ಸರಗೂರು: ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹಮ್ಮಿಕೊಳ್ಳಲಾಗಿರುವ ‘ಜನಾಗ್ರಹ ಸಮಾವೇಶ’ದಲ್ಲಿ ಭಾಗವಹಿಸಲು ಸರಗೂರು ತಾಲ್ಲೂಕಿನಿಂದ ದಲಿತ ಸಂಘರ್ಷ ಸಮಿತಿ (ದಸಂಸ-ಅಂಬೇಡ್ಕರ್ವಾದ) ವತಿಯಿಂದ 200ಕ್ಕೂ ಹೆಚ್ಚು ಕಾರ್ಯಕರ್ತರು ಶುಕ್ರವಾರ ಪ್ರಯಾಣ ಬೆಳೆಸಿದರು.
ಪ್ರಯಾಣದ ಆರಂಭಕ್ಕೂ ಮುನ್ನ ತಾಲ್ಲೂಕಿನ ಹೈರಿಗೆ ಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಬಳಿಕ ಕಾರ್ಯಕ್ರಮಕ್ಕೆ ಅಧಿಕರ್ನಾಟಕ ಮಹಾಸಭಾದ ಎಚ್.ಡಿ. ಶಿವರಾಜು ಅವರು ಹಸಿರು ನಿಶಾನೆ ತೋರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಎಚ್.ಡಿ. ಶಿವರಾಜು ಅವರು, “ದಲಿತ ಸಮುದಾಯದ ಏಳಿಗೆ ಮತ್ತು ಹಕ್ಕುಗಳಿಗಾಗಿ ದಸಂಸ ನಿರಂತರವಾಗಿ ಶ್ರಮಿಸುತ್ತಾ ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಅದರಂತೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಜನಾಗ್ರಹ ಸಮಾವೇಶವು ಯಶಸ್ವಿಯಾಗಲಿ ಮತ್ತು ಸಮುದಾಯಕ್ಕೆ ಅನುಕೂಲ ಕಲ್ಪಿಸುವಂತಾಗಲಿ” ಎಂದು ಹಾರೈಸಿದರು.
ತಾಲ್ಲೂಕು ದಸಂಸ (ಅಂಬೇಡ್ಕರ್ವಾದ) ಸಮಿತಿ ಸಂಚಾಲಕರಾದ ಕೂಡಗಿ ಗೋವಿಂದರಾಜು ಮಾತನಾಡಿ, “ಈ ಮಹತ್ವದ ಸಮಾವೇಶದಲ್ಲಿ ಭಾಗವಹಿಸಲು ನಮ್ಮ ತಾಲ್ಲೂಕಿನಿಂದ ಎರಡು ಬಸ್ಗಳ ಮೂಲಕ 200ಕ್ಕೂ ಹೆಚ್ಚು ಜನರು ತೆರಳುತ್ತಿದ್ದೇವೆ. ವಿಶೇಷವಾಗಿ ಕಾಡಂಚಿನ ಭಾಗದಲ್ಲಿರುವ ಹಾಡಿಗಳು ಹಾಗೂ ಗ್ರಾಮಗಳಿಂದ ಜಮೀನು ಮತ್ತು ವಸತಿ ವಂಚಿತರಾಗಿ ನೊಂದಿರುವ ಕುಟುಂಬಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿವೆ” ಎಂದು ಮಾಹಿತಿ ನೀಡಿದರು.
“ದಲಿತ ಸಮುದಾಯಗಳ ಭೂಮಿ ಮತ್ತು ವಸತಿ ಹಕ್ಕುಗಳಿಗಾಗಿ ನಾವು ತಾಲ್ಲೂಕು ತಹಶೀಲ್ದಾರ್ ಕಚೇರಿ ಮುಂಭಾಗ ನಿರಂತರವಾಗಿ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆಯನ್ನು ನಮ್ಮ ರಾಜ್ಯ ಸಂಘಟನೆಯ ಪ್ರಧಾನ ಸಂಚಾಲಕರ ಗಮನಕ್ಕೆ ತರಲಾಗಿದೆ. ಈ ಸಮಾವೇಶದ ಮೂಲಕ ಹಿಂದುಳಿದ ವರ್ಗಗಳ ಹಾಗೂ ದಲಿತ ಸಮುದಾಯಗಳಿಗೆ ಭೂಮಿ ಸಿಗಲಿದೆ ಎಂಬ ಭರವಸೆ ನಮಗಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಸಂಸ ಅಂಬೇಡ್ಕರ್ ವಾದ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ದೊಡ್ಡಸಿದ್ದು, ತಾಲ್ಲೂಕು ಸಂಘಟನಾ ಸಂಚಾಲಕರಾದ ಹಾದನೂರು ಚಂದ್ರ, ಕೂಲ್ಯ ಮಹದೇವಸ್ವಾಮಿ, ಕುರ್ಣೇಗಾಲ ಕೃಷ್ಣ, ಚಂಗೌಡನಹಳ್ಳಿ ಶಿವರಾಜು, ಶಿವಕುಮಾರ್, ಮಹಿಳಾ ಘಟಕದ ಸಂಚಾಲಕಿ ಸೀರಮ್ಮ, ರೂಪಾ, ನಾಗಮಲ್ಲಿಗಮ್ಮ, ಸಪ್ನಾ, ಕುಮಾರ್, ಕೆಂಪರಾಜು ಸೇರಿದಂತೆ ಸಮುದಾಯದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


