ಖಂಡನೆ: ಜಾತಿ ಆಧಾರದ ಮೇಲೆ ಬಿಸಿಯೂಟ ನೌಕರರನ್ನು ಕೆಲಸದಿಂದ ವಜಾ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಜಿ. ಕಮಲ, ಪ್ರಧಾನ ಕಾರ್ಯದರ್ಶಿ ಗುಲ್ಜಾರ್ ಬಾನು, ಖಜಾಂಚಿ ಅನಸೂಯ ಹಾಗೂ ಅಕ್ಷರ ದಾಸೋಹ ನೌಕರ ಸಂಘದ ನಾಗರತ್ನಮ್ಮ, ಗಿರಿಜಾ ಮತ್ತು ಸಿಐಟಿಯು ಜಿಲ್ಲಾ ಅಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿದರು.
ಮನವಿ ಸ್ವೀಕರಿಸಲು ಬಂದ ಜಿಲ್ಲಾಧಿಕಾರಿ ಶುಭ ಕಲ್ಯಾಣ ಅವರಿಗೆ ನೌಕರರು ಬಿ.ಎಲ್.ಓ ಕೆಲಸಗಳಲ್ಲಿ ನಿತ್ಯ ಅನುಭವಿಸುತ್ತಿರುವ ಕಷ್ಟಗಳನ್ನು ವಿವರಿಸಿದರು. “ಉತ್ತಮ ಮೊಬೈಲ್ ಇಲ್ಲ, ನೆಟ್ವರ್ಕ್ ಸಮಸ್ಯೆಯಿದೆ. ಕಡಿಮೆ ಸಂಬಳದ ನಡುವೆಯೂ ಮೊಬೈಲ್ ರೀಚಾರ್ಜ್ಗೆ ಯಾವುದೇ ಭತ್ಯೆ ಸಿಗುತ್ತಿಲ್ಲ, ನಾವೇ ಕೈಯಿಂದ ಹಣ ಹಾಕಬೇಕಾಗಿದೆ,” ಎಂದು ಅಳಲು ತೋಡಿಕೊಂಡರು. ಜೊತೆಗೆ ನೌಕರರ ಸಮಸ್ಯೆಗಳ ಚರ್ಚೆಗೆ ಜಿಲ್ಲಾ ಮಟ್ಟದಲ್ಲಿ ವಿಶೇಷ ಸಭೆ ಕರೆಯುವಂತೆ ಒತ್ತಾಯಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಡಾ. ಸಿದ್ದರಾಮಯ್ಯ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿ ಸುಧಾಕರ್ ಅವರು ಪ್ರತಿಭಟನಾಕಾರರಿಂದ ಜಂಟಿಯಾಗಿ ಮನವಿ ಪತ್ರ ಸ್ವೀಕರಿಸಿದರು.
ಈ ಬೃಹತ್ ಪ್ರತಿಭಟನೆಯಲ್ಲಿ ನಾಯಕರಾದ ಗೌರಮ್ಮ, ಜಬಿನಾ, ವನಜಾಕ್ಷಿ, ಆದಿಲಕ್ಷ್ಮಿ, ಶಿವಗಂಗಮ್ಮ, ಪಾರ್ವತಮ್ಮ, ಯಶೋಧಮ್ಮ, ಹಾಲಮ್ಮ, ಪ್ರೇಮಾ, ಇಂದ್ರಮ್ಮ, ಸೌಭಾಗ್ಯ, ಲೀಲಾ, ಮಮತಾ, ಭಾರತಿ, ಭಾಗ್ಯ, ಹಾಗೂ ಬಿಸಿಯೂಟ ಸಂಘದ ಮಂಜುಳ, ಮಂಜಮ್ಮ ಸೇರಿದಂತೆ ಸಾವಿರಾರು ಮಹಿಳಾ ಕಾರ್ಮಿಕರು ಪಾಲ್ಗೊಂಡು ಧ್ವನಿ ಎತ್ತಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


