ಔರಾದ್: ಗಡಿ ಪ್ರದೇಶಗಳಲ್ಲಿ ಕಳ್ಳಸಾಗಣೆ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳ ನಿಯಂತ್ರಣ ಮತ್ತು ಗಡಿ ಭದ್ರತೆಯನ್ನು ಬಲಪಡಿಸಲು ನೆರೆಯ ರಾಜ್ಯಗಳ ಪೊಲೀಸ್ ಅಧಿಕಾರಿಗಳೊಂದಿಗಿನ ಸಮನ್ವಯ ಸಭೆಗಳು ಹೆಚ್ಚು ನೆರವಾಗುತ್ತವೆ ಎಂದು ಭಾಲ್ಕಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಜ್ಯ ಗಡಿ ಅಪರಾಧ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು. ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಮತ್ತು ಕುಖ್ಯಾತ ಅಪರಾಧಿಗಳನ್ನು ಪತ್ತೆಹಚ್ಚಲು ಅಂತಾರಾಜ್ಯ ಪೊಲೀಸ್ ಅಧಿಕಾರಿಗಳು ಪರಸ್ಪರ ಕೈಜೋಡಿಸಿದರೆ ಕಠಿಣ ಪ್ರಕರಣಗಳನ್ನು ಸುಲಭವಾಗಿ ಬೇಧಿಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸಭೆಯ ನಿರ್ಧಾರಗಳು:
ಮಾಹಿತಿ ವಿನಿಮಯ: ಅಪರಾಧಿಗಳ ಕುರಿತಾದ ಪ್ರಮುಖ ಮಾಹಿತಿಯನ್ನು ರಾಜ್ಯಗಳ ನಡುವೆ ಹಂಚಿಕೊಳ್ಳುವುದು.
ಜಂಟಿ ಗಸ್ತು: ಗಡಿ ಭದ್ರತೆಯನ್ನು ಹೆಚ್ಚಿಸಲು ಗಡಿ ಭಾಗಗಳಲ್ಲಿ ಪೊಲೀಸ್ ಗಸ್ತು ವ್ಯವಸ್ಥೆಯನ್ನು ಬಲಪಡಿಸುವುದು.
ಉತ್ತಮ ಸಮನ್ವಯತೆ: ಗಡಿ ಭಾಗದ ಪೊಲೀಸ್ ಠಾಣೆಗಳ ನಡುವೆ ನಿರಂತರ ಸಂಪರ್ಕ ಸಾಧಿಸಿ, ತನಿಖಾ ಪ್ರಕ್ರಿಯೆಯನ್ನು ಸುಲಭಗೊಳಿಸುವುದು.
ಕಾನೂನು ಸುವ್ಯವಸ್ಥೆ: ಕಳ್ಳಸಾಗಾಣಿಕೆ ತಡೆದು ಗಡಿ ಪ್ರದೇಶಗಳಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವುದು.
ಇದೇ ವೇಳೆ ಮಾತನಾಡಿದ ಹುಮನಾಬಾದ್ ಡಿವೈಎಸ್ಪಿ ಮಡೋಳಪ್ಪ, ಮಹಾರಾಷ್ಟ್ರದ ಉದಗೀರ ಪೊಲೀಸ್ ಇನ್ಸ್ಪೆಕ್ಟರ್ ಗಜಾನನ ಬಲಹತ್ವಂಡೆ (ಜಗಾನಂದ ಬಟವಾಡೆ), ನಿಲಂಗಾ ಡಿವೈಎಸ್ಪಿ ವಿಶಾಲ ಧೂಮೆ, ದೇಗಲೂರ ಡಿವೈಎಸ್ಪಿ ಕಿರಣ ಪೋಪಲಘಾಟ ಹಾಗೂ ತೆಲಂಗಾಣದ ನಾರಾಯಣಖೇಡ ಡಿವೈಎಸ್ಪಿ ವೆಂಕಟ ರೆಡ್ಡಿ ಅವರು, ಭವಿಷ್ಯದಲ್ಲಿ ಅಪರಾಧ ನಿಯಂತ್ರಣಕ್ಕಾಗಿ ಇನ್ನಷ್ಟು ಪರಿಣಾಮಕಾರಿ ಸಮನ್ವಯ ವ್ಯವಸ್ಥೆಯನ್ನು ರೂಪಿಸುವ ಕುರಿತು ಹಲವು ಉಪಯುಕ್ತ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಸಿಪಿಐ ರುದ್ರವೀರಸಿಂಗ್ ಠಾಕೂರ್, ಕಮಲನಗರ ಸಿಪಿಐ ಶ್ರೀಕಾಂತ ಅಲ್ಲಾಪುರೆ, ಮೇಹೆಕರ್ ಪಿಎಸ್ ಐ ಸುದರ್ಶನ ರಡ್ಡಿ, ಸಂತಪುರ ಪಿಎಸ್ಐ ದಿನೇಶ್ ಎಂ.ಟಿ., ಕಮಲನಗರ ಪಿಎಸ್ ಐ ಆಶಾ ರಾಠೋಡ್, ಹೊಕ್ರಣಾ ಪಿಎಸ್ಐ ಉಷಾಬಾಯಿ, ಉದಗೀರ ಎಸ್ಡಿಪಿಒ ಟಿ.ಎಂ. ಮಮಕಾರ, ಬೀದರ್ ಗ್ರಾಮೀಣ ಪೊಲೀಸ್ ಠಾಣೆಯ ಮಹೇಶ ಪಾಟೀಲ್ ಸೇರಿದಂತೆ ಗಡಿ ರಾಜ್ಯಗಳ ಪೊಲೀಸ್ ಅಧಿಕಾರಿಗಳಾದ ಎಚ್.ಪಿ.ಬಾಗಾರ, ಪಿ.ಎ. ಗರ್ಜೆ, ಎ.ಪಿ. ಕೊಡವಾದ, ಆರ್.ಎಂ.ಹುಂಡೇಕರ, ಆರ್.ಜಿ. ಚವ್ಹಾಣ್, ಡಿ.ಡಿ. ಗಡೆ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


