ಮಧುಗಿರಿ: ತಾಲ್ಲೂಕು ಆಸ್ಪತ್ರೆಯಲ್ಲಿ ನಿರಂತರವಾಗಿ ಲಂಚದ ಹಣಕ್ಕಾಗಿ ನಡೆಯುತ್ತಿರುವ ನಕಲಿ ವಯಸ್ಸಿನ ದೃಢೀಕರಣ ಪತ್ರ ಮತ್ತು ಅಂಗವಿಕಲ ದೃಡೀಕರಣ ಪತ್ರ ನೀಡುತ್ತಿರುವ ಬಗ್ಗೆ ಈ ದಿನ ಮಧುಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಠಾಣಾಧಿಕಾರಿಗಳು FIR ದಾಖಲಿಸುವ ಭರವಸೆ ನೀಡಿದ್ದಾರೆ ಒಂದು ವೇಳೆ FIR ದಾಖಲಿಸದಿದ್ದಲ್ಲಿ ಮುಂದಿನ ಕಾನೂನು ಹೋರಾಟ ಮುಂದುವರೆಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಹಂದ್ರಾಳ್ ನಾಗಭೂಷಣ್ ಹೇಳಿದ್ದಾರೆ.
ಮಧುಗಿರಿ ಪಟ್ಟಣದ ಲಿಂಗೇನಹಳ್ಳಿ ಬಡಾವಣೆಯ ಹನುಮಂತರಾಯಪ್ಪ ಎಂಬುವರು 2018 ರಲ್ಲಿ ಮರಣ ಹೊಂದಿದ್ದು, ಇವರ ಮಗನಾದ ಮಹೇಶ್ ಎಂಬುವರು ಮೊದಲಿನಿಂದಲೂ ಹೋರಾಟದ ಮನೋಭಾವ ಹೊಂದಿರುವ ಪ್ರಜ್ಞಾವಂತ ನಾಗರಿಕರಾಗಿದ್ದು, ಇಂತಹ ಅಕ್ರಮ ಎಸಗಿರುವವರಿಗೆ ಪಾಠ ಕಲಿಸಬೇಕೆಂಬ ಉದ್ದೇಶದಿಂದ ಸದರಿ ತಾಲ್ಲೂಕು ಆಸ್ಪತ್ರೆಯ ನೌಕರನೆಂದು ಹೇಳಿಕೊಳ್ಳುವ ರಾಜಣ್ಣ ಎಂಬುವ ವ್ಯಕ್ತಿಯನ್ನು ಸಂಪರ್ಕಿಸಿದಾಗ ಸದರಿ ರಾಜಣ್ಣ 5,000 ರೂ. ಹಾಗೂ ಆಧಾರ್ ಕಾರ್ಡ್ ನೀಡಿ ನಿಮ್ಮ ತಂದೆಯವರ ವಯಸ್ಸಿನ ದೃಡೀಕರಣ ಪತ್ರ ಮಾಡಿಸಿ ಕೊಡುತ್ತೇನೆಂದು ತಿಳಿಸಿರುತ್ತಾರೆ.
ಅದರಂತೆ ಒಟ್ಟು ಹತ್ತು ಸಾವಿರ ಹಣ ನೀಡಿ ಪ್ರತ್ಯೇಕವಾಗಿ ಎರಡು ಬಾರಿ ಸತ್ತ ಮಹೇಶ್ ತಂದೆಯ ಹೆಸರಿಗೆ ವಯಸ್ಸಿನ ದೃಢೀಕರಣ ಪತ್ರವನ್ನು ಇಬ್ಬರು ವೈದ್ಯರ ಸಹಿಯೊಂದಿಗೆ ಹಾಗೂ ಕಛೇರಿ ಮೊಹರಿನೊಂದಿಗೆ ಪಡೆದಿರುತ್ತಾರೆ. ಇದರಲ್ಲಿ ಬಹು ಮುಖ್ಯವಾಗಿ ಗಮನಿಸಬೇಕಾದ ಮುಖ್ಯ ವಿಷಯವೇನೆಂದರೆ, ಈ ಹಿಂದೆ ಹೋರಾಟಗಾರನಾದ ನಾನು ಇದೇ ತಾಲ್ಲೂಕು ಆಸ್ಪತ್ರೆಯಲ್ಲಿ ದೃಡೀಕರಣ ಪತ್ರ ನೀಡಲು ಹಣ ಪಡೆದು ನೀಡುತ್ತಿದ್ದಾರೆಂಬ ಆರೋಪ ಹೊರಿಸಿ ತುಮಕೂರು DHO ರವರಿಗೆ ದೂರು ನೀಡಿದ ಮೇರೆಗೆ ಅಂದಿನ DHO ರವರು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಿಂದ ವಿಚಾರಣೆಗೆ ನಿರ್ದೇಶಿದಾಗ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಆಡಳಿತ ವೈದ್ಯಾಧಿಕಾರಿ ಗಂಗಾಧರ್, ಡಾ:ಪುರುಷೋತ್ತಮ್, ಡಾ:ಮಹೇಶ್ ಸಿಂಗ್, ಡಾ: ರತ್ನಾವತಿ ಎಂಬುವರನ್ನು ವಿಚಾರಣೆಗೆ ಒಳ ಪಡಿಸಿ ಸದರಿ ಆಸ್ಪತ್ರೆಯಲ್ಲಿನ ಮದ್ಯವರ್ತಿಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ಆಡಳಿತ ವೈದ್ಯಾಧಿಕಾರಿಗೆ ಎಚ್ಚರಿಕೆ ನೀಡಲಾಗಿತ್ತು ಆದರೆ ಇಲ್ಲಿನ ಆಸ್ಪತ್ರೆಯ ವೈದ್ಯರುಗಳು ಹಳೆಯ ಚಾಳಿ ಮುಂದುವರೆಸಿದ್ದರು ಎಂದು ಹೇಳಲಾಗಿದೆ ಎಂದು ಹಂದ್ರಾಳ್ ನಾಗಭೂಷಣ್ ತಿಳಿಸಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy