- ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ: ಒಂದು ಕಾಲದಲ್ಲಿ ಕೇವಲ ಒಲೆ ಉರಿಸುವ ಉರುವಲಿಗೆ ಅಥವಾ ಕಸವೆಂದು ಎಸೆಯಲ್ಪಡುತ್ತಿದ್ದ ಕೊಬ್ಬರಿ ಚಿಪ್ಪಿಗೆ (ಕರಟ) ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಎಳನೀರು ಹಾಗೂ ತೆಂಗಿನಕಾಯಿ ದರ ಏರಿಕೆಯ ಬೆನ್ನಲ್ಲೇ ಕೊಬ್ಬರಿ ಚಿಪ್ಪಿನ ಬೆಲೆಯೂ ಗಗನಕ್ಕೇರಿದ್ದು, ಸಾವಿರ ಚಿಪ್ಪಿಗೆ ಬರೋಬ್ಬರಿ ₹4,500 ವರೆಗೆ ದರ ಸಿಗುವ ಮೂಲಕ ಕಲ್ಪತರು ನಾಡಿನ ರೈತರ ಕೈ ಹಿಡಿದಿದೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆ ಹೋಬಳಿಯ ರೈತರೊಬ್ಬರು ತೆಂಗಿನಕಾಯಿ ಚಿಪ್ಪಿನಿಂದಲೇ ಬಂಪರ್ ಲಾಭ ಪಡೆದು ಇಡೀ ರಾಜ್ಯದ ಗಮನ ಸೆಳೆದಿದ್ದಾರೆ. ಇದ್ದಕ್ಕಿದ್ದಂತೆ ಕರಟದ ಬೆಲೆ ದುಪ್ಪಟ್ಟಾಗಿರುವುದು ತೆಂಗು ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ.
₹27 ಸಾವಿರಕ್ಕೆ ಮಾರಾಟವಾದ 6 ಸಾವಿರ ಚಿಪ್ಪು!
ಜಿಲ್ಲೆಯ ರೈತರಾದ ಟಿ.ಎಸ್. ಲೋಕೇಶ್ ಅವರು ತಮ್ಮ ತೋಟದ 6 ಸಾವಿರ ಕೊಬ್ಬರಿ ಚಿಪ್ಪುಗಳನ್ನು ಬರೋಬ್ಬರಿ ₹27 ಸಾವಿರಕ್ಕೆ ಮಾರಾಟ ಮಾಡಿ ಭರ್ಜರಿ ಲಾಭ ಗಳಿಸಿದ್ದಾರೆ. ಜಿಲ್ಲೆಯ ಇತಿಹಾಸದಲ್ಲೇ ಇಷ್ಟು ಹೆಚ್ಚಿನ ದರಕ್ಕೆ ಕೊಬ್ಬರಿ ಚಿಪ್ಪು ಮಾರಾಟವಾಗಿರುವುದು ಇದೇ ಮೊದಲು ಎನ್ನಲಾಗಿದೆ.
“ಸಂಖ್ಯೆಯ ಆಧಾರದ ಮೇಲೆ ಮಾರಾಟ ಮಾಡಿದರೆ ಪ್ರತಿ ಚಿಪ್ಪಿಗೆ ಸುಮಾರು ₹4.50 ಸಿಗುತ್ತಿದೆ. ಅದೇ ತೂಕದ ಲೆಕ್ಕದಲ್ಲಾದರೆ ವ್ಯಾಪಾರಿಗಳು ಕ್ವಿಂಟಲ್ಗೆ ₹3,600 ದರ ನೀಡುತ್ತಿದ್ದಾರೆ. ಹಿಂದೆ ಯಾವುದೇ ಮೌಲ್ಯವಿಲ್ಲದ ವಸ್ತುವಾಗಿದ್ದ ಕೊಬ್ಬರಿ ಚಿಪ್ಪು ಇಂದು ನಮಗೆ ಕೈತುಂಬಾ ಹೆಚ್ಚುವರಿ ಆದಾಯ ತಂದುಕೊಡುತ್ತಿದೆ” ಎಂದು ಹರ್ಷ ವ್ಯಕ್ತಪಡಿಸುತ್ತಾರೆ ರೈತ ಲೋಕೇಶ್.
ಬೆಲೆ ಏರಿಕೆಗೆ ಕಾರಣವೇನು?
