- ಡಾ.ವಡ್ಡಗೆರೆ ನಾಗರಾಜಯ್ಯ
“ವೀರಶೈವ– ಲಿಂಗಾಯತರು” ಎಂದು ವಿಚಿತ್ರ ಜಾತಿಯ ಹೆಸರನ್ನು ಘೋಷಿಸುವ ವಿದ್ಯಮಾನ ಸಂಭವಿಸಿರುವುದು ನನ್ನಲ್ಲಿ ಆಶ್ಚರ್ಯವನ್ನುಂಟುಮಾಡಿದೆ. ಇಂತಹ ಜಾತಿ ಹಿಂದೆಂದೂ ಅಸ್ತಿತ್ವದಲ್ಲಿ ಇರಲಿಲ್ಲ. ಈಗಲೂ ಅಸ್ತಿತ್ವದಲ್ಲಿರದ “ವೀರಶೈವ ಲಿಂಗಾಯತ” ಎಂಬ ಹೆಸರಿನ ಹೊಸ ಜಾತಿಯನ್ನು ಏಕೆ ಘೋಷಿಸಿಕೊಂಡರೋ ತಿಳಿಯದು. ಹೀಗೊಂದು ಹೊಸ ಜಾತಿ ಹುಟ್ಟು ಪಡೆಯಲು ಸಾಧ್ಯವೇ? ಲಿಂಗಾಯತರೇ ಬೇರೆ, ವೀರಶೈವರೇ ಬೇರೆ. ಇಬ್ಬರೂ ಒಬ್ಬರೇ ಹೇಗಾಲು ಸಾಧ್ಯ?
ಲಿಂಗಾಯತ ಧರ್ಮವನ್ನು ಸಾಂಸ್ಥೀಕರಣಗೊಳಿಸಿ ಜಾತಿಯ ಹಂತಕ್ಕೆ ಕುಗ್ಗಿಸಿದ್ದು ವೀರಶೈವರು. ಲಿಂಗಾಯತ ಎಂಬ ಪದ ಬಸವಣ್ಣನಿಗೂ ಪೂರ್ವದ್ದು. ಲಿಂಗಾಯತವನ್ನು ಧರ್ಮವನ್ನಾಗಿ ಸ್ಥಾಪಿಸಿದ್ದು, ಬೆಳಗಿದ್ದು ಮತ್ತು ಬೆಳೆಸಿದ್ದು ಮಾತ್ರ ಬಸವಣ್ಣ. ಕನ್ನಡಿಗರೇ ರೂಪಿಸಿದ ಲಿಂಗಾಯತ ಧರ್ಮಕ್ಕೆ ಹೊರಗಿನ ಆಂಧ್ರಪ್ರದೇಶ ಮೂಲದಿಂದ ಬಂದ ತೆಲುಗುಬಾಳು ಆರಾಧ್ಯ ಜಂಗಮರು, ಸಂಸ್ಕೃತ ಭಾಷೆ– ಪಂಚಾಂಗ– ಜ್ಯೋತಿಷ್ಯ– ಸಂಸ್ಕೃತ ಭಾಷೆಯ ‘ಶಿದ್ಧಾಂತ ಶಿಖಾಮಣಿ‘ ಕೃತಿ ಮುಂತಾದವುಗಳನ್ನು ಹೇರುವ ಮೂಲಕ ಲಿಂಗಾಯತವನ್ನು ಸ್ವತಂತ್ರ ಧರ್ಮವಾಗದಂತೆ ನೋಡಿಕೊಂಡರು.
ವೀರಶೈವರು ಬಸವಣ್ಣನನ್ನು ಗುರುವೆಂದು ಎಂದಿಗೂ ಒಪ್ಪಿದವರಲ್ಲ. ತೀರಾ ಇತ್ತೀಚಿನವರೆಗೂ ವೀರಶೈವ ಪಂಚಾಚಾರ್ಯರ ಮನೆಗಳಲ್ಲಾಗಲೀ, ಮಠಗಳಲ್ಲಾಗಲೀ ಬಸವಣ್ಣನ ಫೋಟೋ ಕೂಡಾ ಇರಿಸಿಕೊಂಡವರಲ್ಲ. ಅವರಿಗೆ ಬಸವಣ್ಣನಿಗಿಂತಲೂ ರೇಣುಕಾಚಾರ್ಯನೇ ಪರಮ ಶ್ರೇಷ್ಠ ಗುರು. ಈಗಲೂ ಲಿಂಗಾಯತರ ಪ್ರತ್ಯೇಕ ಧರ್ಮದ ಗುರುತಿನ ಹೋರಾಟಕ್ಕೆ ದೊಡ್ಡ ಅಡ್ಡಿಯಾಗಿರುವವರೆಂದರೆ ಇದೇ ಪಂಚಾಚಾರ್ಯರ ವೀರಶೈವರು.
ಕೆಲವೇ ಖೊಟ್ಟಿ ಪ್ರಕ್ಷಿಪ್ತ ವಚನಗಳನ್ನು ಹೊರತುಪಡಿಸಿದರೆ, ವೀರಶೈವ ಎಂಬ ಶಬ್ದವು ನಮಗೆ ತಿಳಿಯುವುದು ಹದಿನಾಲ್ಕನೇ ಶತಮಾನದಿಂದೀಚೆಗೆ. ವೀರಶೈವವು ಲಿಂಗಾಯತ ಧರ್ಮವನ್ನು ಖಿಲಗೊಳಿಸಿದ್ದು ಈ ಬಗೆಯಲ್ಲಿ. ಲಿಂಗಾಯತರಿಗೆ ಕನ್ನಡದ ವಚನಗಳು ಶ್ರೇಷ್ಢವಾದರೆ, ವೀರಶೈವರಿಗೆ ಸಂಸ್ಕೃತದ ಶಿದ್ಧಾಂತ ಶಿಖಾಮಣಿಯೇ ಶ್ರೇಷ್ಠ ಗ್ರಂಥ. ಲಿಂಗಾಯತರಿಗೆ ಬಹುತ್ವದ ಮತ್ತು ನಿಜ ಹುಟ್ಟಿನ ಶರಣರು ಶ್ರೇಷ್ಢರಾದರೆ, ವೀರಶೈವರಿಗೆ ಅಯೋನಿಜ ಮತ್ತು ಪುರಾಣಿಮ ಪಂಚಾಚಾರ್ಯರು ಮಾತ್ರ ಶ್ರೇಷ್ಠ. ಇದನ್ನು ನಾವು ಅರ್ಥಮಾಡಿಕೊಂಡು ಕೇಳಬೇಕಿರುವ ಅಸಲಿ ಪ್ರಶ್ನೆ : ಯಾವತ್ತಿಗೂ ಅಸ್ತಿತ್ವದಲ್ಲಿರದಿದ್ದ
“ವೀರಶೈವ ಲಿಂಗಾಯತ” ಎಂಬ ಹೆಸರಿನ ಹೊಸ ಜಾತಿಯನ್ನು ಹುಟ್ಟಿ ಹಾಕಿರುವ ರಾಜಕೀಯದ ಹಿಂದಿನ ಮರ್ಮವೇನು?
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5