ಮಧುಗಿರಿ: ಪ್ರತಿ ವ್ಯಕ್ತಿಯ ಬದುಕು ಉಜ್ವಲವಾಗಲು ಶಿಕ್ಷಣ ಅತ್ಯಂತ ಪ್ರಮುಖವಾದ ಅಸ್ತ್ರವಾಗಿದೆ ಎಂದು ಶಾಸಕ ಕೆ.ಎನ್. ರಾಜಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ವತಿಯಿಂದ ಆಯೋಜಿಸಲಾಗಿದ್ದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ಕನ್ನಡ ಭಾಷೆಯಲ್ಲಿ ಶೇ. 100 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದವರಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕನ್ನಡ ವಿಷಯದಲ್ಲಿ ಶೇ. 100 ರಷ್ಟು ಅಂಕ ಗಳಿಸುವುದು ಸಾಮಾನ್ಯದ ಮಾತಲ್ಲ. ವಿದ್ಯಾರ್ಥಿಗಳು ಸ್ವಚ್ಛ ಹಾಗೂ ವ್ಯಾಕರಣಬದ್ಧವಾಗಿ ಕನ್ನಡ ಬರೆಯುವುದನ್ನು ಮತ್ತು ಮಾತನಾಡುವುದನ್ನು ಕಲಿಯಬೇಕು. ಶಿಕ್ಷಣದ ಜೊತೆಗೆ ಮೌಲ್ಯಯುತ ಜ್ಞಾನ ಹಾಗೂ ಗುರು-ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
“ವಿದ್ಯೆ ಯಾರಪ್ಪನ ಸ್ವತ್ತಲ್ಲ, ಅದು ಸಾಧಕರ ಸ್ವತ್ತು. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಅವರು ದೇಶದ ಆಸ್ತಿಯಾಗುತ್ತಾರೆ, ಇಲ್ಲದಿದ್ದರೆ ಸಮಾಜಕ್ಕೆ ಹೊರೆಯಾಗುತ್ತಾರೆ. ಬೇರೆ ಭಾಷೆಗಳನ್ನು ಕಲಿಯಲು ನಮ್ಮ ಅಭ್ಯಂತರವಿಲ್ಲ, ಆದರೆ ಕನ್ನಡಕ್ಕೆ ನಮ್ಮ ಬದುಕಿನಲ್ಲಿ ಯಾವಾಗಲೂ ಮಾತೃ ಸ್ಥಾನವೇ ಮೀಸಲಿರಬೇಕು.”
– ಕೆ.ಎನ್. ರಾಜಣ್ಣ, ಶಾಸಕರು
ಇಂದು ದೇಶದಲ್ಲಿ 140 ಕೋಟಿ ಜನಸಂಖ್ಯೆಯಿದ್ದು, ತೀವ್ರ ಸ್ಪರ್ಧೆಯಿದೆ. ವಿದ್ಯಾರ್ಥಿಗಳು ಎಷ್ಟು ಪರಿಶ್ರಮದಿಂದ ಕಲಿಯುತ್ತಾರೋ ಅಷ್ಟು ಉತ್ತಮ ಸ್ಥಾನ ಮಾನ ಸಿಗಲಿದೆ. ನಮ್ಮ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಎಲ್ಲ ರೀತಿಯ ಅವಕಾಶಗಳಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಂಗಪ್ಪ ಮೇಷ್ಟ್ರು ಮಾತನಾಡಿ, ಮೆಟ್ರಿಕ್ ಹಾಗೂ ಪಿಯುಸಿಯಲ್ಲಿ ಕನ್ನಡದಲ್ಲಿ ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳಿಂದಲೇ ಕನ್ನಡದ ಬೇರುಗಳು ಇಂದಿಗೂ ಸಜೀವವಾಗಿವೆ. ಭಾಷಾ ಸೇವೆಯ ವಿಚಾರದಲ್ಲಿ ಶಾಸಕ ಕೆ.ಎನ್. ರಾಜಣ್ಣ (ಕೆಎನ್ಆರ್) ಅವರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.
7ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೆ.ಪಿ. ನಟರಾಜು ಮಾತನಾಡಿ, ಕೆಪಿಎಸ್ ಶಾಲೆಗಳಿಂದ ಕನ್ನಡ ಕಲಿಕೆಗೆ ಸಮಸ್ಯೆಯಾಗುತ್ತಿದ್ದು, ಕನ್ನಡವನ್ನೇ ಪ್ರಧಾನ ಭಾಷೆಯಾಗಿ ಕಲಿಸಬೇಕಿದೆ. ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ನಿರ್ಲಕ್ಷಿಸುತ್ತಿರುವುದರಿಂದ ಶೇ. 35 ರಷ್ಟಿರುವ ಆಂಗ್ಲ ಮಾಧ್ಯಮದ ಮಕ್ಕಳ ಪಾಲಿಗೆ ಉನ್ನತ ಶಿಕ್ಷಣದ ಸೀಟುಗಳು ದಕ್ಕುತ್ತಿವೆ. ಈ ಬಗ್ಗೆ ಸರ್ಕಾರ ಮತ್ತು ರಾಜಕೀಯ ಪಕ್ಷಗಳ ಮೌನ ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು.
ಇಂದಿನ ದಿನಗಳಲ್ಲಿ ಅಪಭ್ರಂಶ (ತಪ್ಪುಗಳು) ಇಲ್ಲದೆ ಕನ್ನಡವನ್ನು ಮಾತನಾಡುವ, ಓದುವ ಮತ್ತು ಬರೆಯುವ ಮಕ್ಕಳ ಸಂಖ್ಯೆ ತೀರಾ ವಿರಳವಾಗಿದೆ. ಹಾಗಾಗಿ ಕೇವಲ ‘ಸಿರಿ ಗನ್ನಡಂ ಗೆಲ್ಗೆ’ ಎನ್ನುವುದಕ್ಕಿಂತ, ಭಾಷೆಯನ್ನು ಸರಿಯಾಗಿ ಬಳಸುವ ‘ಸರಿ ಕನ್ನಡಂ ಗೆಲ್ಗೆ’ ಮಾದರಿಯ ಶಿಕ್ಷಣದ ಅಗತ್ಯವಿದೆ. ಕನ್ನಡಿಗರು ಹಾಗೂ ಸರ್ಕಾರ ಕನ್ನಡ ಭಾಷಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಹಿರಿಯ ಸಾಹಿತಿ ಪ್ರೊ. ಮಲನ ಮೂರ್ತಿ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಸಿ ಗೊಟೂರು ಶಿವಪ್ಪ, ತಹಶೀಲ್ದಾರ್ ನಂದಿನಿ, ತಾ.ಪಂ ಇಓ ಉತ್ತಮ್, ಎಡಿ ಧನಂಜಯ್, ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ರಮೇಶ್, ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಪದಾಧಿಕಾರಿಗಳಾದ ರಂಗಧಾಮಯ್ಯ, ಶಂಕರನಾರಾಯಣ, ಜಗದೀಶ್, ಮಹಾಲಿಂಗೇಶ್, ಕರಿಯಣ್ಣ, ಕೆ.ನಾರಾಯಣ್, ಪಿ.ಕೆ.ರಂಗಸ್ವಾಮಿ, ಗಂಗಾಧರ್, ವೀಣಾ ಶ್ರೀನಿವಾಸ್, ಉಮಾ ಮಲ್ಲೇಶ್, ಲಲಿತಾಂಬ ಲಕ್ಷ್ಮೀನರಸಯ್ಯ, ಗಾಯತ್ರಿ ನಾರಾಯಣ್ ಸೇರಿದಂತೆ ಹಲವು ಪ್ರಮುಖರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