ಕಡಿಮೆಯಾದ ಪೂರೈಕೆ: ನೆರೆರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನಲ್ಲಿ ಕೊಬ್ಬರಿ ಚಿಪ್ಪಿನ ಉತ್ಪಾದನೆ ಗಣನೀಯವಾಗಿ ಕುಸಿದಿದೆ.
ಎಳನೀರಿಗೆ ಆದ್ಯತೆ: ಮಾರುಕಟ್ಟೆಯಲ್ಲಿ ಎಳನೀರು ಮತ್ತು ಹಸಿ ತೆಂಗಿನಕಾಯಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ, ರೈತರು ಕೊಬ್ಬರಿ ಮಾಡುವತ್ತ ಕಡಿಮೆ ಆಸಕ್ತಿ ತೋರುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆಗೆ ಬರುವ ಕರಟದ ಪ್ರಮಾಣ ತೀವ್ರವಾಗಿ ಕಡಿಮೆಯಾಗಿದೆ.
“ಹಿಂದೆ ವಾರಕ್ಕೆ ಒಂದು ಟನ್ ಚಿಪ್ಪು ಖರೀದಿಸುತ್ತಿದ್ದೆವು. ಆದರೆ ಈಗ ತಿಂಗಳಿಗೆ ಒಂದು ಟನ್ ಚಿಪ್ಪು ಸಿಗುವುದೂ ಕಷ್ಟವಾಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದರೂ ಪೂರೈಕೆ ಇಲ್ಲದ ಕಾರಣ ಬೆಲೆ ಏರಿಕೆಯಾಗುತ್ತಿದೆ” ಎನ್ನುತ್ತಾರೆ ಜೋನಿಗರಹಳ್ಳಿಯ ಚಿಪ್ಪು ಖರೀದಿದಾರ ಪ್ರಸಾದ್.
ಕೈಗಾರಿಕೆಗಳಲ್ಲಿ ಕರಟಕ್ಕೆ ಭಾರೀ ಡಿಮ್ಯಾಂಡ್
ಕೊಬ್ಬರಿ ಚಿಪ್ಪನ್ನು ಕೇವಲ ಉರುವಲಾಗಿ ಬಳಸುತ್ತಿಲ್ಲ, ಬದಲಿಗೆ ಇದೀಗ ಹಲವು ಪ್ರಮುಖ ಕೈಗಾರಿಕಾ ಉತ್ಪನ್ನಗಳ ತಯಾರಿಕೆಗೆ ಕಚ್ಚಾವಸ್ತುವಾಗಿ ಬಳಸಲಾಗುತ್ತಿದೆ:
- ಆಕ್ಟಿವೇಟೆಡ್ ಕಾರ್ಬನ್ (ಸಕ್ರಿಯ ಕಾರ್ಬನ್)
- ನೀರು ಶುದ್ಧೀಕರಣ ಫಿಲ್ಟರ್ಗಳು (Water Purification Filters)
- ಸೌಂದರ್ಯವರ್ಧಕ ಉತ್ಪನ್ನಗಳು (Cosmetics)
- ಕರಟದ ಎಣ್ಣೆ ಮತ್ತು ಉತ್ತಮ ಗುಣಮಟ್ಟದ ಇದ್ದಿಲು
ತುಮಕೂರಿನ ಸಂಸ್ಕರಣಾ ಘಟಕಗಳಲ್ಲಿ ಈ ಚಿಪ್ಪನ್ನು ಇದ್ದಿಲಾಗಿ ಪರಿವರ್ತಿಸಿ ಹೊರರಾಜ್ಯಗಳಿಗೆ ಹಾಗೂ ಅಲ್ಲಿಂದ ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಸದ್ಯದ ಮಾರುಕಟ್ಟೆ ಸ್ಥಿತಿಗತಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಕೊಬ್ಬರಿ ಚಿಪ್ಪಿನ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಒಟ್ಟಿನಲ್ಲಿ, ಕಸವೆಂದು ಮೂಲೆಗೆ ತಳ್ಳುತ್ತಿದ್ದ ಕರಟ ಇಂದು ರೈತರ ಪಾಲಿಗೆ ‘ಕಾಂಚಾಣ’ ತರುತ್ತಿರುವುದು ತೆಂಗು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


